ನವದೆಹಲಿ: 5,000 ಕೋಟಿ ರೂ.ಗಳ ಡ್ರಗ್ಸ್ (Drugs) ದಂಧೆಯ ಬೆನ್ನು ಬಿದ್ದು ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರ (Delhi Police) ತಂಡಕ್ಕೆ ಲಂಡನ್ ಮತ್ತು ದುಬೈ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ಜಾಲದ ಮಾಹಿತಿ ಲಭ್ಯವಾಗಿದೆ. ದಂಧೆಯ ಹಿಂದಿರುವ ಆರೋಪಿ ತುಷಾರ್ ಗೋಯಲ್ ಸೇರಿದಂತೆ ಇತರೆ ಆರೋಪಿಗಳ ಪ್ರಾಥಮಿಕ ವಿಚಾರಣೆಯ ಬಳಿಕ ಈ ಮಾಹಿತಿ ಸ್ಪಷ್ಟವಾಗಿದೆ.
ಪ್ರಕರಣದಲ್ಲಿ ದಕ್ಷಿಣ ದೆಹಲಿಯ ಸರೋಜಿನಿ ನಗರದ ನಿವಾಸಿ ವೀರೇಂದ್ರ ಬಸೋಯಾ ಹೆಸರು ಪ್ರಮುಖವಾಗಿ ಕೇಳಿ ಬಂದಿದೆ. ಬಸೋಯಾ ದುಬೈನಿಂದ ಬೃಹತ್ ಡ್ರಗ್ ಸಿಂಡಿಕೇಟ್ ನಡೆಸುತ್ತಿದ್ದಾನೆ ಎನ್ನಲಾಗಿದೆ. ಕಳೆದ ವರ್ಷ ಪುಣೆ ಪೊಲೀಸರು 3,000 ಕೋಟಿ ರೂಪಾಯಿ ಮೌಲ್ಯದ ‘ಮಿಯಾಂವ್ ಮಿಯಾಂವ್’ ಡ್ರಗ್ಸ್ ವಶಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲೂ ಬಸೋಯಾ ಹೆಸರು ಕೇಳಿಬಂದಿತ್ತು. ಇದನ್ನೂ ಓದಿ: ದಲಿತ ಶಿಕ್ಷಕ ಸೇರಿ ನಾಲ್ವರ ಭೀಕರ ಹತ್ಯೆ ಕೇಸ್; ಆರೋಪಿಗೆ ಗುಂಡೇಟು
ಪುಣೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಂಧನದಿಂದ ಪಾರಾಗಲು ಬಸೋಯಾ ದೆಹಲಿಯಿಂದ ದುಬೈಗೆ ಪರಾರಿಯಾಗಿದ್ದ. ದೆಹಲಿ ಪ್ರಕರಣದ ಆರೋಪಿ ತುಷಾರ್ ಗೋಯಲ್ ಜೊತೆ ಬಸೋಯಾ ಅವರ ನಿಕಟ ಸಂಬಂಧ ಹೊಂದಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಬಸೋಯಾ ಅವರು ತಮ್ಮ ಡೀಲ್ಗಳಲ್ಲಿ ಪ್ರತಿ ವಿತರಣೆಗೆ 4 ಕೋಟಿ ರೂ.ಗಳನ್ನು ಗೋಯಲ್ಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ದೆಹಲಿ ಪೊಲೀಸ್ ವಿಶೇಷ ಕೋಶವು ಮುಂಬೈ, ಪುಣೆ ಮತ್ತು ಇತರ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡ್ರಗ್ ಮಾಫಿಯಾಗಳನ್ನು ಈ ಪ್ರಕಣದ ವ್ಯಾಪ್ತಿಗೆ ಸೇರಿಸಲು ತನ್ನ ತನಿಖೆಯನ್ನು ವಿಸ್ತರಿಸಿದೆ. ಎಲ್ಲರೂ ಸಾಮಾನ್ಯವಾಗಿ ಒಂದೇ ಸಿಂಡಿಕೇಟ್ಗೆ ಸಂಪರ್ಕ ಹೊಂದಿದ್ದಾರೆಂದು ಶಂಕಿಸಲಾಗಿದೆ. ದಕ್ಷಿಣ ದೆಹಲಿಯಲ್ಲಿ ನಡೆಸಿದ ದಾಳಿಯಲ್ಲಿ 5,600 ಕೋಟಿ ರೂಪಾಯಿ ಮೌಲ್ಯದ 500 ಕೆಜಿ ಕೊಕೇನ್ ಮತ್ತು 40 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡ ನಂತರ ತುಷಾರ್ ಗೋಯಲ್ ಅವರನ್ನು ಅ.2 ರಂದು ಬಂಧಿಸಲಾಯಿತು. ಇದನ್ನೂ ಓದಿ: ಈರುಳ್ಳಿ, ಬೆಳ್ಳುಳ್ಳಿ ಆಯ್ತು – ಈಗ ದಿಢೀರ್ ಟೊಮೆಟೊ ದರ ಭಾರೀ ಏರಿಕೆ
ಗೋಯಲ್ ಅವರನ್ನು ಇತರ ಮೂವರೊಂದಿಗೆ ಬಂಧಿಸಲಾಯಿತು. ಹಿಮಾಂಶು ಕುಮಾರ್ ಮತ್ತು ದೆಹಲಿಯ ಔರಂಗಜೇಬ್ ಸಿದ್ದಿಕಿ ಮತ್ತು ಭರತ್ ಕುಮಾರ್ ಜೈನ್ ಅವರನ್ನು ಬೃಹತ್ ಮಾದಕವಸ್ತು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಯಿತು. ಪೊಲೀಸರ ಪ್ರಕಾರ, ಕೊಕೇನ್ ಅನ್ನು ವಿವಿಧ ರಾಜ್ಯಗಳಿಂದ ರಸ್ತೆ ಮೂಲಕ ದೆಹಲಿಗೆ ಕಳ್ಳಸಾಗಣೆ ಮಾಡಲಾಗಿದ್ದು, ಗಾಂಜಾ ಥಾಯ್ಲೆಂಡ್ನ ಫುಕೆಟ್ನಿಂದ ಹುಟ್ಟಿಕೊಂಡಿದೆ. ಆರೋಪಿಗಳು ಕಾನೂನು ಜಾರಿ ಸಂಸ್ಥೆಗಳಿಂದ ತಪ್ಪಿಸಿಕೊಳ್ಳಲು ಕ್ರಿಪ್ಟೋಕರೆನ್ಸಿಯನ್ನು ಬಳಸಿದ್ದಾರೆ. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟಾನ್ಸಸ್ (ಎನ್ಡಿಪಿಎಸ್) ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.