ಭರ್ಜರಿ ಗೆಲುವು ಸಾಧಿಸಿ ಟಿ-20 ಸರಣಿ ಸಮಬಲಗೊಳಿಸಿಕೊಂಡ ದ.ಆಫ್ರಿಕಾ

Public TV
2 Min Read
Cricket

ಬೆಂಗಳೂರು: ಟೀಂ ಇಂಡಿಯಾ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 9 ವಿಕೆಟ್‍ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಟಿ-20 ಸರಣಿಯು ಸಮಬಲದೊಂದಿಗೆ ಅಂತ್ಯಕಂಡಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟಿ-20 ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯವು ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. ಟೀಂ ಇಂಡಿಯಾ ಒಡ್ಡಿದ 135 ರನ್‍ಗಳ ಸವಾಲನ್ನು ದಕ್ಷಿಣ ಆಫ್ರಿಕಾ 3 ಓವರ್ ಗಳು ಬಾಕಿ ಇರುವಾಗಲೇ ಭೇದಿಸಿತು.

ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರೀಜಾ ಹೆಂಡ್ರಿಕ್ಸ್ 26 ಎಸೆತಗಳನ್ನು ಎದುರಿಸಿ 4 ಬೌಂಡರಿ ಸೇರಿ 28 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಾಯಕ ಕ್ವಿಂಟನ್ ಡಿಕಾಕ್ 25 ಎಸೆತಗಳನ್ನು ಎದುರಿಸಿ 5 ಸಿಕ್ಸರ್, 6 ಬೌಂಡರಿ ಸೇರಿ ಅಜೇಯ 79 ರನ್ ಸಿಡಿಸಿದರೆ, ತೆಂಬಾ ಬವೂಮಾ 23 ಎಸೆತಗಳಲ್ಲಿ ಸಿಕ್ಸ್, 2 ಬೌಂಡರಿ ಸಿಡಿಸಿ ಅಜೇಯ 27 ರನ್ ಕಲೆ ಹಾಕಿದರು.

India

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್‍ಗಳ ನಷ್ಟಕ್ಕೆ 134 ರನ್ ದಾಖಲಿಸಿತ್ತು. ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದ್ದರು. ಆದರೆ ಇನ್ನಿಂಗ್ಸ್ ನ ಮೂರನೇ ಓವರ್ ನ ಎರಡನೇ ಎಸೆತದಲ್ಲಿ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಬಳಿಕ ಭರ್ಜರಿ ಬ್ಯಾಟಿಂಗ್ ಮುಂದುವರಿಸಿದ ಶಿಖರ್ ಧವನ್‍ಗೆ ಕೊಹ್ಲಿ ಸಾಥ್ ನೀಡಿದ್ದರು.

ಇನ್ನಿಂಗ್ಸ್ ನ ಏಳನೇ ಓವರ್ ನಲ್ಲಿ ಶಿಖರ್ ಧವನ್ ವಿಕೆಟ್ ಒಪ್ಪಿಸಿದರು. 25 ಎಸೆತಗಳನ್ನು ಎದುರಿಸಿದ ಶಿಖರ್ ಧವನ್ ಎರಡು ಸಿಕ್ಸರ್, 4 ಬೌಂಡರಿ ಸೇರಿ 36 ರನ್ ಕಲೆಹಾಕಿದರು. ಧವನ್ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಕೂಡ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. 15 ಎಸೆತಗಳನ್ನು ಎದುರಿಸಿದ ವಿರಾಟ್ 9 ರನ್ ದಾಖಲಿಸಲು ಶಕ್ತರಾದರು.

India A

ಇನ್ನಿಂಗ್ಸ್ ನ 9 ಓವರ್‌ಗಳ ವೇಳೆಗೆ ಟೀಂ ಇಂಡಿಯಾ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತ್ತು. ಆಗ ಯುವ ಆಟಗಾರರಾದ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ವಿಕೆಟ್ ಕಾಯ್ದುಕೊಂಡು ರನ್ ಕದಿಯಲು ಆರಂಭಿಸಿದರು. ಆದರೆ ಇನ್ನಿಂಗ್ಸ್ ನ 13ನೇ ಓವರ್ ನ 4ನೇ ಎಸೆತದಲ್ಲಿ ರಿಷಭ್ ಪಂತ್ ಹಾಗೂ 5ನೇ ಎಸೆತದಲ್ಲಿ ಶ್ರೇಯಸ್ ಅಯ್ಯರ್ ವಿಕೆಟ್ ಒಪ್ಪಿಸಿದರು. 20 ಎಸೆತಗಳನ್ನು ಎದುರಿಸಿದ ಪಂತ್ ಸಿಕ್ಸ್, ಒಂದು ಬೌಂಡರಿ ಸೇರಿ 19 ರನ್ ದಾಖಲಿಸಿದರೆ, ಶ್ರೇಯಸ್ ಅಯ್ಯರ್ 5 ರನ್ ಕದಿಕಲು ಶಕ್ತರಾದರು.

ರವೀಂದ್ರ ಜಡೇಜಾ 19 ರನ್, ಹಾರ್ದಿಕ್ ಪಾಂಡ್ಯ 14 ರನ್ ದಾಖಲಿಸಿ ತಂಡಕ್ಕೆ ಆಸರೆಯಾದರು. ಈ ಮೂಲಕ ಟೀಂ ಇಂಡಿಯಾ ಇನ್ನಿಂಗ್ಸ್ ನ ನಿಗದಿತ 20 ಓವರ್ ಗಳಲ್ಲಿ 134 ರನ್ ದಾಖಲಿಸಿತ್ತು.

Shreyas Iyer

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟಿ-20 ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಬಳಿಕ ಮೊಹಾಲಿಯಲ್ಲಿ ಸೆಪ್ಟೆಂಬರ್ 18ರಂದು ನಡೆದ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿತ್ತು. ಭಾನುವಾರ ಬೆಂಗಳೂರಿನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಭರ್ಜರಿ ಗೆಲುವು ಸಾಧಿಸಿ ಸರಣಿ ಸಮಬಲಗೊಳಿಸಿಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *