ಚೆನ್ನೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಭಾನುವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅಂಪೈರ್ ಕೈಗೊಂಡ ತೀರ್ಮಾನದ ವಿರುದ್ಧ ಕಿಡಿಕಾರಿದ್ದಾರೆ. ಹಿಂದೆಂದೂ ಕ್ರಿಕೆಟ್ನಲ್ಲಿ ಈ ರೀತಿ ಆಗಿರುವುದನ್ನು ನಾನು ನೋಡಿಲ್ಲ ಎಂದು ಹೇಳಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ ಅವರಿಗೆ ರವೀಂದ್ರ ಜಡೇಜಾರ ರನೌಟ್ ಕುರಿತು ನಿರೂಪಕರು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ತಮ್ಮ ಬಳಿ ಯಾವುದೇ ಮಾತುಗಳಿಲ್ಲ ಎಂದು ಸನ್ನೆ ಮಾಡಿದ ಕೊಹ್ಲಿ, ಆನ್ ಫೀಲ್ಡ್ ಅಂಪೈರ್ ಶಾನ್ ಜಾರ್ಜ್ ನಡೆಯ ಕುರಿತು ಬೇಸರ ವ್ಯಕ್ತಪಡಿಸಿದರು.
ಈ ಘಟನೆ ಬಹಳ ಸರಳವಾಗಿತ್ತು. ಫೀಲ್ಡರ್ ಔಟ್ ಎಂದು ಮನವಿ ಮಾಡಿದ ಸಮಯದಲ್ಲಿ ಅಂಪೈರ್ ನಾಟೌಟ್ ಎಂದು ಹೇಳಿದ್ದರು. ಅಲ್ಲಿಗೆ ಅದು ಅಂತ್ಯವಾಗಿತ್ತು. ಆದರೆ ಟಿವಿ ಎದುರು ಕುಳಿತ ವ್ಯಕ್ತಿಗಳು ಆಟಗಾರರಿಗೆ ಮತ್ತೆ ರಿವ್ಯೂ ಮಾಡುವಂತೆ ಅಂಪೈರ್ ಗೆ ಮನವಿ ಮಾಡಲು ಹೇಳುವಂತಿಲ್ಲ. ಈ ಹಿಂದೆ ಇಂತಹ ಘಟನೆಗಳು ನಡೆದಿರುವುದನ್ನು ನಾನು ಎಂದು ನೋಡಿಲ್ಲ.
ಇಂತಹ ಸಂದರ್ಭದಲ್ಲಿ ಅಂಪೈರ್ ಹಾಗೂ ಪಂದ್ಯದ ರೆಫ್ರಿ ನಿರ್ಧಾರವನ್ನು ಮಾಡಬೇಕು. ಆದರೆ ಹೊರಗೆ ಕುಳಿತವರು ಫೀಲ್ಡ್ ನಲ್ಲಿ ಏನು ನಡೆಯುತ್ತಿದೆ ಎಂದು ನಿರ್ದೇಶನ ಮಾಡುವಂತಿಲ್ಲ. ಇಂತಹ ನಿಯಮಗಳು ಎಲ್ಲಿದೆ ಎಂಬುವುದು ನನಗೆ ತಿಳಿದಿಲ್ಲ ಎಂದು ಅಂಪೈರ್ ತೀರ್ಮಾನ ಕುರಿತು ಕೊಹ್ಲಿ ಪ್ರತಿಕ್ರಿಯೆ ನೀಡಿದರು.
https://twitter.com/NaaginDance2/status/1206190475746533380
ನಡೆದಿದ್ದೇನು?
ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ, ವಿಂಡೀಸ್ ಶಿಸ್ತು ಬದ್ಧ ಬೌಲಿಂಗ್ ದಾಳಿಗೆ ತಿಣುಕಾಡುತ್ತ ರನ್ ಗಳಿಸುತ್ತಿತ್ತು. ಪಂದ್ಯದ 48ನೇ ಓವರಿನಲ್ಲಿ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಒಂಟಿ ರನ್ ಕದಿಯುವ ಯತ್ನದಲ್ಲಿ ರನ್ ಔಟ್ ಆದ್ರು. ಆದರೆ ಮೊದಲು ವಿಂಡೀಸ್ನ ರಾಸ್ಟನ್ ಚೇಸ್ರ ಡೈರೆಕ್ಟ್ ಹಿಟ್ ಮನವಿಯನ್ನು ನಿರಾಕರಿಸಿದ್ದ ಅಂಪೈರ್ ನಾಟ್ ಔಟ್ ತೀರ್ಪು ನೀಡಿದ್ದರು.
ಅಂಪೈರ್ ತೀರ್ಪನ್ನು ಮರು ಪರಿಶೀಲನೆ ನಡೆಸಲು ವಿಂಡೀಸ್ ನಾಯಕ ಕೂಡ ಮನವಿ ಸಲ್ಲಿಸಿಲ್ಲ. ಆದರೆ ನಿರ್ಧಾರ ಪ್ರಕಟವಾಗಿ ಚೆಂಡು ಡೆಡ್ ಆದ ಬಳಿಕ ರಿಪ್ಲೇ ಕಂಡ ಆಟಗಾರರು ಮತ್ತೆ ಅಂಪೈರ್ ಗೆ ಮನವಿ ಮಾಡಿದರು. ಈ ವೇಳೆ ಮತ್ತೆ ತಮ್ಮ ನಿರ್ಧಾರವನ್ನು ಬದಲಿಸಿಕೊಂಡ ಫೀಲ್ಡ್ ಅಂಪೈರ್ ಮೂರನೇ ಅಂಪೈರ್ ಮೊರೆ ಹೋದರು. ಆ ವೇಳೆ ಜಡೇಜಾ ಕ್ರಿಸ್ಗೆ ಬರುವ ಮುನ್ನವೇ ಚೆಂಡು ವಿಕೆಟ್ಗೆ ತಾಗಿರುವುದನ್ನು ಗಮನಿಸಿದ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಇದರಿಂದ ಅಸಮಾಧಾನಗೊಂಡ ಕೊಹ್ಲಿ, ಪೆವಿಲಿಯನ್ ನಿಂದ ಫೀಲ್ಡ್ ಬೌಂಡರಿ ಗೆರೆ ಬಳಿ ಬಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಆದರೆ ಕೊಹ್ಲಿ ಫೀಲ್ಡ್ ಒಳಗೆ ಪ್ರವೇಶ ಮಾಡಲಿಲ್ಲ. ಪ್ರಮುಖ ಹಂತದಲ್ಲಿ ತಂಡಕ್ಕೆ ಆಸರೆಯಾಗಿದ್ದ ಜಡೇಜಾ 21 ರನ್ ಗಳಿಸಿ ಔಟಾಗಿದ್ದರು.