ಮಂಗಳೂರು: ಕಾಂತಾರ ಚಾಪ್ಟರ್ 1 (Kantara Chapter 1) ಯಶಸ್ವಿ ಬೆನ್ನಲ್ಲೇ ಮಂಗಳೂರಿನ (Mangaluru) ಬಾರೆಬೈಲು ಜಾರಂದಾಯ ಬಂಟ ಹಾಗೂ ವಾರಾಹಿ ಪಂಜುರ್ಲಿ ದೈವಸ್ಥಾನದಲ್ಲಿ ನಡೆದ ಹರಕೆ ನೇಮೋತ್ಸವ ವೇಳೆ ರಿಷಬ್ ಶೆಟ್ಟಿ ಮಡಿಲಲ್ಲಿ ಮಲಗಿದ್ದ ದೈವ ನರ್ತಕರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಅಪಸ್ವರ ಕೇಳಿಬಂದಿದೆ.
ನಟ ರಿಷಬ್ ಶೆಟ್ಟಿ (Rishab Shetty) ಹಾಗೂ ಹೊಂಬಾಳೆ ಫಿಲಂಸ್ (Hombale Films) ವತಿಯಿಂದ ಹರಕೆ ನೇಮೋತ್ಸವ ನಡೆದಿತ್ತು. ನೇಮೋತ್ಸವ ಆರಂಭಕ್ಕೂ ಮುನ್ನ ದೈವಸ್ಥಾನದಲ್ಲಿ ದೈವ ಎಣ್ಣೆಬೂಳ್ಯ ನೀಡುವ ವಾಡಿಕೆ ಸಂಪ್ರದಾಯವಿದೆ. ಈ ವೇಳೆ ದೈವ ನರ್ತಕರು ತುಳುನಾಡಿನ ದೈವಾರಾಧನೆ ಸಂಪ್ರದಾಯ ಮೀರಿ ವರ್ತಿಸಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಇದನ್ನೂ ಓದಿ: ದೈವದ ಅಭಯ: ರಿಷಬ್ ಟೀಮ್ನಲ್ಲಿ ಸಂಚಲನ
ನಟ ರಿಷಬ್ ಶೆಟ್ಟಿಯ ಎರಡೂ ಕಾಂತಾರ ಸಿನಿಮಾಗಳಲ್ಲಿ ಮಾರ್ಗದರ್ಶಕರಾಗಿದ್ದವರೇ ಹರಕೆ ನೇಮೋತ್ಸವದ ವೇಳೆ ಎಣ್ಣೆಬೂಳ್ಯ ಸ್ವೀಕರಿಸಿದ್ದರು. ಈ ವೇಳೆ ದೈವ ನಟ ರಿಷಬ್ ಶೆಟ್ಟಿ ಮಡಿಲಲ್ಲಿ ಮಲಗಿದ್ದ ಭಾವುಕ ಸನ್ನಿವೇಶ ನಡೆದಿತ್ತು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತುಳುನಾಡ ದೈವಾರಾಧಕರ ಪರ-ವಿರೋಧ ಚರ್ಚೆ ನಡೆದಿದೆ. ತುಳುನಾಡಿನ ದೈವಾರಾಧನಾ ಪರಂಪರೆಯಲ್ಲಿ ದೈವ ನರ್ತನ ನಿಯಮ ಮೀರಿ ವರ್ತಿಸಬಾರದು. ದೈವಾರಾಧನೆಯ ಕಟ್ಟಲೆಗಳನ್ನು ಮೀರಿ ದೈವ ಕೋಲದ ಸಂಪ್ರದಾಯ ಮರೆತು ವರ್ತಿಸಿದ್ದಾರೆ. ಸದ್ಯ ದೈವ ನರ್ತಕರ ನಡೆ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಪರ-ವಿರೋಧ ಚರ್ಚೆಯಾಗುತ್ತಿದೆ.
ಇನ್ನೂ ಹರಕೆ ನೇಮೋತ್ಸವದ ವೇಳೆ ದೈವ ನರ್ತಕರಾಗಿದ್ದವರೇ ಕಾಂತಾರ ಎರಡು ಸಿನಿಮಾಗಳಲ್ಲಿಯೂ ಮಾರ್ಗದರ್ಶನ ನೀಡಿದ್ದರು. ಅಲ್ಲದೇ ಕಾಂತಾರ ಮೊದಲ ಸಿನಿಮಾಗೆ ಸೈಮಾ ಪ್ರಶಸ್ತಿ ಬಂದಾಗಲೂ ಇವರೇ ಪ್ರಶಸ್ತಿ ಸ್ವೀಕರಿಸಿದ್ದರು.ಇದನ್ನೂ ಓದಿ: ತುಳುನಾಡಿಗೆ ಬಂದು ಹರಕೆ ನೇಮೋತ್ಸವ ಸಲ್ಲಿಸಿದ ಕಾಂತಾರ ಚಿತ್ರತಂಡ

