– ಐಟಿಯನ್ನು ಮುಂದಿಟ್ಟುಕೊಂಡು ಬಿಜೆಪಿಯಿಂದ ಪ್ಲಾನ್
– ಶಾಂತಿಯಿಂದ ಇರುವಂತೆ ಕಾರ್ಯಕರ್ತರಲ್ಲಿ ಜೆಡಿಎಸ್ ಮನವಿ
ಬೆಂಗಳೂರು: ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಲಿಷ್ಠವಾಗಿಲ್ಲ. ಹೀಗಾಗಿ ಈ ಭಾಗದಲ್ಲಿ ಚುನಾವಣೆ ಮುಂದೂಡಲು ಬಿಜೆಪಿ ಐಟಿ ದಾಳಿ ನಡೆಸಿದೆ ಎನ್ನುವ ಗಂಭೀರ ಆರೋಪ ಈಗ ಕೇಳಿ ಬಂದಿದೆ.
ಜೆಡಿಎಸ್ ಹಿರಿಯ ನಾಯಕರ ಸೂಚನೆ ಹಿನ್ನೆಲೆಯಲ್ಲಿ ಸ್ಥಳೀಯ ನಾಯಕರು ಕಾರ್ಯಕರ್ತರ ಜೊತೆ ಸಂಯಮದಿಂದ ಇರಿ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಸೋಲಿಸಲು ಮೋದಿ ಸರ್ಕಾರ ಷಡ್ಯಂತ್ರ ರೂಪಿಸಿದೆ. ಹೀಗಾಗಿ ಈ ವಿಚಾರವನ್ನು ಮುಂದಿಟ್ಟುಕೊಂಡು ಕಾನೂನು ಉಲ್ಲಂಘನೆ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಜೆಡಿಎಸ್ ಆರೋಪ ಏನು?
ಮಂಡ್ಯ, ಮೈಸೂರು, ಮತ್ತು ಹಾಸನದಲ್ಲಿ ಈ ಬಾರಿ ಗೆಲ್ಲುವುದಿಲ್ಲ ಎನ್ನುವುದು ಬಿಜೆಪಿಗೆ ಗೊತ್ತಾಗಿದೆ. ಇದರಿಂದ ಸೋಲಿನ ಭೀತಿಗೆ ತುತ್ತಾಗಿ ಬಿಜೆಪಿ ಐಟಿ ರೇಡ್ ಮಾಡಿಸಿದೆ. ಈಗ ಐಟಿ ದಾಳಿ ನಡೆದ ಕೂಡಲೇ ಜೆಡಿಎಸ್ ಕಾರ್ಯಕರ್ತರು ದಂಗೆ ಏಳುತ್ತಾರೆ. ಆಗ ಗಲಾಟೆ ನಡೆಯುತ್ತೆ. ಅದನ್ನು ತೋರಿಸಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಬಿಂಬಿಸಲು ಬಿಜೆಪಿ ಪ್ಲಾನ್ ಮಾಡಿದ್ದು, ನಂತರ ಇದನ್ನೆ ನೆಪವಾಗಿಟ್ಟುಕೊಂಡು ಲೋಕಸಭಾ ಚುನಾವಣೆಯನ್ನು ಮುಂದೂಡುವ ತಂತ್ರ ಮಾಡಿದೆ.
ಈಗಾಗಲೇ ಬಿಜೆಪಿ, ಮಂಡ್ಯದಲ್ಲಿ ಸಿಎಂ ಅಧಿಕಾರವನ್ನು ದುರ್ಬಳಕೆ ಮಾಡುತ್ತಿದ್ದಾರೆ. ಸುಮಲತಾ, ಯಶ್, ದರ್ಶನ್ ಅವರ ಮೇಲೆ ಜೆಡಿಎಸ್ಸಿನಿಂದ ಬೆದರಿಕೆ ಬಂದಿದೆ. ಹೀಗಾಗಿ ಕೇಂದ್ರ ಸರ್ಕಾರ ಇವರಿಗೆ ಭದ್ರತೆ ನೀಡಬೇಕು. ಚುನಾವಣಾ ಆಯೋಗ ಸಹ ಮಂಡ್ಯದಲ್ಲಿ ವಿಶೇಷ ಅಧಿಕಾರಿಗಳನ್ನು ನೇಮಿಸಬೇಕು ಎಂದು ಮನವಿ ಮಾಡಿಕೊಂಡಿದೆ. ಒಂದು ವೇಳೆ ಈ ದಾಳಿಯನ್ನು ಖಂಡಿಸಿ ಕಾರ್ಯಕರ್ತರು ದಂಗೆ ಎದ್ದು ಕಾನೂನು ಸುವ್ಯವಸ್ಥೆ ಹಾಳಾದರೆ ಬಿಜೆಪಿ ಇದನ್ನೇ ನೆಪವಾಗಿಟ್ಟುಕೊಂಡು ದೂರು ನೀಡಿದರೆ ಚುನಾವಣೆ ಮುಂದೂಡುವ ಸಾಧ್ಯತೆಯಿದೆ. ಹೀಗಾಗಿ ಈ ರೀತಿಯ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಎಂದು ಕಾರ್ಯಕರ್ತರಲ್ಲಿ ಜೆಡಿಎಸ್ ಮನವಿ ಮಾಡಿಕೊಳ್ಳುತ್ತಿದೆ.