ಲಕ್ನೋ: ಖದೀಮನೊಬ್ಬ ತಾನು ಎಂಜಿನಿಯರ್ ಎಂದು ಹೇಳಿಕೊಂಡು ಎಟಿಎಂ ನಲ್ಲಿ 18 ಲಕ್ಷ ರೂ. ಗಿಂತ ಹೆಚ್ಚು ಹಣವನ್ನು ಕಳ್ಳತನ ಮಾಡಿರುವ ಘಟನೆ ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿನ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಶಾಖೆಯ ಎಟಿಎಂ ನಲ್ಲಿ ನಡೆದಿದೆ.
ಸಾದರ ಪೊಲೀಸ್ ಠಾಣೆಯ ಎಸ್ಎಚ್ಒ ಅವನಿತ್ ಗೌತಮ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಎಟಿಎಂ ರಿಪೇರಿಗೆಂದು ಮಂಗಳವಾರದಂದು ಬ್ಯಾಂಕ್ ಗೆ ಎಂಜಿನಿಯರ್ ವೇಷದಲ್ಲಿ ವ್ಯಕ್ತಿಯೊಬ್ಬ ಬಂದಿದ್ದ. ಅವನು ಬ್ಯಾಂಕ್ ನ ಸ್ಟ್ರಾಂಗ್ ರೂಮ್ ಗೆ ಹೋಗಿ ಎಟಿಎಮ್ ನ ಸೀಕ್ರೆಟ್ ಪಾಸ್ವರ್ಡ್ ಬಳಸಿ ಅಲ್ಲಿದ್ದ 18.37 ಲಕ್ಷ ರೂ. ತೆಗೆದುಕೊಂಡು ಹೋಗಿದ್ದಾನೆ. ಬಳಿಕ ಗ್ರಾಹಕರು ಎಟಿಎಮ್ ನಲ್ಲಿ ಹಣವಿಲ್ಲವೆಂದು ಹೇಳಿದಾಗ ಹಣ ಕಳ್ಳತನವಾಗಿರೋದು ಬೆಳಕಿಗೆ ಬಂದಿದೆ ಎಂದು ಬ್ಯಾಂಕ್ ಸಿಬ್ಬಂದಿ ಹೇಳಿದ್ದಾರೆಂದು ತಿಳಿಸಿದರು.
ಈ ಬಗ್ಗೆ ವಿಷಯ ತಿಳಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದ್ದು, ಬ್ಯಾಂಕ್ ಸಿಬ್ಬಂದಿಗಳನ್ನು ವಿಚಾರಣೆ ನಡೆಸಿದ್ದಾರೆ. ಕಳ್ಳನ ಪತ್ತೆಗಾಗಿ ಬಲೆ ಬೀಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.