ಬೆಂಗಳೂರು: ನನಗೆ ಏನು ಗೊತ್ತಿಲ್ಲ. ಈಗಷ್ಟೇ ಬಂದಿದ್ದೇನೆ ಎಂದು ಐಟಿ ದಾಳಿಗೆ ಸಂಬಂಧಿಸಿದಂತೆ ನಟ ಕಿಚ್ಚ ಸುದೀಪ್ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ನಿವಾಸದ ಬಳಿ ಇದ್ದ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ವೈಯಕ್ತಿಕ ಕಾರಣದಿಂದ ಐಟಿ ದಾಳಿ ನಡೆದಿಲ್ಲ. ದಿ ವಿಲನ್, ಕೆಜಿಎಫ್ ಮತ್ತು ನಟಸಾರ್ವಭೌಮ ಸಿನಿಮಾಗಳು ಬಿಗ್ ಬಜೆಟ್ ಚಿತ್ರಗಳಾಗಿದೆ. ಆದ್ದರಿಂದ ಮೂರು ಬಿಗ್ ಬಜೆಟ್ ಕಾರಣಕ್ಕೆ ಐಟಿ ದಾಳಿ ಮಾಡಿರಬಹುದು. ಈ ಮೂರು ಸಿನಿಮಾಗೆ ಸಂಬಂಧಿಸಿದ ನಿರ್ಮಾಪಕರ ಮನೆ ಮೇಲೂ ಐಟಿ ರೇಡ್ ಆಗಿದೆ ಎಂದು ಹೇಳಿದ್ದಾರೆ.
ನಾವು ಏನೇ ಮಾತನಾಡಬೇಕಾದರೂ ಸಾಕ್ಷಿ ಸಮೇತ ಮಾತನಾಡಬೇಕು. ಅದು ಯಾವುದೇ ಪಕ್ಷ ಮತ್ತು ಇನ್ನೊಬ್ಬರ ಬಗ್ಗೆ ಆಗಲಿ ಮಾತನಾಡಬಾರದು. ತೆರಿಗೆ ಇಲಾಖೆ ಯಾವುದೇ ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಅದಕ್ಕೆ ತನ್ನದೇ ಆದಂತಹ ನಿಯಮಗಳಿರುತ್ತವೆ. ಅವರಿಗೆ ಆ ನಿಯಮವನ್ನು ಪಾಲಿಸಿಲ್ಲ ಎಂಬ ಮಾಹಿತಿ ಸಿಕ್ಕಿರುತ್ತದೆ. ಆದ್ದರಿಂದ ದಾಳಿ ಮಾಡಿದ್ದಾರೆ. ನಾವು ಅಧಿಕಾರಿಗಳಿಗೆ ಸಹಕರಿಸಬೇಕು ಅಲ್ಲವೇ? ನಮ್ಮ ತಾಯಿ ಒಬ್ಬರೆ ಇದ್ದಾರೆ. ಅದಕ್ಕಾಗಿ ನಾನು ಮನೆಗೆ ಬಂದಿದ್ದೇನೆ. ಇಲ್ಲ ಅಂದಿದ್ದರೆ ನಾನು ಅಲ್ಲೆ ಕುಳಿತುಕೊಂಡು ಇದೆಲ್ಲವನ್ನು ನಿಭಾಯಿಸಬಹುದಿತ್ತು ಎಂದು ತಿಳಿಸಿದರು.
ಬೆಳಗ್ಗೆ ಐಟಿ ದಾಳಿ ನಡೆದಾಗ ಸುದೀಪ್ ಮನೆಯಲ್ಲಿ ಇರಲಿಲ್ಲ. ಅಧಿಕಾರಿಗಳು ಸುದೀಪ್ ಅವರಿಗೆ ಮನೆಗೆ ಬರಲು ಸೂಚಿಸಿದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆಯುತ್ತಿದ್ದ ಶೂಟಿಂಗ್ ರದ್ದುಗೊಳಿಸಿ ಮಧ್ಯಾಹ್ನ ಬೆಂಗಳೂರಿಗೆ ಹಿಂತಿರುಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv