ರಾಯಚೂರು: ರಾಜ್ಯದಲ್ಲೇ ಮೊದಲ ಪ್ರಕರಣವಾಗಿ ರಾಯಚೂರಿನಲ್ಲಿ (Raichur) ಝಿಕಾ ವೈರಸ್ (Zika Virus) ಪತ್ತೆಯಾದ ಹಿನ್ನೆಲೆ ಜಿಲ್ಲೆಯಲ್ಲಿ ಚಿಕ್ಕಮಕ್ಕಳ ಪೋಷಕರು ಆತಂಕದಲ್ಲಿದ್ದಾರೆ. ಜಿಲ್ಲೆಯಲ್ಲಿ ಈಗ ಯಾವುದೇ ಮಕ್ಕಳ (Children) ಆಸ್ಪತ್ರೆಯನ್ನು ನೋಡಿದರೂ ತುಂಬಿ ತುಳುಕುತ್ತಿವೆ.
ಝಿಕಾ ವೈರಸ್ ಆತಂಕದಲ್ಲಿ ಸಣ್ಣ ಜ್ವರಕ್ಕೂ (Fever) ಪೋಷಕರು ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾರೆ. ಜ್ವರ ಬಂದರೂ ಡೆಂಗ್ಯೂ ಲಕ್ಷಣಗಳ ಅನುಮಾನಕ್ಕೆ ಆಸ್ಪತ್ರೆಗೆ ಬರುತ್ತಿದ್ದಾರೆ. ಚಂಡಮಾರುತದ ಪರಿಣಾಮ ವಾತಾವರಣ ಬದಲಾಗಿರುವುದರಿಂದಲೂ ಮಕ್ಕಳಲ್ಲಿ ಜ್ವರ, ನೆಗಡಿಯಂತ ಸಾಮಾನ್ಯ ರೋಗಗಳು ಹೆಚ್ಚಾಗಿವೆ.
ಜಿಲ್ಲೆಯ ಮಾನ್ವಿ ತಾಲೂಕಿನ ಕೋಳಿಕ್ಯಾಂಪ್ನ ಬಾಲಕಿಯಲ್ಲಿ ಝಿಕಾ ವೈರಸ್ ಪತ್ತೆಯಾದ ಬಳಿಕ ಪೋಷಕರು ಹೆಚ್ಚು ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ಮಕ್ಕಳ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕ್ಲಿನಿಕ್ಗಳಲ್ಲೂ ಕೂಡಾ ಮಕ್ಕಳನ್ನು ಕರೆದುಕೊಂಡು ಬರುವವರ ಸಂಖ್ಯೆ ಹೆಚ್ಚಾಗಿದೆ. ಆರೋಗ್ಯ ಇಲಾಖೆಯ ಜಾಗೃತಿ ನಡುವೆಯೂ ಪೋಷಕರು ಆತಂಕಗೊಂಡಿದ್ದಾರೆ. ಝಿಕಾ ವೈರಸ್ ಬಗ್ಗೆ ಚಿಕ್ಕಮಕ್ಕಳ ಪೋಷಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ, ಆದರೆ ಗರ್ಭಿಣಿಯರು ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿ ಏಮ್ಸ್ಗೆ ಕನ್ನ ಹಾಕಿದ್ದು ಚೀನಾ – ಡೇಟಾ ಈಗ ಸುರಕ್ಷಿತ
ಸರ್ಕಾರ ಈಗಾಗಲೇ ಬಿಡುಗಡೆ ಮಾಡಿರುವ ಗೈಡ್ಲೈನ್ಸ್ ಪ್ರಕಾರ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಗೈಡ್ಲೈನ್ಸ್ ಪ್ರಕಾರ ಅಧಿಕಾರಿಗಳ ಸಭೆ, ಸ್ಯಾಂಪಲ್ ಸಂಗ್ರಹ, ಜನ ಜಾಗೃತಿ, ಸೊಳ್ಳೆಗಳ ನಿಯಂತ್ರಣಕ್ಕೆ ಮುಂದಾಗಿದೆ. ಗರ್ಭಿಣಿಯರ ಬಗ್ಗೆ ಹೆಚ್ಚು ಜಾಗ್ರತೆ ವಹಿಸುತ್ತಿರುವ ಆರೋಗ್ಯ ಇಲಾಖೆ ಸೊಳ್ಳೆ ಪರದೆ ವಿತರಣೆ, ಫಾಗಿಂಗ್ ಮಾಡುತ್ತಿದೆ. ನೀರಿನಲ್ಲಿ ಸೊಳ್ಳೆಗಳ ಉತ್ಪತ್ತಿ ತಡೆಯಲು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕಾರ್ಯ ಮುಂದುವರೆಸಿದೆ.
ಒಟ್ಟಿನಲ್ಲಿ ವೈದ್ಯರು ಹಾಗೂ ಅಧಿಕಾರಿಗಳು ಝಿಕಾ ವೈರಸ್ ಅಷ್ಟೊಂದು ಅಪಾಯಕಾರಿ ಅಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಪೋಷಕರು ಮಾತ್ರ ಆತಂಕದಲ್ಲಿದ್ದಾರೆ. ಜನ ಆತಂಕ ಪಡುವ ಬದಲು ಮನೆ ಸುತ್ತಮುತ್ತಲ ವಾತಾವರಣ ಸ್ವಚ್ಚವಾಗಿಟ್ಟುಕೊಂಡು, ಸೊಳ್ಳೆಗಳ ನಿಯಂತ್ರಣ ಮಾಡಬೇಕು ಎಂದು ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ. ಇದನ್ನೂ ಓದಿ: ಪತ್ನಿಯಿಂದ ಕಿರುಕುಳ – ಮೂರು ತಿಂಗಳ ಹಿಂದೆ ಮದ್ವೆಯಾಗಿದ್ದ ವ್ಯಕ್ತಿ ಆತ್ಮಹತ್ಯೆ