ಕೆಲ ದಿನಗಳ ಹಿಂದೆಯಷ್ಟೇ ತಮಿಳಿನಲ್ಲಿ ಇರೈವನ್ ಎಂಬ ಸಿನಿಮಾ ತೆರೆ ಕಂಡಿತ್ತು. ಜಯಂ ರವಿ ನಾಯಕನಾಗಿ, ರಾಹುಲ್ ಬೋಸ್ ಖಳನಾಯಕನಾಗಿ ನಟಿಸಿರುವ ಈ ಚಿತ್ರ ಯುವತಿಯರಿಗೆ ಮೈನಡುಗಿಸುವಂತಿತ್ತು. ಈ ಸಿನಿಮಾದಲ್ಲಿ ಮದುವೆಯಾಗದ ಯುವತಿಯರನ್ನ ಕಿಡ್ನ್ಯಾಪ್ ಮಾಡಿ ಕ್ರೂರವಾಗಿ ಕೊಲ್ಲುವ ವ್ಯಕ್ತಿ, ಅವರ ಚೀರಾಟ.. ಕೂಗಾಟ… ನರಳಾಟ ಕಂಡು-ಕೇಳಿ ಆನಂದಿಸುತ್ತಾನೆ. ಅಬ್ಬಬ್ಬಾ… ತೆರೆಯ ಮೇಲೆ ಕಾಣುವ ಈ ಸಿನಿಮಾ ನೋಡಿದ್ರೆನೇ ಮೈ ನಡುಗುತ್ತೆ ಅಂದ್ಮೇಲೆ ನಿಜ ಜೀವದಲ್ಲಿ ನಡೆದ್ರೆ ಹೇಗಿರುತ್ತೆ? ಒಂದು ಕ್ಷಣ ಊಹೆಗೂ ನಿಲುಕದು. ಇತ್ತೀಚಿಗೆ ಅಂತಹದ್ದೇ ಒಂದು ಹತ್ಯೆ ಕೇರಳದಲ್ಲಿ ನಡೆಯಿತು.. ಆದ್ರೆ ಇಲ್ಲಿ ಸೈಕೋ ಹಂತಕ ಕೊಂದಿದ್ದು ಯುವತಿಯರನ್ನಲ್ಲ.. ತನ್ನ ಕುಟುಂಬದ ಐವರನ್ನ.. ಈ ರೋಚಕ ಕಥೆ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…
Advertisement
ರಕ್ತ ಸಿಕ್ತ ಕಥೆ ಶುರುವಾಗಿದ್ದೇ ಇಲ್ಲಿಂದ…
ಫೆ.24ರಂದು ಸಂಜೆ ಸರಿಯಾಗಿ 6:15 ಆಗಿತ್ತು, ಕತ್ತಲು ಆವರಿಸಲು ಇನ್ನೊಂದು ಅರ್ಧಗಂಟೆಯಷ್ಟೇ ಬಾಕಿಯಿತ್ತು. ಅಷ್ಟರಲ್ಲಿ ಯುವಕನೊಬ್ಬ ತಿರುವನಂತಪುರಂನಲ್ಲಿರುವ ವೆಂಜರಮುಡು ಪೊಲೀಸ್ ಠಾಣೆಗೆ ಬಂದವನೇ ಸರ್.. ನಾನು 6 ಕೊಲೆ ಮಾಡಿದ್ದೇನೆ ಅಂತ ಹೇಳಿದ. ಅವನ ಹೆಸರು ಆಫಾನ್ ಒಂದು ಕ್ಷಣ ಚಕಿತರಾದ ಪೊಲೀಸರು ಮುಂದೇನು ಅಂತ ಯೋಚಿಸುವ ಮೊದಲೇ ಈ 6 ಕೊಲೆಗಳನ್ನು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯೊಳಗೆ ಮಾಡಿದ್ದೇನೆ, ನನ್ನ ಮನೆ ಪೊಲೀಸ್ ಠಾಣೆಗೆ ಹತ್ತಿರದಲ್ಲೇ ಇದೆ, ಅಲ್ಲಿ ಮೂರು ಮೃತದೇಹಗಳು ಬಿದ್ದಿವೆ ಅಂದುಬಿಟ್ಟ. ಕೂಡಲೇ ಅವನನ್ನ ಸ್ಟೇಷನ್ನಲ್ಲಿ ಕೂರಿಸಿ ತಮ್ಮ ಪೊಲೀಸರ ತಂಡದೊಂದಿಗೆ ಅವು ಹೇಳಿದ ವಿಳಾಸಕ್ಕೆ ದೌಡು ಕಿತ್ತರು. ಕೊನೆಗೆ ಒಂದೊಂದೇ ಶವಗಳನ್ನು ಪತ್ತೆ ಮಾಡಿದರು. ಅವನು ತನ್ನ ಅಮನನ್ನೂ ಸತ್ತಿದಾಳೆಂದು ತಿಳಿದು 6 ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಆದ್ರೆ ಪೊಲೀಸರಿಗೆ ಅಲ್ಲಿ ಸಿಕ್ಕಿದ್ದು, 5 ಶವಗಳು, ಏಕೆಂದರೆ ಸತ್ತಿದ್ದಾಳೆ ಅನ್ನೋ ತನ್ನ ತಾಯಿ ಬದುಕಿಯೇ ಇದ್ದಳು. ಪೊಲೀಸರು ಕಾರಣ ಕೇಳಿದಾಗ ಅನು ಹೇಳಿದ್ದೇ ವಿಚಿತ್ರವಾಗಿತ್ತು… ಕೊರೊನಾಗಿಂತ ಮುಂಚೆ ಎಲ್ಲವೂ ಚೆನ್ನಾಗಿಯೇ ಇತ್ತು. ಆ ನಂತರ ಮನೆಯ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಸಾಲವೂ ಹೆಚ್ಚಾಗಿತ್ತು, ನನ್ನ ಹುಡುಗಿಗೆ ಸ್ವಂತ ಶಕ್ತಿಯಿಂದ ಬದುಕಲು ಆಗುತ್ತಿರಲಿಲ್ಲ. ಅದಕ್ಕಾಗಿ ಕೊಂದುಬಿಟ್ಟೆನೆಂದು ಹೇಳಿದ. ಅವನೆಂತಹ ಸೈಕೋ ಅಂದ್ರೆ ತನ್ನ ಕುಟುಂಬದವರನ್ನೂ ಕೊಂದು ತಾನೂ ವಿಷ ಸೇವಿಸಿ ಬಂದಿದ್ದ.
Advertisement
ಸುತ್ತಿಗೆ ಹೊಡೆತಕ್ಕೆ ಬಿತ್ತು ಒಂದೊಂದೇ ಹೆಣ…
ಸಾಮಾನ್ಯವಾಗಿ ಸೈಕೋ ಹಂತಕರು ಯಾವ ಸಂದರ್ಭದಲ್ಲಿ ಹೇಗಿರುತ್ತಾರೆ ಅನ್ನೋದು ಊಹಿಸೋಕು ಸಾಧ್ಯ ಇರಲ್ಲ. ಕೆಲವೊಮ್ಮೆ ಸಭ್ಯಸ್ಥರಂತೆ ಇನ್ನೂ ಕೆಲವೊಮ್ಮೆ ಕ್ರೂರಿಗಳಾಗಿಯೂ ಬದಲಾಗುತ್ತಿರುತ್ತಾರೆ. ಅದೇ ರೀತಿ ನೆರೆಹೊರೆಯವರಿಗೆ ಸಭ್ಯಸ್ಥನಂತೆ ಕಾಣುತ್ತಿದ್ದ ಆಫಾನ್, ಆ ದಿನ ಬೆಳಗ್ಗೆ 10.30 ರಿಂದ 12.30ರ ಸುಮಾರು ವೆಂಜರಮೂಡುವಿನ ಪಾಂಗೊಡೆ ಮನೆಯಲ್ಲಿ ಹಾಲ್ನಲ್ಲಿ ಕುಳಿತಿದ್ದ ತನ್ನ ʻಸಲ್ಮಾ ಬೀಬಿ’ (74) ಎನ್ನುವ ಅಜ್ಜಿಯನ್ನು ಸುತ್ತಿಗೆಯಿಂದ ಹೊಡೆದು ಸಾಯಿಸಿದ್ದಾನೆ. ನಂತರ ಮಧ್ಯಾಹ್ನ 1.30 ರಿಂದ 4 ಗಂಟೆ ಸುಮಾರು ಪಾಂಗೊಡೆಯಿಂದ 17 ಕಿ.