ನವದೆಹಲಿ: ಕೊಯಮತ್ತೂರು (Coimbatore) ಹಾಗೂ ಮಂಗಳೂರು (Mangaluru) ಸ್ಫೋಟದಲ್ಲಿ ನಮ್ಮ ಉಗ್ರರೇ ಭಾಗಿಯಾಗಿದ್ದು, ದಕ್ಷಿಣ ಭಾರತದಲ್ಲೂ (South India) ನಮ್ಮವರು ನೆಲೆಸಿದ್ದಾರೆ ಎಂಬ ಸ್ಫೋಟಕ ವಿಷಯವನ್ನು ಐಎಸ್ಕೆಪಿ ಒಪ್ಪಿಕೊಂಡಿದೆ.
ಖೊರಾಸನ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ (ISKP) ಎಂಬ ಉಗ್ರ ಸಂಘಟನೆ ತನ್ನ ವಾಯ್ಸ್ ಆಫ್ ಖುರಾಸನ್ ನಿಯತಕಾಲಿಕೆಯಲ್ಲಿ ಈ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಅಲ್ ಅಜೈಮ್ ಮೀಡಿಯಾ ಫೌಂಡೇಶನ್ನ ಇಂಗ್ಲೀಷ್ನಲ್ಲಿರುವ 68 ಪುಟಗಳ ವಾಯ್ಸ್ ಆಫ್ ಖುರಾಸನ್ ಪ್ರಚಾರದ ನಿಯತಕಾಲಿಕವನ್ನು ಬಿಡುಗಡೆ ಮಾಡಿದೆ.
ನಿಯತಕಾಲಿಕೆಯಲ್ಲಿ ಏನಿದೆ?: ಕಳೆದ ವರ್ಷ ಅ. 23ರಂದು ಕೊಯಮತ್ತೂರಿನಲ್ಲಿ ನಡೆದ ಕಾರು ಸ್ಫೋಟ ಮತ್ತು ನ. 19ರಂದು ಮಂಗಳೂರಿನ ಆಟೋ ರಿಕ್ಷಾದಲ್ಲಿ ನಡೆದ ಕುಕ್ಕರ್ ಸ್ಫೋಟವನ್ನು ಐಎಸ್-ಸಂಯೋಜಿತ ಉಗ್ರರು ನಡೆಸಿದ್ದರು ಎಂದು ಉಲ್ಲೇಖಿಸಿದೆ.
ತಮಿಳುನಾಡಿನ ಕೊಯಮತ್ತೂರು ಹಾಗೂ ಕರ್ನಾಟಕದ ಮಂಗಳೂರಿನಲ್ಲಿ ನಮ್ಮ ದಾಳಿಯಾಗಿದ್ದು, ಅಲ್ಲಿ ನಮ್ಮ ಸಹೋದರರು ನಮ್ಮ ಧರ್ಮದ ಗೌರವಕ್ಕಾಗಿ ಸೇಡು ತೀರಿಸಿಕೊಂಡರು ಎಂದು ಹೇಳಿದೆ. (ನಿಯತಕಾಲಿಕೆಯಲ್ಲಿ ಮಂಗಳೂರು ಬದಲಿಗೆ ಬೆಂಗಳೂರು ಎಂದು ಬರೆಯಲಾಗಿದೆ)
ಹಿಂದೂಗಳು, ಬಿಜೆಪಿ ಹಾಗೂ ಭಾರತೀಯ ಸೇನೆ ವಿರುದ್ಧ ಕಿಡಿಕಾರಿದೆ. ದಕ್ಷಿಣ ಭಾರತದಲ್ಲಿ ತನ್ನ ಮುಜಾಹಿದ್ದೀನ್ಗಳನ್ನು ಅವರ ವಿರುದ್ಧ ಯುದ್ಧ ಮಾಡಲು ಪ್ರಚೋದಿಸುತ್ತದೆ ಎಂದು ತಿಳಿಸಿದೆ. ಆದರೆ ಇದರಲ್ಲಿ ದಕ್ಷಿಣ ಭಾರತದಲ್ಲಿ ಯಾವ ರಾಜ್ಯದಲ್ಲಿ ಮುಜಾಹಿದ್ದೀನ್ಗಳು ಸಕ್ರಿಯರಾಗಿದ್ದಾರೆ ಎನ್ನುವುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಆದರೆ ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ಹೆಚ್ಚಿದ್ದಾರೆ ಎಂದು ಕೆಲವು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಾ.9 ರಂದು ಕರ್ನಾಟಕ ಬಂದ್ಗೆ ಕರೆ ಕೊಟ್ಟ ಡಿಕೆಶಿ
ಏನಿದು ವಾಯ್ಸ್ ಆಫ್ ಖುರಾಸನ್?: ಇದು ಮಧ್ಯ ಹಾಗೂ ದಕ್ಷಿಣ ಏಷ್ಯಾದಲ್ಲಿ ಐಸಿಸ್ ಚಟುವಟಿಕೆಯನ್ನು ಉತ್ತೇಜಿಸುವ ನಿಯತಕಾಲಿಕೆಯಾಗಿದೆ. ಇದು ದಾಳಿ ನಡೆಸಲು ಪ್ರಪಂಚದಾದ್ಯಂತ ಉಗ್ರರನ್ನು ಪ್ರಚೋದಿಸುತ್ತದೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ ಕಾರು ಪಲ್ಟಿ – ಚಾಲಕನಿಗೆ ಗಾಯ