ಅಬುಧಾಬಿ: ಕೊರೊನಾ ಭೀತಿ ರಾಷ್ಟ್ರಾದ್ಯಂತ ಹಬ್ಬುತ್ತಿದ್ದು, ಈ ಹಿನ್ನೆಲೆಯಲ್ಲಿ ದೂರದ ಊರಿನಲ್ಲಿದ್ದವರು ತಾಯ್ನಾಡಿಗೆ ವಾಪಸ್ಸಾಗುತ್ತಿದ್ದಾರೆ. ಅಂತೆಯೇ ದುಬೈನಲ್ಲಿದ್ದ ಭಾರತೀಯ ಮೂಲದ ಟೆಕ್ಕಿಯೊಬ್ಬರು ತಾಯ್ನಾಡಿಗೆ ಹೊರಟಿದ್ದು, ಆದ್ರೆ ಫ್ಲೈಟ್ ಗೆ ಕಾದು ನಿದ್ರೆಗೆ ಜಾರಿದ್ದರಿಂದ ವಿಮಾನ ಮಿಸ್ ಆದ ಪ್ರಸಂಗ ನಡೆದಿದೆ.
ಪುಣೆ ಮೂಲದ ಅರುಣ್ ಸಿಂಗ್(37) ದುಬೈನಲ್ಲೇ ಉಳಿದ ಭಾರತೀಯ. ಟೆಕ್ಕಿಯಾಗಿರುವ ಇವರು ದುಬೈನಲ್ಲಿ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ಕೊರೊನಾ ವೈರಸ್ ಭೀತಿಯಿಂದ ಅರುಣ್ ಭಾನುವಾರ ರಾತ್ರಿ ತಾಯ್ನಾಡಿಗೆ ಹೊರಟಿದ್ದರು. ಹೀಗಾಗಿ ದುಬೈ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ಅಹಮದಾಬಾದ್ ಕಡೆ ಹೊರಟಿದ್ದ ಕೊನೆಯ ವಿಮಾನವನ್ನು ಏರಬೇಕಿತ್ತು. ಆದರೆ ಅರುಣ್ ವಿಸಿಟಿಂಗ್ ಏರಿಯಾದಲ್ಲಿ ನಿದ್ದೆಗೆ ಜಾರಿ ಎಡವಟ್ಟು ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅರುಣ್, ಇದೊಂದು ನನ್ನಿಂದಾದ ದೊಡ್ಡ ತಪ್ಪು. ಬಹಳ ದಣಿದಿದ್ದ ಪರಿಣಾಮ ನಿದ್ದೆ ಬಂತು. ಹಾಗಾಗಿ ನಿದ್ದೆ ಮಾಡಿದೆ. ವಿಚ್ಚೇದನ ಪಡೆಯೋದಕ್ಕಾಗಿ ನಾನು ಅರ್ಜಿ ಸಲ್ಲಿಸಲು ಭಾರತಕ್ಕೆ ಮರಳುತ್ತಿದ್ದೆ. ಬುಧವಾರದ ನಂತರ ವಿಮಾನ ನಿಲ್ದಾಣ ಮುಚ್ಚಲಿದ್ದು ಏನು ಮಾಡಬೇಕೆಂದು ತೋಚುತ್ತಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ಗಲ್ಫ್ ನ್ಯೂಸ್ ಬಳಿ ತೋಡಿಕೊಂಡಿದ್ದಾರೆ.
ಅಲ್ಲದೆ ಈ ಬಗ್ಗೆ ದುಬೈನಲ್ಲಿರುವ ಭಾರತೀಯ ದೂತವಾಸವನ್ನು ಸಂಪರ್ಕಿಸಿದೆ. ಆದರೆ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಎಮದು ಬೇಸರ ವ್ಯಕ್ತಪಡಿಸಿದರು.