ಮೀ ದೂರದಲ್ಲಿರುವ ಎಸ್.ಎನ್ ಪುರ ಎಂಬಲ್ಲಿಗೆ ತೆರಳಿ ತನ್ನ ಚಿಕ್ಕಪ್ಪ ‘ಲತೀಫ್’ (60) ಮತ್ತು ಚಿಕ್ಕಮ್ಮ ‘ಶಾಹೀದಾ’ (56) ಎನ್ನುವರನ್ನು ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದ. ಅಷ್ಟಕ್ಕೆ ಸುಮ್ಮನಾಗದ ಆಫಾನ್ ಶಾಲೆಗೆ ಹೋಗಿದ್ದ ತನ್ನ 14 ವರ್ಷದ ತಮ್ಮ ʻಅಹ್ಸಾನ್ʼನ್ನು ಬೈಕ್ನಲ್ಲಿ ಕರೆದುಕೊಂಡು ಎಸ್.ಎನ್ ಪುರದಿಂದ 5 ಕಿ.ಮೀ ದೂರ ಇರುವ ಪೆರುಮಾಳ್ ಎಂಬಲ್ಲಿ ತನ್ನ ತಾಯಿ ರೇಷ್ಮಾ (50) ಹಾಗೂ ಗೆಳತಿ ಫರ್ಸಾನಾ (22) ಇದ್ದ ಮನೆಗೆ ಹೋಗಿದ್ದ, ಅದಕ್ಕೂ ಮುನ್ನ ತಮ್ಮನಿಗೆ ಅವನಿಷ್ಠದ ಊಟ ಕೊಡಿಸಿದ್ದ. ಆಗ ಸಂಜೆ 4 ಗಂಟೆ ಸಮಯ. ಮೂವರನ್ನು ಪ್ರತ್ಯೇಕವಾಗಿ ಮಾತನಾಡಿಸುವ ನೆಪದಲ್ಲಿ ಹೋಗಿ, ತನ್ನ ಬಳಿಯಿದ್ದ ಸುತ್ತಿಗೆಯಿಂದ ಹಣೆಗೆ, ತಲೆಗೆ ರಪ್ಪ ರಪ್ಪನೆ ಹಲವು ಬಾರಿ ಜೋರಾಗಿ ಹೊಡೆದಿದ್ದಾನೆ. ಒಂದೇ ಏಟಿಗೆ ತಮ್ಮ ಆಫ್ರಾನ್ ಮತ್ತು ಗೆಳತಿ ಫರ್ಸಾನಾ ಮೃತಪಟ್ಟಿದ್ದಾರೆ. ಆ ವೇಳೆ ಹಂತಕ ಅಲ್ಲಿಂದ ಕಾಲ್ಕಿತ್ತಿದ್ದ, ತನ್ನ ತಾಯಿ ಕೂಡ ಸತ್ತಳೆಂದು ಭಾವಿಸಿದ್ದ. ಆದರೆ, ಆತನ ತಾಯಿಯ ಪ್ರಾಣ ಹೋಗಿರಲಿಲ್ಲ. ಕಡೆಗೆ ತನ್ನ ಮನಸ್ಸಿನ ಕ್ರೌರ್ಯವನ್ನು ತಣಿಸಿಕೊಂಡ ಆಫಾನ್ ಅದೇ ದಿನ ರಾತ್ರಿ 8 ಗಂಟೆ ಸುಮಾರು ವೆಂಜರಮೂಡು ಪೊಲೀಸ್ ಠಾಣೆಗೆ ಹಾಜರಾಗಿದ್ದ. ಕೂಡಲೇ ಪೊಲೀಸರು ಕ್ರೈಮ್ ಸೀನ್ ಪರಿಶೀಲನೆ ನಡೆಸಿದಾಗ ಆಫಾನ್ ಕೃತ್ಯ ಕಂಡು ಬೆಚ್ಚಿ ಬಿದ್ದಿದ್ದಾರೆ. ಇದಕ್ಕೂ ಮುನ್ನ ಆತ ಬೇರೆ ಬೇರೆ ವಿಧಾನಗಳನ್ನು ಬಳಸಿ ಆತ್ಮಹತ್ಯೆಗೆ ಯತ್ನಿಸಿದ್ದ.
