ಬೆಂಗಳೂರು: ಅವಾಚ್ಯ ಪದಗಳಿಂದ ನಿಂದಿಸಿದ್ದ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ವಿರುದ್ಧ ದೂರು ನೀಡಿದ್ದ ಇನ್ಸ್ಪೆಕ್ಟರ್ ಸಿ.ವಿ.ರವಿ ಅವರ ವರ್ಗಾವಣೆ ಆದೇಶ ಬದಲಾಗಿದೆ.
ಉಡುಪಿಗೆ ನೀಡಲಾಗಿದ್ದ ವರ್ಗಾವಣೆಯನ್ನು ರದ್ದುಗೊಳಿಸಿ, ಬನಶಂಕರಿ ಠಾಣೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಈ ಮೂಲಕ ಮೈಸೂರು ಗ್ರಾಮಾಂತರ ವೃತ್ತ ಠಾಣೆ, ಉಡುಪಿ ಬಳಿಕ ಬನಶಂಕರಿ ಠಾಣೆಗೆ ಸಿ.ವಿ.ರವಿ ವರ್ಗಾವಣೆಯಾಗಿದ್ದಾರೆ. ಇದನ್ನು ಓದಿ: ಪೊಲೀಸ್ ಇತಿಹಾಸದಲ್ಲಿ ಫಸ್ಟ್ ಟೈಂ – ಠಾಣೆಯ 71 ಸಿಬ್ಬಂದಿ ಒಂದೇ ಬಾರಿಗೆ ವರ್ಗಾವಣೆ!
ಆಗಿದ್ದೇನು?:
ವಿವಿ ಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿ ಅವರನ್ನು ಮೈಸೂರು ಗ್ರಾಮಾಂತರ ವೃತ್ತಕ್ಕೆ ವರ್ಗಾವಣೆ ಮಾಡಲಾಗಿತ್ತು. ಈ ವೇಳೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ವಿಚಾರದಲ್ಲಿ ರವಿ ಅವರನ್ನು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಅವಾಚ್ಯ ಪದಗಳಿಂದ ನಿಂದಿಸಿದ್ದರು. ಇದರಿಂದ ಮನನೊಂದ ರವಿ, ಅಮಿತ್ ಸಿಂಗ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಹಾಗೂ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲು ಮುಂದಾಗಿದ್ದು, ಇದಕ್ಕೆ ಅನುಮತಿ ನೀಡಬೇಕೆಂದು ಬೆಂಗಳೂರು ದಕ್ಷಿಣ ವಲಯ ಐಜಿಪಿ ಕೆ.ವಿ. ಶರತ್ಚಂದ್ರ ಅವರಿಗೆ ಮನವಿ ಸಲ್ಲಿಸಿದ್ದರು.
ಮೈಸೂರು ಗ್ರಾಮಾಂತರ ವೃತ್ತಕ್ಕೆ ವರ್ಗಾವಣೆಯನ್ನು ರದ್ದು ಮಾಡಿ, ಸಿ.ವಿ.ರವಿ ಅವರನ್ನು ಉಡುಪಿಗೆ ವರ್ಗಾವಣೆ ಮಾಡಲಾಗಿತ್ತು. ಈ ಪತ್ರ ಕೈ ಸೇರಿದ ಒಂದೇ ದಿನಕ್ಕೆ ಇನ್ಸ್ಪೆಕ್ಟರ್ ರವಿ ತಡೆಯಾಜ್ಞೆ ತಂದಿದ್ದರು. ಈ ಎಲ್ಲ ಬೆಳವಣಿಗೆಯಿಂದ ಸ್ಥಳ ನಿರೀಕ್ಷೆಯಲ್ಲಿದ್ದ ಅವರನ್ನು ಬನಶಂಕರಿ ಠಾಣೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv