ಹೈದರಾಬಾದ್: ಕ್ಷುಲ್ಲಕ ಕಾರಣಕ್ಕೆ ಮನನೊಂದು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆಯೊಂದು ನಾಗೊಳೆಯ ಜೈಪುರ ಕಾಲೋನಿಯಲ್ಲಿ ಗುರುವಾರ ನಡೆದಿದೆ.
ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯನ್ನು 18 ವರ್ಷದ ಸಾಯಿ ಪ್ರಿಯಾ ಎನ್ನಲಾಗಿದೆ. ಈಕೆ ಭೋಪಾಲ್ ರೆಡ್ಡಿ ಮಗಳು. ಸಾಯಿ ಪ್ರಿಯಾ ಇತ್ತೀಚೆಗೆಷ್ಟೇ ತನ್ನ ಪಿಯುಸಿ ಪರೀಕ್ಷೆ ಮುಗಿಸಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದಳು.
ಏನಿದು ಘಟನೆ?: ಗುರುವಾರ ಸಂಜೆ ಸಾಯಿ ಪ್ರಿಯಾ ತನ್ನ ಸಹೋದರಿ ಜೊತೆ ವಾಟ್ಸಾಪ್ ನಲ್ಲಿ ಚಾಟ್ ಮಾಡುತ್ತಿದ್ದಳು. ಈ ವೇಳೆ ಮೊಬೈಲ್ ಜಾಸ್ತಿ ಬಳಕೆ ಮಾಡುತ್ತಿದ್ದೀಯಾ ಅಂತ ತಂದೆ ಬೈದಿದ್ದಾರೆ. ಹಾಗೂ ಅದರ ಬಳಕೆ ಕಡಿಮೆ ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ. ಪರಿಣಾಮ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ.
ಇದರಿಂದ ಮನನೊಂದ ಪ್ರಿಯಾ, ನೇರವಾಗಿ ತನ್ನ ಬೆಡ್ ರೂಂ ಗೆ ತೆರಳಿ ಫ್ಯಾನ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೂಡಲೇ ಮಗಳ ಕೃತ್ಯವನ್ನು ಗಮನಿಸಿದ ಹೆತ್ತವರು ಕೋಣೆಯ ಬಾಗಿಲು ಒಡೆದು, ಮಗಳನ್ನು ತಕ್ಷಣವೇ ಸುಪ್ರಜಾ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಆದ್ರೆ ಆಕೆ ಅದಾಗಲೇ ಮೃತಪಟ್ಟಿದ್ದಾಳೆ ಅಂತ ವೈದ್ಯರು ತಿಳಿಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ಪ್ರಿಯಾ ಡೆತ್ ನೋಟ್ ಬರೆದಿದ್ದು, ಅದರಲ್ಲಿ ತಾನು ಪರೀಕ್ಷೆಯನ್ನು ಚೆನ್ನಾಗಿಯೇ ಎದುರಿಸಿದ್ದೇನೆ ಅಂತ ಹೇಳಿದ್ದಾಳೆ. ಸದ್ಯ ಪ್ರಿಯಾಳ ತಂದೆ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
`ನಾನು ಎಲ್ಲರೊಂದಿಗೂ ಸಿಟ್ಟು ಮಾಡಿಕೊಳ್ಳುತ್ತಿದ್ದೇನೆ. ಹೀಗಾಗಿ ನಾನ್ಯಾಕೆ ಇನ್ನೂ ಬದುಕಿರಬೇಕು ಅನಿಸಿದೆ. ಕ್ಷಮಿಸಿ ಅಪ್ಪ… ಐ ಲವ್ ಯೂ ಅಮ್ಮ, ಅಪ್ಪ. ಪರೀಕ್ಷೆಯಲ್ಲಿ ಚೆನ್ನಾಗಿಯೇ ಬರೆದಿದ್ದೇನೆ. ಹೀಗಾಗಿ ಆ ಕಾರಣಕ್ಕೋಸ್ಕರ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ… ನನ್ನ ಸಾವಿನಿಂದ ಅಪ್ಪ ಹಾಗೂ ಸಹೋದರಿ ಖುಷಿ ಪಡುತ್ತಾರೆ ಅಂತ ತನ್ನ ಡೆತ್ ನೋಟ್ ನಲ್ಲಿ ಬರೆದುಕೊಂಡಿದ್ದು, ಇದೀಗ ಪೊಲೀಸರು ಪತ್ರವನ್ನು ವಶಪಡಿಸಿಕೊಂಡಿದ್ದಾರೆ.