Advertisement
ಹಂತಕ ʻಆಫಾನ್ ಕೊಲೆಗಳನ್ನು ಮಾಡುವ ಮುನ್ನ ಡ್ರಗ್ಸ್ ತೆಗೆದುಕೊಂಡಿದ್ದು ನಂತರವೇ ದೃಢಪಟ್ಟಿತ್ತು. ಆದರೆ, ಯಾವ ಡ್ರಗ್ಸ್ ತೆಗೆದುಕೊಂಡಿದ್ದ ಎಂಬುದು ಇನ್ನೂ ಖಚಿತವಾಗಿಲ್ಲ. ಪೊಲೀಸರಿಗೆ ಶರಣಾದಾಗಲೂ ಅವನ ಮುಖದಲ್ಲಿ ಪಶ್ಚಾತ್ತಾಪದ ಮನೋಭಾವ ಕಂಡಿರಲಿಲ್ಲ. ತನ್ನವರನ್ನೇ ಅತ್ಯಂತ ಭೀಕರವಾಗಿ ಕೊಲೆ ಮಾಡಿದ್ದಾನೆ. ಕೊಲೆಗಳ ಉದ್ದೇಶ ಏನು? ಅಂತ ಕೇಳಿದ್ರೆ ಆತನ ಬಳಿಯಿರುವ ಉತ್ತರ ಆರ್ಥಿಕ ಸಮಸ್ಯೆ. ಆದ್ರೆ ಅಚ್ಚರಿ ಏನು ಗೊತ್ತಾ? ಸ್ಥಳೀಯರನ್ನ ಕೇಳಿದ್ರೆ, ಆತ ತುಂಬಾ ಒಳ್ಳೆಯ ಹುಡುಗನಂತೆ ಕಾಣುತ್ತಿದ್ದ. ಯಾರ ಮನಸ್ಸಿಗೂ ನೋವುಂಟು ಮಾಡಿರಲಿಲ್ಲ. ಏಕೆ ಹೀಗೆ ಮಾಡಿದ? ಎಂಬುದು ಗೊತ್ತಾಗುತ್ತಿಲ್ಲ ಅಂತ ಹೇಳ್ತಾರೆ. ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ.
Advertisement
ಕ್ರಿಮಿನಲ್ ಮೈಂಡ್ ಹಿಂದಿನ ಕಥೆ ಏನು?
ವಿಜ್ಞಾನ ಲೋಕವೆಂಬುದು ಕುತೂಹಲ, ಬಗೆದಷ್ಟೂ ಆಳ. ಇಲ್ಲಿ ಎಲ್ಲದಕ್ಕೂ ಉತ್ತರ ಸಿಗುವುದಿಲ್ಲ. ಕೆಲವೊಂದು ಅನುಭವಕ್ಕೆ ಬಂದಾಗಷ್ಟೇ ನಂಬಬೇಕಾಗುತ್ತದೆ, ಇಲ್ಲದಿದ್ದರೆ ಅನುಭವಕ್ಕಾಗಿ ಕಾಯಬೇಕಾಗುತ್ತೆ. ಆದಾಗ್ಯೂ ಕೆಲ ಮನೋವಿಜ್ಞಾನಿಗಳು ಮನುಷ್ಯನಲ್ಲಿ ಮಾನಸಿಕ ವಿಕೃತಿಗಳನ್ನು ಕಂಡಾಗ ಅವುಗಳನ್ನು ʻಕ್ರಿಮಿನಲ್ ಮೈಂಡ್ʼ ಅನ್ನೋ ಪದಗಳಲ್ಲಿ ಗುರುತಿಸಿ ಅಭಿಪ್ರಾಯಗಳನ್ನು