ತುಮಕೂರು: ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ಕೊಡಿ ಎಂದು ಹೆತ್ತ ತಾಯಿ ಅಳಲು ತೋಡಿಕೊಂಡಿರುವ ಘಟನೆ ತುಮಕೂರು (Tumakuru) ಜಿಲ್ಲೆ ತುರುವೇಕೆರೆ (Turuvekere) ಪಟ್ಟಣದಲ್ಲಿ ನಡೆದಿದೆ.
ತುರುವೇಕೆರೆ ಪಟ್ಟಣದಲ್ಲಿ ಸಣ್ಣ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿರುವ ರೇಣುಕಮ್ಮ ಎಂಬ ಮಹಿಳೆಯ 20 ವರ್ಷ ವಯಸ್ಸಿನ ಮಗ ಅಭಿ ಕೆಟ್ಟ ಸ್ನೇಹಿತರ ಸಹವಾಸಕ್ಕೆ ಬಿದ್ದು ಕಲಿಯಬಾರದ ಚಟಗಳನ್ನೆಲ್ಲಾ ಕಲಿತಿದ್ದಾನೆ. ಚಟಗಳಿಂದ ಮುಕ್ತಗೊಳಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದೇನೆ. ಆದರೂ ಪ್ರಯೋಜನವಾಗಿಲ್ಲ. ಪಟ್ಟಣದಲ್ಲಿ ಗಾಂಜಾ ಸೇರಿದಂತೆ ಹಲವಾರು ಮಾದಕ ವಸ್ತುಗಳು ಮಾರಾಟವಾಗುತ್ತಿವೆ. ಇದು ಯುವಕರನ್ನು ಹಾಳು ಮಾಡುತ್ತಿದೆ. ನನ್ನ ಮಗನೂ ಇಂತಹ ಜಾಲಕ್ಕೆ ಬಿದ್ದು ತನ್ನ ಜೀವನವನ್ನು ಹಾಳು ಮಾಡಿಕೊಂಡಿದ್ದಾನೆ. ಹೀಗೆ ಪಟ್ಟಣದಲ್ಲಿ ಸಾಕಷ್ಟು ಯುವಕರಿದ್ದಾರೆ. ಇವರಿಗೆ ಮಾದಕ ವಸ್ತುಗಳನ್ನು ಸಾಗಾಣೆ ಮಾಡುತ್ತಿರುವವರು ಯಾರು ಎಂಬುದನ್ನು ದಯಮಾಡಿ ಪತ್ತೆ ಹಚ್ಚಿ ಅಮಾಯಕರನ್ನು ಕಾಪಾಡಿ ಎಂದು ರೇಣುಕಮ್ಮ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕಾರವಾರ ಕದಂಬ ನೌಕಾನೆಲೆ ವ್ಯಾಪ್ತಿಯಲ್ಲಿ ಟ್ರ್ಯಾಕರ್ ಅಳವಡಿಸಿದ ರಣ ಹದ್ದು ಪತ್ತೆ!
ಶನಿವಾರ ಮಧ್ಯಾಹ್ನ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ರೇಣುಕಮ್ಮಳ ಮಗ ಅಭಿ, ಅಲ್ಲಿದ್ದ ಕೆಲವು ಬಾಲಕಿಯರನ್ನು ಚುಡಾಯಿಸಿದ್ದಾನೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದನ್ನು ಗಮನಿಸಿದ ಅಲ್ಲೇ ಇದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅಭಿಯನ್ನು ಥಳಿಸಿದ್ದಾರೆ. ಇದನ್ನೂ ಓದಿ: ಅಬಕಾರಿಯಲ್ಲಿ 700 ಕೋಟಿ ಹಣ ಪಡೆಯೋಕಾಗುತ್ತಾ? ಸುಳ್ಳು ಹೇಳೋದು ಪ್ರಧಾನಿಗೆ ಅಗೌರವ – ಸಿಎಂ