ಬೆಂಗಳೂರು: ನೋಟಿಸ್ ನೀಡುವ ಮೂಲಕ ಅಕ್ಕಿ ವ್ಯಾಪರಿಯೊಬ್ಬರನ್ನು ಆದಾಯ ತೆರಿಗೆ ಇಲಾಖೆ(ಐಟಿ)ಯ ಅಧಿಕಾರಿಗಳು ತಬ್ಬಿಬ್ಬಾಗುವಂತೆ ಮಾಡಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.
ಅಕ್ಕಿ ವ್ಯಾಪಾರದ ವಹಿವಾಟಿಗೆಂದು ಸುರೇಶ್ ಆಕ್ಸಿಸ್ ಬ್ಯಾಂಕಿನಲ್ಲಿ 2013ರಿಂದ ಚಾಲ್ತಿ ಖಾತೆ ಹೊಂದಿದ್ದರು. ಈ ಮಧ್ಯೆ ಲೋನ್ಗೆ ಅರ್ಜಿ ಹಾಕಿದ್ದರು. ಈ ಸಂಬಂಧ ಸಹಿ ಮಾಡಿದ್ದ ಎರಡು ಖಾಲಿ ಚೆಕ್ ಬ್ಯಾಂಕ್ಗೆ ನೀಡಿದ್ದರು. ಆದರೆ ಸಾಲ ಸಿಗದ ಹಿನ್ನೆಲೆಯಲ್ಲಿ ಚೆಕ್ ವಾಪಸ್ ಪಡೆಯದೆ ಸುರೇಶ್ ಸುಮ್ಮನಾಗಿದ್ದರು.
ಬಳಿಕ ಅಕ್ಕಿ ವ್ಯಾಪಾರ ನಷ್ಟವಾಗಿ 2016ರಲ್ಲಿ ಉದ್ಯೋಗ ಅರಸಿ ಸುರೇಶ್ ಕೆನಡಾಗೆ ತೆರಳಿದ್ದರು. ಈ ಮಧ್ಯೆ ನೋಟ್ ಬ್ಯಾನ್ ಸಂದರ್ಭದಲ್ಲಿ ಸುರೇಶ್ ಖಾತೆಯಿಂದ ಅಪರಿಚಿತರು ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಸುರೇಶ್ ಖಾತೆಗೆ ದಿಲೀಪ್ ಎಂಬವರ ಹೆಸರಿನಲ್ಲಿ 88 ಲಕ್ಷ ರೂಪಾಯಿ ವರ್ಗಾವಣೆ ಆಗಿದೆ. ಬಳಿಕ ನವೆಂಬರ್ 12ರಂದು 40 ಲಕ್ಷ ರೂ. ಮತ್ತೆ ಸುರೇಶ್ ಖಾತೆಗೆ ಬಿದ್ದಿದೆ.
ಅದೇ ದಿನ ಇವರ ಖಾತೆಯಿಂದ ಶ್ರಾವಣಿ ಪ್ರಾಜೆಕ್ಟ್ ಎಂಬ ಖಾತೆಗೆ 1.28 ಕೋಟಿ ಹಣ ವರ್ಗಾವಣೆ ಆಗಿದೆ. ಇದನ್ನು ಗಮನಿಸಿದ ಐಟಿ ಇಲಾಖೆ, ಹಣ ವರ್ಗಾವಣೆ ದಾಖಲೆ ಕೇಳಿ ನೊಟೀಸ್ ಜಾರಿ ಮಾಡಿದೆ. ಐಟಿ ಅಧಿಕಾರಿಗಳ ನೋಟಿಸ್ ಕಂಡು ಸುರೇಶ್ ತಬ್ಬಿಬ್ಬಾಗಿದ್ದಾರೆ.
ನವೆಂಬರ್ 14ರಂದು ದಾಖಲೆ ತರುವಂತೆ ನೋಟೀಸ್ ನೀಡಲಾಗಿದೆ. ಈ ಸಂಬಂಧ ರಾಮಮೂರ್ತಿನಗರ ಠಾಣೆಗೆ ಸುರೇಶ್ ದೂರು ನೀಡಿದ್ದಾರೆ.