ಬೆಂಗಳೂರು: ಇಂಧನ ಸಚಿವ ಡಿಕೆ ಶಿವಕುಮಾರ್ ಆಪ್ತರು ಸೇರಿದಂತೆ 12 ಮಂದಿಯ ಮನೆ ಮೇಲೆ ಮತ್ತೆ ಇಂದು ಐಟಿ ದಾಳಿ ನಡೆದಿದೆ.
ಬೆಂಗಳೂರು, ದೆಹಲಿ, ಚೆನ್ನೈ ಸೇರಿದಂತೆ 12 ಕಡೆ ಆದಾಯ ತೆರಿಗೆ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಡಿಕೆಶಿ ಪರಮಾಪ್ತ ವಿಜಯ್ ಮುಳುಗುಂದ, ಆಪ್ತ ಕಾರ್ಯದರ್ಶಿ ಶ್ರೀಧರ್ ಮನೆ ಮೇಲೆ ದಾಳಿ ನಡೆದಿದೆ.
ಡಿಕೆಶಿ ನಂಬಿಕಸ್ತ ಭಂಟ ಕೆಪಿಸಿಸಿ ಕಾರ್ಯದರ್ಶಿ ವಿಜಯ್ ಮುಳುಗುಂದ. ಡಿಕೆಶಿ-ಮುಳಗುಂದ ಇಬ್ಬರಿಗೂ 19 ವರ್ಷಗಳ ಸುದೀರ್ಘ ಗೆಳೆತನವಿದೆ. ವಿಜಯ್ ಮುಳುಗುಂದ ಡಿಕೆಶಿ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಗುಜರಾತ್ ಶಾಸಕರು ಬೆಂಗಳೂರಿಗೆ ಬಂದಾಗ ವಾಸ್ತವ್ಯದ ಹೊಣೆ ಹೊತ್ತಿದ್ರು. ಮುಳುಗುಂದ ಹೆಸರಿನಲ್ಲಿ ಡಿಕೆಶಿಯ ಹಲವು ಆಸ್ತಿ ಇರೋ ಶಂಕೆ ಹಿನ್ನೆಲೆಯಲ್ಲಿ ಮುಳುಗುಂದ ಮನೆ ಮೇಲೆ ಐಟಿ ರೇಡ್ ನಡೆದಿರೋ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಡಿಕೆ ಶಿವಕುಮಾರ್, ಐಟಿ ದಾಳಿಯಿಂದ ನನ್ನೊಬ್ಬನಿಗೆ ಕಷ್ಟ ಕೊಟ್ಟಿಲ್ಲ, 73 ಜನರಿಗೆ ಕಷ್ಟ ಕೊಟ್ಟಿದ್ದಾರೆ. ನಮ್ಮ ಬಳಿಯೂ ಸಾಕಷ್ಟು ಅಸ್ತ್ರಗಳಿವೆ. ಸಮಯ ಬಂದಾಗ ಬಳಕೆ ಮಾಡ್ತೀವಿ ಅಂತ ಐಟಿ ದಾಳಿ ಬಳಿಕ ಪರೋಕ್ಷವಾಗಿ ಬಿಜೆಪಿಯವರಿಗೆ ಎಚ್ಚರಿಕೆ ರವಾನಿಸಿದ್ರು.
ಮೈಸೂರಿನಲ್ಲಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ವಿಜಯ್ ಮುಳುಗುಂದ ರಾಜಕೀಯವಾಗಿ ಬೆಳೆಯುತ್ತಿದ್ರು. ಗುಜರಾತ್ ಶಾಸಕರು ರಾಜ್ಯಕ್ಕೆ ಬಂದಾಗ ಉಸ್ತುವಾರಿ ವಹಿಸಿದ್ರು. ಅದಕ್ಕೆ ರೇಡ್ ಮಾಡಿದ್ದಾರೆ. ದುಃಖ ದೂರ ಮಾಡುವ ದೇವಿಯ ದರ್ಶನ ಪಡೆಯಲು ಬಂದಿದ್ದೇನೆ. ದುಃಖ ಎಂದರೆ ಕೇವಲ ನನಗಷ್ಟೇ ಅಲ್ಲ. 73 ಜನರಿಗೆ ಹಗಲು ರಾತ್ರಿ ಕಷ್ಟ ಕೊಟ್ಟಿದ್ದಾರೆ. ಎಲ್ಲಾ ಕಡೆಯಿಂದ ನೀಡುತ್ತಿರುವ ಒತ್ತಡ ಕಿರುಕುಳ ನಿವಾರಿಸಿಕೊಳ್ಳಲು ಬಂದಿದ್ದೇನೆ ಅಂದ್ರು.
ಐಟಿ ದಾಳಿಯಿಂದ ನನ್ನ ಆತ್ಮಸ್ಥೈರ್ಯ ಕುಂದಿದೆ ಅನ್ನಿಸುತ್ತಿದೆಯೇ? ನಾನು ಸುಮ್ಮನಾದೆ ಎನ್ನಿಸುತ್ತಿದೆಯೇ? ಎಂದು ಮಾಧ್ಯಮದವರಿಗೆ ಪ್ರಶ್ನೆ ಹಾಕಿದ ಡಿಕೆಶಿ, ನಮ್ಮ ಬಳಿಯೂ ಸಾಕಷ್ಟು ಅಸ್ತ್ರಗಳಿವೆ. ಸಮಯ ಬಂದಾಗ ಬಳಕೆ ಮಾಡ್ರೀವಿ ಅಂದ್ರು.