ಪ್ರಕಟಿಸಿದ್ದಾರೆ. ʻಕ್ರಿಮಿನಲ್ ಮೈಂಡ್ʼ ಎಂಬ ಪದವನ್ನು ಮೊದಲಬಾರಿಗೆ 1928ರಲ್ಲಿ ಪರಿಚಯಿಸಲಾಯಿತು. ʻಜರ್ನಲ್ ಆಫ್ ಅಬ್ನಾರ್ಮಲ್ ಅಂಡ್ ಸೋಶಿಯಲ್ ಸೈಕಾಲಜಿʼ ಎಂಬ ಜರ್ನಲ್ನಲ್ಲಿ ಲೇಖನವೂ ಪ್ರಕಟವಾಯಿತು. ʻಕ್ರಿಮಿನಲ್ ಮೈಂಡ್ʼ ವ್ಯಕ್ತಿಗಳು ಕೇವಲ ಒಬ್ಬಿಬ್ಬರಿಗೆ ಮಾತ್ರವಲ್ಲ ಇಡೀ ಮಾನವ ಕುಲಕ್ಕೆ ಅಪಾಯಕಾರಿ ಎಂದು ಹೇಳಿದ್ದರು. ʻಕ್ರಿಮಿನಲ್ ಮೈಂಡ್ʼ ಎಂಬ ಪದವು ಸುಮಾರು ನೂರು ವರ್ಷಗಳ ಹಿಂದೆಯೇ ಅಸ್ತಿತ್ವಕ್ಕೆ ಬಂದಿದ್ದರೂ, ಇಂತಹ ಕೇಸ್ಗಳು ವಿಜ್ಞಾನ ಲೋಕಕ್ಕೆ ಹಾಗೂ ವಿಜ್ಞಾನಿಗಳಿಗೆ ಸವಾಲಿನದ್ದಾಗಿಯೇ ಇದೆ. ಕೆಲ ವಿಜ್ಞಾನಿಗಳು ಇಂತಹ ಮಾನಸಿಕ ಸ್ಥಿತಿಯುಳ್ಳ ವ್ಯಕ್ತಿಗಳನ್ನು ಮುಂಚಿತವಾಗಿಯೇ ಗುರುತಿಸಬಹುದಾ ಅನ್ನೋ ಪ್ರಯತ್ನಕ್ಕೂ ಮುಂದಾಗಿದ್ದಾರೆ. ಅದಕ್ಕಾಗಿ ಮೆದುಳಿನ ಸ್ಕ್ಯಾನರ್ಗಳ ಮೊರೆ ಹೋಗಿದ್ದಾರೆ.
ತಜ್ಞರ ಪ್ರಕಾರ, ಕೆಲವೇ ಕೆಲವು ಲಕ್ಷಣಗಳನ್ನು ನೋಡಿ ಭವಿಷ್ಯದಲ್ಲಿ ಯಾರೂ ಭಯಾನಕ ಕೊಲೆಗಾರನಾಗಬಹುದು ಅಂತ ನಿರ್ಧರಿಸಲು ಸಾಧ್ಯವಿಲ್ಲ. ಏಕೆಂದರೆ ಅನೇಕ ಸನ್ನಿವೇಶಗಳಲ್ಲಿ ಒಬ್ಬ ವ್ಯಕ್ತಿ ಪ್ರಚೋದನೆಯಿಂದಾಗಿ ತಪ್ಪು ಮಾಡಿರುತ್ತಾನೆ. ಆ ತಪ್ಪನ್ನು ಮುಚ್ಚಿಹಾಕಲು ಮತ್ತೆ ಮತ್ತೆ ತಪ್ಪು ಮಾಡುತ್ತಲೇ ಇರುತ್ತಾನೆ. ಇದನ್ನು ʻಕೋಲ್ಡ್ ಬ್ಲಡ್ʼ ಎಂದೂ ಸಹ ಕರೆಯುತ್ತಾರೆ ಎಂಬುದಾಗಿ ತಜ್ಞರು ತಿಳಿಸಿದ್ದಾರೆ.
