ನವದೆಹಲಿ: ಭಾರತಕ್ಕೆ ಇಂದು ಪ್ರಧಾನಿ ಇಲ್ಲ. ಆದರೆ ಜನರು ನಿರ್ಧಾರ ತೆಗೆದುಕೊಳ್ಳುವಾಗ ಸುಮ್ಮನಿರಬೇಕು ಎಂದು ನಂಬುವ ರಾಜನಿದ್ದಾನೆ ಎಂದು ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಟೀಕಿಸಿದರು.
ಉಧಮ್ ಸಿಂಗ್ ನಗರದ ಕಿಚ್ಚಾದಲ್ಲಿ ‘ಉತ್ತರಖಂಡಿ ಕಿಸಾನ್ ಸ್ವಾಭಿಮಾನ್ ಸಂವಾದ’ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್-19 ಸಾಂಕ್ರಾಮಿಕ ರೋಗದ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ರೈತರನ್ನು ಒಂದು ವರ್ಷ ರಸ್ತೆಗೆ ಬಿಟ್ಟಿದ್ದಾರೆ ಎಂದು ಆರೋಪಿಸಿದ್ದು, ಕಾಂಗ್ರೆಸ್ ಎಂದಿಗೂ ಹಾಗೆ ಮಾಡುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಹಿಜಬ್ ಹೆಸರಿನಲ್ಲಿ ವಿದ್ಯಾರ್ಥಿನಿಯರ ಶೈಕ್ಷಣಿಕ ಭವಿಷ್ಯ ಕಸಿದುಕೊಳ್ಳುತ್ತಿದ್ದೇವೆ: ರಾಗಾ
ತಮ್ಮ ಪಕ್ಷವು ರೈತರು, ಕಾರ್ಮಿಕರು ಮತ್ತು ಬಡವರಿಗೆ ಎಂದಿಗೂ ಬಾಗಿಲು ಮುಚ್ಚುವುದಿಲ್ಲ. ನಾವು ಅವರೊಂದಿಗೆ ಇದ್ದು, ಕಷ್ಟ ಸರಿಮಾಡಲು ಬಯಸುತ್ತೇವೆ ಎಂದು ಹೇಳಿದರು. ಒಬ್ಬ ಪ್ರಧಾನಿ ಎಲ್ಲರಿಗಾಗಿ ಕೆಲಸ ಮಾಡದಿದ್ದರೆ ಅವರು ಪ್ರಧಾನಿಯಾಗಲು ಸಾಧ್ಯವಿಲ್ಲ. ಅದರ ಪ್ರಕಾರ ನರೇಂದ್ರ ಮೋದಿ ಪ್ರಧಾನಿ ಅಲ್ಲ ಎಂದು ವಿರೋಧ ವ್ಯಕ್ತಪಡಿಸಿದರು. ಭಾರತಕ್ಕೆ ಇಂದು ಪ್ರಧಾನಿ ಇಲ್ಲ. ರಾಜನು ನಿರ್ಧಾರ ತೆಗೆದುಕೊಳ್ಳುವಾಗ ಎಲ್ಲರೂ ಸುಮ್ಮನಿರಬೇಕು ಎಂದು ನಂಬುವ ರಾಜನಿದ್ದಾನೆ ಎಂದು ಕಿಡಿಕಾರಿದರು.
ಮೋದಿ ಸರ್ಕಾರ ಮಾಡಿದ ರೀತಿಯಲ್ಲಿ ನಮ್ಮ ಪಕ್ಷವು ರೈತರನ್ನು ಎಂದಿಗೂ ನಡೆಸಿಕೊಳ್ಳುವುದಿಲ್ಲ ಎಂದು ಪ್ರತಿಪಾದಿಸಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಎಂದಿಗೂ ರೈತರಿಗೆ ಬಾಗಿಲು ಮುಚ್ಚುವುದಿಲ್ಲ. ನಾವು ರೈತರು, ಬಡವರು ಮತ್ತು ಕಾರ್ಮಿಕರ ಸಹಭಾಗಿತ್ವದಲ್ಲಿ ಕೆಲಸ ಮಾಡಲು ಬಯಸುತ್ತೇವೆ. ರೈತರು ಮೂರು ಕೃಷಿ ಕಾನೂನನ್ನು ಹಿಂತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿ 1 ವರ್ಷ ಪ್ರತಿಭಟನೆಯನ್ನು ಮಾಡಿದರು. ಆದರೆ ನಮ್ಮ ಸರ್ಕಾರ ಈ ರೀತಿ ಮಾಡಿಲ್ಲ, ಮಾಡುವುದು ಇಲ್ಲ. ನಾವು ಜನರ ಪರ ಎಂದು ಒತ್ತಿ ಹೇಳಿದರು.
ಇಂದು ಎರಡು ಭಾರತಗಳಿವೆ. ಒಂದು ಶ್ರೀಮಂತರಿಗೆ ಮತ್ತು ಒಂದು ಬಡವರಿಗೆ. ದೇಶದ ಸುಮಾರು 100 ಜನರ ಆಯ್ದ ಗುಂಪು ದೇಶದ ಜನಸಂಖ್ಯೆಯ ಶೇ.40ರಷ್ಟು ಸಂಪತ್ತನ್ನು ಹೊಂದಿದೆ. ಇಂತಹ ಆದಾಯದ ಅಸಮಾನತೆಯು ಬೇರೆಲ್ಲಿಯೂ ಕಂಡುಬರುವುದಿಲ್ಲ. ಕೈಗಾರಿಕೋದ್ಯಮಿಗಳು ಬ್ರಿಟಿಷರ ವಿರುದ್ಧ ಹೋರಾಡಲಿಲ್ಲ, ದೇಶದ ರೈತರು ಮತ್ತು ಕಾರ್ಮಿಕರು ಹೋರಾಡಿದರು ಎಂದರು. ಇದನ್ನೂ ಓದಿ: ಅಬುಧಾಬಿಯಲ್ಲಿ 44.75 ಕೋಟಿ ರೂ. ಲಾಟರಿ ಗೆದ್ದ ಭಾರತೀಯ ಮಹಿಳೆ!
70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಗೆ ಫೆಬ್ರವರಿ 14 ರಂದು ಚುನಾವಣೆ ನಡೆಯಲಿದೆ. ಮತಗಳ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ.