ಲಂಡನ್: ಗಾಯದ ಸಮಸ್ಯೆಯಿಂದ ಇಂಗ್ಲೆಂಡ್ ವಿರುದ್ಧದ ಟಿ20 ಕ್ರಿಕೆಟ್ ಟೂರ್ನಿಗೆ ಅಲಭ್ಯರಾಗಿದ್ದ ವೇಗಿ ಜಸ್ಪ್ರೀತ್ ಬುಮ್ರಾ ಏಕದಿನ ಸರಣಿಯಿಂದಲೂ ಹೊರಬಿದ್ದಿದ್ದಾರೆ. ಸದ್ಯ ಬುಮ್ರಾ ಸ್ಥಾನಕ್ಕೆ ವೇಗಿ ಶಾರ್ದೂಲ್ ಠಾಕೂರ್ ಆಯ್ಕೆ ಮಾಡಿದ್ದಾಗಿ ಬಿಸಿಸಿಐ ತಿಳಿಸಿದೆ.
ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯ ಫೀಲ್ಡಿಂಗ್ ವೇಳೆ ಬುಮ್ರಾ ಬಲಗೈ ಹೆಬ್ಬೆರಳಿಗೆ ಗಾಯವಾಗಿತ್ತು. ಇದರಿಂದ ಅವರು ಇಂಗ್ಲೆಂಡ್ ಟೂರ್ನಿಯ ಮೂರು ಪಂದ್ಯಗಳ ಟಿ20 ಪಂದ್ಯಗಳಿಂದ ಹೊರಗುಳಿದಿದ್ದರು. ಈ ವೇಳೆ ಅವರು ಏಕದಿನ ಟೂರ್ನಿಯ ವೇಳೆ ಚೇತರಿಕೊಳ್ಳವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಸಂಪೂರ್ಣವಾಗಿ ಬುಮ್ರಾ ಗಾಯದ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗದ ಕಾರಣ ಏಕದಿನ ಟೂರ್ನಿಗೂ ಅಲಭ್ಯರಾಗಿದ್ದಾರೆ.
24 ವರ್ಷದ ಬುಮ್ರಾ ಬುಧವಾರ ಗಾಯದ ಸಮಸ್ಯೆಗೆ ಸರ್ಜರಿಗೆ ಒಳಗಾಗಿದ್ದರು. ಸರ್ಜರಿ ಯಶಸ್ವಿಯಾಗಿದ್ದು, ಅವರಿಗೆ ವಿಶ್ರಾಂತಿಯ ಅಗತ್ಯ ಇರುವುದಾಗಿ ವೈದ್ಯರು ಸಲಹೆ ನೀಡಿದ್ದಾರೆ.
ಇದೇ ವೇಳೆ ವಾಷಿಂಗ್ಟನ್ ಸುಂದರ್ ಬಲ ಮೊಣಕಾಲಿಗೆ ಗಾಯವಾಗಿ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಗೆ ಅಲಭ್ಯರಾಗಿದ್ದರು. ಇನ್ನು ಟೀಂ ಇಂಡಿಯಾ 70 ದಿನಗಳ ಪ್ರವಾಸವನ್ನು ಕೈಗೊಂಡಿದ್ದು, ಈ ಅವಧಿಯಲ್ಲಿ ಟಿ20, ಏಕದಿನ ಹಾಗೂ ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಜುಲೈ 12 ರಂದು ಏಕದಿನ ಪಂದ್ಯ ಆರಂಭವಾಗಲಿದೆ. ಉಳಿದಂತೆ ಟಿ20, ಏಕದಿನ ಟೂರ್ನಿ ಬಳಿಕ ಆಗಸ್ಟ್ 1 ರಿಂದ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ.
ಜೂನ್ 24 ರಂದು ಐಸಿಸಿ ಬಿಡುಗಡೆ ಮಾಡಿದ್ದ ಏಕದಿನ ಬೌಲರ್ ಶ್ರೇಯಾಂಕ ಪಟ್ಟಿಯಲ್ಲಿ ಬುಮ್ರಾ ಮೊದಲ ಸ್ಥಾನ ಪಡೆದಿದ್ದು, ಯಜುವೇಂದ್ರ ಚಹಲ್ 8ನೇ ಸ್ಥಾನ ಪಡೆದಿದ್ದಾರೆ.