ಚಿತ್ರದುರ್ಗ: ಗಂಡನ ಅಕ್ರಮ ಸಂಬಂಧದಿಂದಾಗಿ ನಿತ್ಯ ಮನೆಯಲ್ಲಿ ನಡೆಯುತಿದ್ದ ಕೌಟುಂಬಿಕ ಕಲಹದಿಂದ ಬೇಸತ್ತು ಮಗಳ ಸಹಿತ ದಂಪತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ನಗರದಲ್ಲಿ ನಡೆದಿದೆ.
ಚಿತ್ರದುರ್ಗದ ಗಾರೆಹಟ್ಟಿ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಅರುಣ್(40), ಲತಾ(35) ಹಾಗೂ ಅಮೃತ(13) ಸಾವನ್ನಪ್ಪಿದ್ದಾರೆ ಎಂದು ಗುರುತಿಸಲಾಗಿದೆ.
ಜಿಲ್ಲೆಯ ಹಿರಿಯೂರು ತಾಲೂಕಿನ ತಾಳವಟ್ಟಿ ಗ್ರಾಮದ ಮೃತ ಅರುಣ್, ಖಾಸಗಿ ಬಸ್ ಏಜೆಂಟ್ ಆಗಿದ್ದು, ಪತ್ನಿ ಲತಾ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತ ಅರುಣ್ ಅನೇಕ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಹಿನ್ನಲೆ ಮನೆಯಲ್ಲಿ ನಿತ್ಯ ಜಗಳವಾಗುತಿತ್ತು ಎನ್ನುವ ವಿಚಾರ ಸ್ಥಳೀಯರಿಂದ ತಿಳಿದು ಬಂದಿದೆ.
ಬೆಳಗಿನ ಜಾವ 7:20ಕ್ಕೆ ಗಂಡ ಹೆಂಡತಿ ನಡುವೆ ಜಗಳ ನಡೆದಿದ್ದು, ಈ ವೇಳೆ ದಂಪತಿ ತಮ್ಮ ಮಗಳಿಗೂ ಬೆಂಕಿ ಹಚ್ಚಿ ತಾವೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಮೂಲಕ ಏನೂ ತಪ್ಪು ಮಾಡದ ದಂಪತಿಯ ಪುತ್ರಿ ಅಮೃತ ಸಹ ಬಲಿಯಾಗಿದ್ದಾಳೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಮನೆಯ ಕಿಟಕಿ ಹಾಗೂ ಬಾಗಿಲಿನ ಕಿಂಡಿಗಳಿಂದ ಹೊಗೆ ಜೋರಾಗಿ ಹೊರ ಬರುತ್ತಿರುವುದನ್ನು ಗಮನಿಸಿದ ಸ್ಥಳಿಯರು, ಕಬ್ಬಿಣದ ರಾಡ್ ಹಾಗು ಸುತ್ತಿಗೆಯಿಂದ ಮುಚ್ಚಿದ್ದ ಬಾಗಿಲನ್ನು ಒಡೆದು, ಮನೆಯೊಳಗೆ ತೆರಳಿದ್ದಾರೆ. ಈ ವೇಳೆ ಸಾವಿನಿಂದ ಪಾರಾಗಲು, ಅರುಣ್ ಹಾಗೂ ಬಾಲಕಿ ಅಮೃತ ಯತ್ನಿಸಿದ್ದು, ಪ್ರಯತ್ನ ವಿಫಲವಾಗಿ ಬಾಗಿಲ ಬಳಿಯೇ ಸುಟ್ಟು ಕರಕಲಾಗಿದ್ದಾರೆ.
ಸ್ಥಳಕ್ಕೆ ಅಗ್ನಿ ಶಾಮಕ ದಳದ ಅಧಿಕಾರಿಗಳಾದ ಜಯರಾಂ ಹಾಗು ಶಶಿಧರ್ ಒಳಗೊಂಡ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸಾವಿಗೀಡಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಕೃತ್ಯದಲ್ಲಿ ಯಾರು ಮೊದಲು ಆತ್ಮಹತ್ಯೆಗೆ ಯತ್ನಸಿದರು, ಹೇಗೆ ಕೃತ್ಯ ನಡೆಯಿತು ಎಂಬುದರ ಕುರಿತ ಮಾಹಿತಿ ನಿಗೂಢವಾಗಿದೆ. ಈ ಸಂಬಂಧ, ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.