ಪುಷ್ಪಾ ಸಿನಿಮಾದ ಮೂಲಕ ಸಾಕಷ್ಟು ಸದ್ದು ಮಾಡಿದ್ದ ತೆಲುಗಿನ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀಸ್ ಮೇಲೆ 15ಕ್ಕೂ ಹೆಚ್ಚು ಕಡೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದೆ. ಹಲವು ಗಂಟೆಗಳ ಕಾಲ ಶೋಧ ಕಾರ್ಯ ಕೂಡ ನಡೆಸಿದೆ. ನವೀನ್ ಅರ್ನೇನಿ, ಚೆರುಕುರಿ, ಯಲಮಂಚಿಲಿ ರವಿಶಂಕರ್ ಹಾಗೂ ಅವರುಗಳ ಕಚೇರಿಗಳ ಮೇಲೆ ಸತತ ಹಲವು ಗಂಟೆಗಳ ಕಾಲ ಅಧಿಕಾರಿಗಳು ಶೋಧ ಕಾರ್ಯ ಮಾಡಿದ್ದಾರೆ. ಅಧಿಕಾರಿಗಳು ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ರಂಗಸ್ಥಳಂ, ಶ್ರೀಮಂತುಡು ಸೇರಿದಂತೆ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಸಂಸ್ಥೆ ಇದಾಗಿದ್ದು, ಪುಷ್ಪಾ ಸಿನಿಮಾದ ಮೂಲಕ ಮತ್ತೊಂದು ಸಾಕಷ್ಟು ಸದ್ದು ಮಾಡಿದ್ದರು. ಅವರು ಪುಷ್ಪಾ 2 ಸಿನಿಮಾ ಕೂಡ ಚಿತ್ರೀಕರಣದಲ್ಲಿ ತೊಡಗಿದ್ದು, ಭಾರೀ ಮೊತ್ತದಲ್ಲೇ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೇ ಇನ್ನೂ ಹಲವು ಸಿನಿಮಾಗಳನ್ನೂ ಅದು ಘೋಷಣೆ ಮಾಡಿದೆ. ಇದನ್ನೂ ಓದಿ: ಕೊನೆಗೂ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ರಾಮ್ ಚರಣ್ ದಂಪತಿ
ಇತ್ತೀಚಿನ ದಿನಗಳಲ್ಲಿ ವಿಜಯ್ ದೇವರಕೊಂಡ, ಚಿರಂಜೀವಿ, ಬಾಲಕೃಷ್ಣ, ಪವನ್ ಕಲ್ಯಾಣ್ ಸೇರಿದಂತೆ ಹಲವು ಸೂಪರ್ ಸ್ಟಾರ್ ಸಿನಿಮಾಗಳ ಘೋಷಣೆ ಮಾಡಿತ್ತು ಮೈತ್ರಿ ಮೂವೀಸ್. ಜೊತೆಗೆ ಸಂಭಾವನೆ ರೂಪದಲ್ಲಿ ಭಾರೀ ಮೊತ್ತದ ಹಣವನ್ನೇ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಘೋಷಿಸಿರುವ ಚಿತ್ರಗಳ ಬಜೆಟ್ ಕೂಡ ಅಚ್ಚರಿ ಮೂಡಿಸುವಂತಿವೆ. ಈ ಕಾರಣದಿಂದಾಗಿಯೇ ಆದಾಯ ತೆರಿಗೆ ಅಧಿಕಾರಿಗಳು ಬೆಳ್ಳಂಬೆಳಗ್ಗೆ ನಿರ್ಮಾಣ ಸಂಸ್ಥೆಯ ಪಾಲುದಾರರ ಕಚೇರಿ ಮತ್ತು ಮನೆ ಮೇಲೆ ದಾಳಿ ಮಾಡಿದ್ದಾರೆ.