ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ರಾಜಕೀಯಕ್ಕೆ ಬರುತ್ತಿದ್ದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿಯೊಂದು ರಾಜಕೀಯ ವಲಯದಲ್ಲಿ ಹರಿದಾಡಲು ಆರಂಭಿಸಿದೆ.
ಹೌದು. ಸುದೀಪ್ ಅವರನ್ನು ರಾಜಕೀಯಕ್ಕೆ ಕರೆ ತರುವ ಬಗ್ಗೆ ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ಆಗಿರುವ ರಮ್ಯಾ ಅವರು ಮಾತುಕತೆ ನಡೆಸಿದ್ದಾರೆ ಎನ್ನುವ ವಿಚಾರ ಪಬ್ಲಿಕ್ ಟಿವಿಗೆ ಮೂಲಗಳಿಂದ ಸಿಕ್ಕಿದೆ.
ರಂಗ ಎಸ್ಎಸ್ಎಲ್ಸಿ, ಮುಸ್ಸಂಜೆ ಮಾತು ಚಿತ್ರಗಳಲ್ಲಿ ರಮ್ಯಾ ಮತ್ತು ಸುದೀಪ್ ಒಟ್ಟಾಗಿ ಅಭಿನಯಿಸಿದ್ದು ಈಗಲೂ ಉತ್ತಮ ಸ್ನೇಹಿತರಾಗಿದ್ದಾರೆ. ಹೀಗಾಗಿ ರಮ್ಯಾ ಅವರು ಕಾಂಗ್ರೆಸ್ ಪಕ್ಷವನ್ನು ಸೇರುವಂತೆ ಸುದೀಪ್ ಅವರನ್ನು ಆಹ್ವಾನಿಸಿದ್ದು, ಸೇರ್ಪಡೆಯಾದರೆ ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದಿಂದ ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೊಳಕಾಲ್ಮೂರು ಕ್ಷೇತ್ರ ಎಸ್ಟಿ ಮೀಸಲು ಕ್ಷೇತ್ರವಾದ ಹಿನ್ನೆಲೆಯಲ್ಲಿ ನಾಯಕ ಜನಾಂಗದ ಸುದೀಪ್ ಅವರನ್ನು ಕಣಕ್ಕೆ ಇಳಿಸಲು ರಮ್ಯಾ ಸುದೀಪ್ ಜೊತೆ ಮಾತುಕತೆ ನಡೆಸಿದ್ದಾರೆ. ರಮ್ಯಾ ಅವರ ಈ ಆಹ್ವಾನಕ್ಕೆ ಸುದೀಪ್ ಯಾವ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.
ಕೆಲ ದಿನಗಳ ಹಿಂದೆ ಸುದೀಪ್ ವಿಷ್ಣು ಸ್ಮಾರಕ ವಿಚಾರದಲ್ಲಿ ಸಿಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ನಾನು ಯಾಕೆ ಆಗಮಿಸಿದ್ದು ಎಂದು ತಿಳಿಸಿದ್ದರು. ಈ ಸಂದರ್ಭದಲ್ಲಿ ನೀವು ರಾಜಕೀಯಕ್ಕೆ ಬರುತ್ತೀರಾ ಎಂದು ಪ್ರಶ್ನೆ ಕೇಳಿದ್ದಕ್ಕೆ ನಕ್ಕು ಕೈ ಬೀಸಿ ಸುದೀಪ್ ಯಾವುದೇ ಪ್ರತಿಕ್ರಿಯೆ ನೀಡದೇ ಹೊರಟು ಹೋಗಿದ್ದಾರೆ.
ನಾನು ರಾಜಕೀಯಕ್ಕೆ ಬರುತ್ತೇನೋ? ಇಲ್ಲವೋ ಎನ್ನುವುದನ್ನು ಸುದೀಪ್ ಸ್ಟಷ್ಟವಾಗಿ ತಿಳಿಸದೇ ಇದ್ದ ಕಾರಣ ಕಾಂಗ್ರೆಸ್ ಸೇರ್ಪಡೆಯಾಗಿ ಚುನಾವಣೆಗೆ ನಿಲ್ಲುತ್ತಾರೆ ಎನ್ನುವ ಸುದ್ದಿ ರಾಜಕೀಯಕ್ಕೆ ವಲಯದಲ್ಲಿ ಹರಿದಾಡಲು ಆರಂಭವಾಗುತ್ತದೆ. ಹೀಗಾಗಿ ಸುದೀಪ್ ಈ ವಿಚಾರದಲ್ಲಿ ಸ್ಪಷ್ಟನೆ ಕೊಟ್ಟರೆ ಎಲ್ಲ ಸುದ್ದಿಗಳಿಗೆ ಫುಲ್ ಸ್ಟಾಪ್ ಬೀಳಲಿದೆ. ಇದನ್ನೂ ಓದಿ: ಎಚ್ಡಿಕೆಗೆ ಕೈಯಾರೆ ಅಡುಗೆ ಮಾಡಿ ಬಡಿಸಿದ ಕಿಚ್ಚ ಸುದೀಪ್