ಚೆನ್ನೈ: ನಟ ವಿಜಯ್ ಮುಖ್ಯಮಂತ್ರಿಯಾಗಿರುವುದು (CM Vijay) ನೋಡಿ ನನಗೆ ಅಸೂಯೆ ಇಲ್ಲ. ಏಕೆಂದ್ರೆ ನಾನು ರಾಜಕೀಯದಲ್ಲಿ ಇಲ್ಲ. ಅಂತಹ ಕೀಳು ಗುಣಮಟ್ಟದ ವ್ಯಕ್ತಿಯೂ ನಾನಲ್ಲ ಎಂದು ತಲೈವಾ ರಜನಿಕಾಂತ್ (Rajinikanth) ತಮ್ಮ ವಿರುದ್ಧದ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ತಮಿಳುನಾಡು (Tamil Nadu) ವಿಧಾನಸಭಾ ಚುನಾವಣೆಯಲ್ಲಿ ಸೋತ ಡಿಎಂಕೆ ಪಕ್ಷದ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಅವರನ್ನ ರಜನಿಕಾಂತ್ ಭೇಟಿಯಾಗಿದ್ದರು. ಆ ನಂತರ ಕೇಳಿಬರುತ್ತಿದ್ದ ಟೀಕೆಗಳಿಗೆ ಅವರಿಂದು ಉತ್ತರ ಕೊಟ್ಟಿದ್ದಾರೆ. ಚೆನ್ನೈನ ಪೋಯಸ್ ಗಾರ್ಡನ್ನಲ್ಲಿರುವ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದಾರೆ. ನಾನೇಕೆ ವಿಜಯ್ ಬಗ್ಗೆ ಅಸೂಯೆಪಡಬೇಕು? ಬಹುಶಃ ಕಮಲ್ ಹಾಸನ್ ಮುಖ್ಯಮಂತ್ರಿಯಾದರೆ, ನನಗೆ ಅಸೂಯೆಯಾಗಬಹುದು ಎಂದು ಕಿಚಾಯಿಸಿದ್ದಾರೆ.

ನಾನು ಟೀಕೆಗಳಿಗೆ ಪ್ರತಿಕ್ರಿಯಿಸದಿದ್ದರೆ, ಅವೆಲ್ಲವೂ ಸತ್ಯವೆಂದು ಒಪ್ಪಿಕೊಂಡಂತಾಗುತ್ತದೆ. ಚುನಾವಣಾ ಫಲಿತಾಂಶಗಳ ನಂತರ, ನಾನು ಹೋಗಿ ಎಂ.ಕೆ ಸ್ಟಾಲಿನ್ ಅವರನ್ನು ಭೇಟಿಯಾದೆ. ನಾನು ಸ್ನೇಹಿತನಾಗಿಯೇ ಭೇಟಿಯಾದೆ, ಏಕೆಂದ್ರೆ ನಮ್ಮ ಸ್ನೇಹ ರಾಜಕೀಯವನ್ನೂ ಮೀರಿದ್ದು. ಆದ್ರೆ ನಮ್ಮ ಭೇಟಿಯೇ ಟೀಕೆಗೆ ಗುರಿಯಾಯಿತು ಎಂದು ಬೇಸರ ಹೊರಹಾಕಿದ್ದಾರೆ.
ಕೊಳತ್ತೂರಿನಲ್ಲಿ ಸ್ಟಾಲಿನ್ ಸೋತಿದ್ದಕ್ಕೆ ನನಗೆ ಬೇಸರವಾಯಿತು. ಆದ್ರೆ ವಿಜಯ ಸಿಎಂ ಆಗುವುದನ್ನ ನಿರಾಕರಿಸಿದ್ದೇನೆಂದು ತಪ್ಪಾಗಿ ಅರ್ಥೈಸಿದ್ದಾರೆ. ಈ ರಜನಿ ಬೇರೆ ಯಾವುದರ ಬಗ್ಗೆಯೂ ಅನಗತ್ಯವಾಗಿ ಮಾತನಾಡುವ ಕೀಳು ಮನಸ್ಸಿನ ಅಥವಾ ಕೀಳು ಮಟ್ಟದ ವ್ಯಕ್ತಿಯಲ್ಲ. ವಿಜಯ್ ಸಿಎಂ ಆಗಿದ್ದಕ್ಕೆ ನನಗೆ ಯಾವುದೇ ಅಸೂಯೆ ಇಲ್ಲ, ಆದ್ರೆ ಮೊದಲ ಚುನಾವಣೆಯಲ್ಲೇ ಸಿಎಂ ಆಗಿದ್ದು ಆರ್ಚರ್ಯವಾಯಿತು. ಅವರು ಗೆದ್ದ ತಕ್ಷಣವೇ ನಾನು ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೊಳತ್ತೂರಿನಿಂದ ಮೂರು ಬಾರಿ ಸ್ಪರ್ಧಿಸಿ ಗೆದ್ದಿದ್ದ ಮಾಜಿ ಸಿಎಂ ಎಂ.ಕೆ ಸ್ಟಾಲಿನ್ ಅವರು, ಈ ಬಾರಿ ಟಿವಿಕೆ ವಿ.ಎಸ್ ಬಾಬು ವಿರುದ್ಧ ಸುಮಾರು 9000 ಮತಗಳ ಅಂತದಿಂದ ಸೋತರು.

