ಚಿಕ್ಕಬಳ್ಳಾಪುರ: ನಮಗೆ ಕಿರುಕುಳ ನೀಡಲು ಉದ್ದೇಶಪೂರ್ವಕವಾಗಿಯೇ ಐಟಿ ದಾಳಿ ನಡೆಸಲಾಗಿದೆ ಎಂದು ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪ ಸೋದರ ಅಳಿಯ ಜಿ.ಎಚ್.ನಾಗರಾಜ್ ಆರೋಪಿಸಿದ್ದಾರೆ.
ಐಟಿ ದಾಳಿ ಬಳಿಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಜಿ.ಎಚ್.ನಾಗರಾಜ್, ನಮ್ಮ ಮನೆಯಲ್ಲಿ ಸಿಕ್ಕಿರುವುದು 12 ಲಕ್ಷ ರೂ. ಹಣ. ಅದರಲ್ಲಿ ಅಕೌಂಟ್ ಸರಿಯಾಗಿ ನಿರ್ವಹಿಸಿಲ್ಲ ಎಂದು 10 ಲಕ್ಷ ರೂ. ಹಣವನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ. ಅದನ್ನು ಹೊರತು ಪಡಿಸಿದರೆ ಬೇರೇನೂ ಇಲ್ಲ. ನಮ್ಮ ಮನೆಯ ಮೇಲೆ ನಡೆಯುತ್ತಿರುವ ಮೂರನೇ ದಾಳಿ ಇದಾಗಿದೆ ಎಂದರು.
ಈ ಐಟಿ ದಾಳಿ ಬೇಕಂತಲೇ ನಮಗೆ ಕಿರುಕುಳ ನೀಡುಲು ನಡೆಸಿದ್ದಾರೆ. ಸಣ್ಣ ವಿಷಯವನ್ನ ಕೇವಲ ಒಂದು ದಿನದಲ್ಲಿ ಮುಗಿಯಬೇಕಾದ ಐಟಿ ವಿಚಾರಣೆಯನ್ನ ಮೂರು ದಿನಗಳ ಕಾಲ ಕೇಳಿದ್ದನ್ನೇ ಕೇಳಿ-ಕೇಳಿ, ಕೆದಕಿ-ಕೆದಕಿ ವಿಚಾರಣೆ ನಡೆಸಿದರು ಎಂದು ಐಟಿ ಅಧಿಕಾರಿಗಳ ಕಾರ್ಯವೈಖರಿಗೆ ಜಿ.ಎಚ್.ನಾಗರಾಜ್ ಅಸಮಾಧಾನ ಹೊರಹಾಕಿದರು.
ಐಟಿ ಅಧಿಕಾರಿಗಳ ವಿಚಾರಣೆಗೆ ನಾನು ಸಂಪೂರ್ಣ ಸಹಕಾರ ನೀಡಿದ್ದು, ನಮ್ಮ ಮನೆ ಹಾಗೂ ಆಸ್ಪತ್ರೆಯಲ್ಲಿ ಏನೂ ಸಿಕ್ಕಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಇದೇ ತಿಂಗಳ 15 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದರು.
ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಸುದ್ದಿ ಕೇಳಿ ಅಘಾತ ವ್ಯಕ್ತಪಡಿಸಿದ ಜಿ.ಎಚ್.ನಾಗರಾಜ್, ಇದೊಂದು ಹೇಯಕೃತ್ಯ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಸಂತಾಪ ಸೂಚಿಸಿದರು. ಅಲ್ಲದೇ ಮಾಜಿ ಸಚಿವ ಡಿಕೆ ಶಿವಕುಮಾರ್ ಅದ್ಯಾವ ರೀತಿ ಇವರ ದಾಳಿ ತಡೆದಯಕೊಂಡರೋ ಎಂದು ಅಚ್ಚರಿ ವ್ಯಕ್ತಪಡಿಸಿದರು.
https://www.youtube.com/watch?v=h8eKCo5zXfI