ಬೆಂಗಳೂರು: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆ ಮಲ್ಲೇಶ್ವರಂ ಸರ್ಕಾರಿ ಕಾಲೇಜು ಮೈದಾನದಲ್ಲಿ ಮಧ್ಯರಾತ್ರಿ 12 ಗಂಟೆಗೆ ಸಿಎಂ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣದ ವೇಳೆ ಸಚಿವ ಅಶ್ವಥ್ ನಾರಾಯಣ್ ಉಪಸ್ಥಿತರಿದ್ದರು. ಗಾಯಕಿ ಮಂಗ್ಲಿ ಮತ್ತು ಗಾಯಕರ ತಂಡದಿಂದ ದೇಶಭಕ್ತಿ ಗೀತೆಗಳನ್ನು ಹಾಡಲಾಯಿತು.
ಧ್ವಜಾರೋಹಣದ ಬಳಿಕ ಮಾತಾಡಿದ ಸಿಎಂ, ದೇಶದ ಸ್ವಾತಂತ್ರ್ಯವನ್ನು ಸಂಭ್ರಮಿಸುವ ಕಾಲ ಇದು. ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟವರನ್ನು ನೆನೆಯಬೇಕಾದ ದಿನ. 1824ರಲ್ಲಿ ಕರ್ನಾಟಕದಲ್ಲೇ ಸ್ವಾತಂತ್ರ್ಯದ ಕಿಚ್ಚು ಮೊಳಗಿತ್ತು ಎಂದು ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರನ್ನು ಸ್ಮರಿಸಿದರು. ಹರ್ ಘರ್ ತಿರಂಗವನ್ನು ಕೊಂಡಾಡಿದ ಸಿಎಂ, ಕೊರೊನಾದಿಂದ ದೇಶವನ್ನು ಕಾಪಾಡಿದವರು ಮೋದಿ ಎಂದು ಶ್ಲಾಘಿಸಿದರು. ಇದನ್ನೂ ಓದಿ: ಭವ್ಯ ಭಾರತಕ್ಕೆ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ – ದೇಶವಾಸಿಗಳಿಗೆ ಪ್ರಧಾನಿ ಶುಭಾಶಯ
ಬಳಿಕ ಅಶ್ವಥ್ ನಾರಾಯಣ್ ಮಾತಾಡಿ, ಇವತ್ತು ದೇಶದಲ್ಲಿ ದೊಡ್ಡ ಸಂಚಲನವಾಗುತ್ತಿದೆ. ಸ್ವಾತಂತ್ರ್ಯ ವೀರರ ಕನಸು ನನಸು ಮಾಡುವ ಸುದಿನ ಎಂದರು. 2 ವರ್ಷ ಕೋವಿಡ್ ಕಾರಣದಿಂದ ಸ್ವಾತಂತ್ರ್ಯ ದಿನವನ್ನು ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಹೊಸ ಮೆರುಗು ದೊರಕಿದೆ. ಇದನ್ನೂ ಓದಿ: ಭಾಷಣದಲ್ಲಿ ಕುವೆಂಪು ಕವನ ಉಲ್ಲೇಖಿಸಿದ ರಾಷ್ಟ್ರಪತಿ ಮುರ್ಮು