ಗಂಟೆಗಳ ಕಾಲ ಬಾಲಕಿ ಶವದ ಮೇಲೆ ಅತ್ಯಾಚಾರ ಎಸಗಿದ್ದ
ಈ ಹಿಂದೆಯೂ ದೇಶದ ಅನೇಕ ಕಡೆ ಸೈಕೋ ಹಂತಕರು ತಮ್ಮ ಅಟ್ಟಹಾಸ ಮೆರೆದಿದ್ದಾರೆ. ಗುಜರಾತ್ ಪೊಲೀಸರು ಹಿಂದೊಮ್ಮೆ ಸೈಕೋ ಕಿಲ್ಲರ್ ಒಬ್ಬನನ್ನ ಬಂಧಿಸಿದ್ದರು. ಆತನ ಹೆಸರು ರಾಹುಲ್ ಸಿಂಗ್ ಜಾಟ್ (29) ಹರಿಯಾಣದ ರೋಹ್ಟಕ್ ನಿವಾಸಿ. ಕ್ರೌರ್ಯದ ಎಲ್ಲಾ ಮಿತಿಗಳನ್ನು ದಾಟಿದ ಆ ಹಂತಕ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಯಾರನ್ನೂ ಬಿಡದೇ ಕೊಲ್ಲುತ್ತಿದ್ದ. ಬಾಲಕಿಯೊಬ್ಬಳನ್ನ ಕೊಲೆ ಮಾಡಿ ನಂತರ ಆಕೆಯ ಶವದ ಮೇಲೆ ಗಂಟೆಗಳ ಕಾಲ ಅತ್ಯಾಚಾರವೆಸಗಿದ್ದ. ಪೊಲೀಸರಿಗೆ ಸಿಕ್ಕಿಬಿದ್ದಾಗ.. ಹೌದು.. ನಾನು ಐದು ರಾಜ್ಯಗಳಲ್ಲಿ ಕೊಲೆಗಳನ್ನ ಮಾಡಿದ್ದೇನೆ ಎಂದು ರಾಜಾರೋಷವಾಗಿ ಒಪ್ಪಿಕೊಂಡಿದ್ದ. ಮಹಾರಾಷ್ಟ್ರ, ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣದಲ್ಲಿ ರೈಲಿನಲ್ಲಿ ಕೊಲೆ ಮಾಡಿದ್ದೇನೆ, ರೈಲಿನಲ್ಲೇ ಅತ್ಯಾಚಾರ ಎಸಗಿದ್ದೇನೆ ಎಂದು ಹಂತಕ ಪೊಲೀಸರಿಗೆ ತಿಳಿಸಿದ್ದ. ಕೊನೆಗೂ ಹರಸಾಹಸ ಪಟ್ಟು ಬಂಧಿಸಿದ ಪೊಲೀಸರು ಜೈಲಿಗಟ್ಟಿದರು.
ಇಷ್ಟೇ ಅಲ್ಲ ಸುಮಾರು 27 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದ ಮಹಿಳೆಯರ ಪಾಲಿನ ಆತಂಕವಾದಿ ಸೈಕೋ ಜೈ ಶಂಕರ್, ಬೆಂಗಳೂರಿನ ವೈಯಾಲಿಕಾವಲ್ನಲ್ಲಿ ಯುವತಿಯನ್ನ ತುಂಡರಿಸಿದ್ದ ರಂಜನ್ರಾಯ್ ಕೇಸ್, ದೆಹಲಿಯ ಶ್ರದ್ಧಾ ವಾಕರ್ ಹತ್ಯೆ, ಛತ್ತೀಸ್ಗಢದ ರಾಯ್ಪುರ್ನಲ್ಲಿ ಮಹಿಳಾ ಅಧಿಕಾರಿಯನ್ನು ಕೊಂದು ಆಕೆಯ ಶವದ ಮೇಲೂ ಅತ್ಯಾಚಾರ ಮಾಡಿದ್ದ ಪ್ರಕರಣಗಳು ಸೈಕೋ ಹಂತಕರ ಮನಸ್ಥಿತಿಗೆ ಉದಾಹರಣೆಯಾಗಿದೆ.
ಒಟ್ಟಿನಲ್ಲಿ ಮನುಷ್ಯ ಹುಟ್ಟಿನಿಂದಲೇ ಸೈಕೋ ಹಂತನಕಾಗುವುದಿಲ್ಲ ಅನ್ನೋದು ತಜ್ಞರ ಅಭಿಪ್ರಾಯ. ಯಾವುದೋ ಒಂದು ವಿಷಯ ಆತನ ಮೇಲೆ ಗಾಢವಾಗಿ ಪರಿಣಾಮ ಬೀರಿದಾಗ ತನ್ನ ಉದ್ದೇಶ ಈಡೇರಿಕೆಗಾಗಿ ತಪ್ಪನ್ನೇ ತನ್ನ ಪಾಲಿಗೆ ಸರಿ ಅಂದುಕೊಳ್ಳುತ್ತಾನೆ.. ಆಗ ಇಂತಹ ಅನಾಹುತಗಳಾಗುತ್ತವೆ ಎಂದು ಮನೋವೈದ್ಯರು ಹೇಳಿದ್ದಾರೆ.