– ಇನ್ಸ್ಪೆಕ್ಟರ್, ಹೆಡ್ ಕಾನ್ಸ್ಟೇಬಲ್ ಸಸ್ಪೆಂಡ್
ಬೆಂಗಳೂರು: ಲಂಚಕ್ಕೆ ಬೇಡಿಕೆಯಿಟ್ಟ ಸಿಸಿಬಿ ಇನ್ಸ್ ಪೆಕ್ಟರ್ ಹಾಗೂ ಹೆಡ್ ಕಾನ್ಸ್ ಟೇಬಲ್ ನನ್ನು ಸಸ್ಪೆಂಡ್ ಮಾಡಿ ನಗರ ಪೊಲೀಸ್ ಅಯುಕ್ತರು ಅದೇಶ ಹೊರಡಿಸಿದ್ದಾರೆ. ಸಿಸಿಬಿಯ ಒಸಿಡಬ್ಲೂ ವಿಂಗ್ ನಲ್ಲಿ ಇನ್ಸ್ ಪೆಕ್ಟರ್ ಪ್ರಕಾಶ್ ಮತ್ತು ಹೆಡ್ ಕಾನ್ಸ್ ಟೇಬಲ್ ಸತೀಶ್ ಸಸ್ಪೆಂಡ್ ಆದ ಅಧಿಕಾರಿಗಳಾಗಿದ್ದಾರೆ.
ಎಐಎಂಎಂಎಸ್ ಅನ್ನೋ ಚಿಟ್ ಫಂಡ್ ಕಂಪನಿ ಜನರಿಗೆ ಮೋಸ ಮಾಡಿತ್ತು. ಈ ಬಗ್ಗೆ ಮಾಹಿತಿ ತಿಳಿದ ಇಬ್ಬರು ಅಧಿಕಾರಿಗಳು ಪರಿಶೀಲನೆಗೆ ತೆರಳಿ ವಿಚಾರಣೆ ನೆಪದಲ್ಲಿ ಕಂಪನಿಯವರಿಗೆ 1 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಪ್ರಕರಣ ಸಂಬಂಧ ಸಿಸಿಬಿ ಡಿಸಿಪಿ ಗಿರೀಶ್ ನಗರ ಪೊಲೀಸ್ ಆಯುಕ್ತರಿಗೆ ವರದಿ ಸಲ್ಲಿಸಿದ್ರು. ಹೀಗಾಗಿ ವರದಿ ಆಧರಿಸಿದ ಪೊಲೀಸ್ ಆಯುಕ್ತರು ಅಮಾನತು ಅದೇಶ ಹೊರಡಿಸಿದ್ದಾರೆ.
ಸಿಸಿಬಿ ಪೊಲೀಸರೆಂದರೆ ಬೆಂಗಳೂರಿನಲ್ಲಿ ಜನರಿಗೆ ನಂಬಿಕೆ ಇದೆ. ಆದ್ರೆ ಕಳೆದ ಡಿಸೆಂಬರ್ 9ರಂದು ಜಯನಗರದಲ್ಲಿರುವ ಎಐಎಂಎಂಎಸ್ ಕಂಪನಿಯಿಂದ ಜನರಿಗೆ ನೂರಾರು ಕೋಟಿ ಮೋಸ ಆಗಿದೆ ಅನ್ನೋ ದೂರು ಕೇಳಿಬಂದಿತ್ತು. ಹೀಗಾಗಿ ಇಬ್ಬರು ಅಧಿಕಾರಿಗಳು ಅಂದು ಕಂಪನಿ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಕಂಪನಿ ಮಾಲೀಕ ಸಹಿತ ಐವರು ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಪ್ರಕಾಶ್ ಹಾಗೂ ಸತೀಶ್ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ಈ ಕೇಸನ್ನು ಇಲ್ಲೇ ಮುಚ್ಚಾಕ್ತೀವಿ ಆದ್ರೆ ನಮಗೆ 1 ಕೋಟಿ ರೂ. ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಅಲ್ಲದೇ 35 ಲಕ್ಷ ರೂ. ಹಣ ಕೂಡ ಪಡೆದುಕೊಂಡಿದ್ದಾರೆಂಬ ಆರೋಪ ಕೇಳಿಬಂದಿತ್ತು.
ಈ ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಬಿ ಡಿಸಿಪಿ ಗಿರೀಶ್ ತನಿಖೆ ನಡೆಸಿದ್ದರು. ಈ ವೇಳೆ ಹಣಕ್ಕೆ ಬೇಡಿಕೆಯಿಟ್ಟ ವಿಚಾರ ಬಯಲಾಗಿದ್ದು, ಪೊಲೀಸ್ ಕಮಿಷನರ್ ಗೆ ವರದಿ ಕೂಡ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಇಬ್ಬರು ಅಧಿಕಾರಿಗಳನ್ನು ಕೆಲಸದಿಂದ ಅಮಾನತು ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv