ಬೆಂಗಳೂರು: ರಾಜ್ಯದ ಕೈಗಾರಿಕಾ ರಂಗದ ವಿವಿಧ ವಲಯಗಳಲ್ಲಿ ಆಸ್ಟ್ರೇಲಿಯಾದ ಕಂಪನಿಗಳೊಂದಿಗೆ ಹೆಚ್ಚಿನ ಸಹಭಾಗಿತ್ವಕ್ಕೆ ಸರ್ಕಾರವು ಉತ್ಸುಕವಾಗಿದ್ದು, ಇದಕ್ಕೆ ಅಗತ್ಯವಿರುವ ಎಲ್ಲ ಬಗೆಯ ಬೆಂಬಲವನ್ನೂ ಕೊಡಲಾಗುವುದು. ಆದ್ದರಿಂದ ಅಲ್ಲಿಯ ಕಂಪನಿಗಳು ರಾಜ್ಯದಲ್ಲಿ ಹೆಚ್ಚುಹೆಚ್ಚು ಬಂಡವಾಳ ಹೂಡಲು ಮುಂದೆ ಬರಬೇಕು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (MB Patil) ಹೇಳಿದ್ದಾರೆ.
ದಕ್ಷಿಣ ಆಸ್ಟ್ರೇಲಿಯಾ ರಾಜ್ಯದ ವ್ಯಾಪಾರ ಮತ್ತು ಹೂಡಿಕೆ ಸಚಿವರಾದ ಶ್ರೀ ನಿಕ್ ಚಾಂಪಿಯನ್ ಹಾಗೂ ಅವರ ತಂಡ ಈದಿನ ನನ್ನನ್ನು ಭೇಟಿ ಮಾಡಿದರು.
ಈ ವೇಳೆ ಮಾಹಿತಿ ತಂತ್ರಜ್ಞಾನ, ಶಿಕ್ಷಣ ಮತ್ತು ಸಂಶೋಧನೆ, ನವೀಕರಿಸಬಹುದಾದ ಇಂಧನ, ಗಣಿಗಾರಿಕೆ ಮತ್ತು ನೈಸರ್ಗಿಕ ಸಂಪನ್ಮೂಲಗಳು, ಬಯೋಟೆಕ್ನಾಲಜಿ ಮತ್ತು ಆರೋಗ್ಯ ರಕ್ಷಣೆ ಕ್ಷೇತ್ರಗಳ ಬಗೆಗೆ ವಿವರವಾಗಿ… pic.twitter.com/dynv5w8yk4
— M B Patil (@MBPatil) November 21, 2023
ಅವರು ಮಂಗಳವಾರ ಇಲ್ಲಿ ದಕ್ಷಿಣ ಆಸ್ಟ್ರೇಲಿಯಾದ ವಾಣಿಜ್ಯ ಮತ್ತು ಬಂಡವಾಳ ಹೂಡಿಕೆ ಸಚಿವ ನಿಕ್ ಚಾಂಪಿಯನ್ ಅವರೊಂದಿಗೆ ವಿಚಾರ ವಿನಿಮಯ ನಡೆಸಿದರು. ಬಳಿಕ ಮಾತನಾಡಿದ ಅವರು, ಕರ್ನಾಟಕ ಮತ್ತು ಆಸ್ಟ್ರೇಲಿಯಾ (Australia) ಮಾಹಿತಿ ತಂತ್ರಜ್ಞಾನ, ಶಿಕ್ಷಣ ಮತ್ತು ಸಂಶೋಧನೆ, ನವೀಕರಿಸಬಹುದಾದ ಇಂಧನ, ಗಣಿಗಾರಿಕೆ, ಜೈವಿಕ ತಂತ್ರಜ್ಞಾನ ಮತ್ತು ಆರೋಗ್ಯ ಸೇವೆಗಳ ಕ್ಷೇತ್ರಗಳಲ್ಲಿ ಸಮಾನ ಶಕ್ತಿಯನ್ನು ಹೊಂದಿವೆ. ಆದ್ದರಿಂದ ಸಹಭಾಗಿತ್ವಕ್ಕೆ ಇಲ್ಲಿ ಅಪಾರ ಅವಕಾಶವಿದ್ದು, ಆಸ್ಟ್ರೇಲಿಯಾದ ಹೂಡಿಕೆದಾರರು ಇದರತ್ತ ಗಮನ ಹರಿಸಬೇಕು ಎಂದರು.
ಆಸ್ಟ್ರೇಲಿಯಾದ ನೇರ ವಿದೇಶಿ ಹೂಡಿಕೆಯು ಭಾರತದಲ್ಲಿ ಈ ವರ್ಷದ ಮಾರ್ಚ್ ಹೊತ್ತಿಗೆ 1 ಬಿಲಿಯನ್ ಡಾಲರ್ ದಾಟಿದೆ. ಜೊತೆಗೆ ಸರಕು ಮತ್ತು ಸೇವಾ ವಿಭಾಗಗಳಲ್ಲಿ ದ್ವಿಪಕ್ಷೀಯ ವಹಿವಾಟು ಎರಡು ವರ್ಷಗಳ ಹಿಂದೆಯೇ 21.5 ಬಿಲಿಯನ್ ಡಾಲರ್ ಗಳಷ್ಟಿತ್ತು. ನಮ್ಮಿಂದ ನಡೆಯುತ್ತಿರುವ ರಫ್ತು ಮತ್ತು ಅಲ್ಲಿಂದ ಆಗುತ್ತಿರುವ ಆಮದು ಪ್ರಮಾಣ ಕೂಡ ಗಮನಾರ್ಹವಾಗಿದೆ ಎಂದು ಅವರು ನುಡಿದರು. ಇದನ್ನೂ ಓದಿ: ಶಕ್ತಿ-ನಿಶ್ಯಕ್ತಿ, ಅನ್ನಭಾಗ್ಯ-ಕನ್ನಭಾಗ್ಯ, ಗೃಹ ಜ್ಯೋತಿ-ಪ್ರತಿ ಮನೆಗಳಲ್ಲೂ ಕಗ್ಗತ್ತಲು – ಕಾಂಗ್ರೆಸ್ ಗ್ಯಾರಂಟಿಗಳ ಕುರಿತು ಬಿಜೆಪಿ ಲೇವಡಿ
ಎರಡೂ ದೇಶಗಳು ಸುಸ್ಥಿರ ಅಭಿವೃದ್ಧಿಯ ಗುರಿಯನ್ನು ಇಟ್ಟುಕೊಂಡಿದ್ದು, ಇದು ಸಾಧ್ಯವಾಗಬೇಕಾದರೆ ಸಹಭಾಗಿತ್ವ ಗಣನೀಯವಾಗಿ ಹೆಚ್ಚಾಗಬೇಕು. ಇದನ್ನು ಆಸ್ಟ್ರೇಲಿಯಾ ಕೂಡ ಮನವರಿಕೆ ಮಾಡಿಕೊಂಡಿದೆ. ಇದರಿಂದ ಎರಡೂ ದೇಶಗಳ ಆರ್ಥಿಕತೆಗೆ ಅಪಾರ ಲಾಭವಿದೆ. ರಾಜ್ಯವು ಉದ್ಯಮಸ್ನೇಹಿ ನೀತಿಗಳಿಗೆ ಹೆಸರಾಗಿದ್ದು, ನಮ್ಮಲ್ಲಿ ಅತ್ಯುತ್ತಮ ಮೂಲಸೌಕರ್ಯ, ಕೌಶಲಪೂರ್ಣ ಮಾನವ ಸಂಪನ್ಮೂಲ ಕೂಡ ಸಮೃದ್ಧವಾಗಿದೆ ಎಂದು ಸಚಿವರು ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಮುಂತಾದವರು ಉಪಸ್ಥಿತರಿದ್ದರು.