ಮಡಿಕೇರಿ: ಕೊಡಗು ಜಿಲ್ಲೆ ಸೌಂದರ್ಯಕ್ಕೆ ಹೆಸರುವಾಸಿ. ಅದರ ಸೌಂದರ್ಯ ಹೆಚ್ಚುತ್ತಿರುವುದು ಕಾಫಿ ತೋಟದಿಂದಲೇ ಎಂದರೆ ತಪ್ಪಾಗಲಾರದು. ಆದರೆ ಇಲ್ಲಿನ ಬಹುತೇಕ ಕಾಫಿ ತೋಟಗಳಲ್ಲಿ ಕಾರ್ಮಿಕರ ಕೊರತೆ ಹೆಚ್ಚಿದೆ. ಆದ್ದರಿಂದ ಮಧ್ಯವರ್ತಿಗಳು ಕಡಿಮೆ ಕೂಲಿ ನೀಡಿ ಅಸ್ಸಾಂ, ಬಿಹಾರ, ಪಶ್ಚಿಮ ಬಂಗಾಳದಿಂದ ಭಾರೀ ಪ್ರಮಾಣದಲ್ಲಿ ಕಾರ್ಮಿಕರನ್ನು ತಂದು ಬಿಡುತ್ತಿದ್ದಾರೆ. ಈಗ ಕೊಡಗಿನಲ್ಲಿ ಉತ್ತರ ಭಾರತದ ಮಂದಿಯೇ ತುಂಬಿಕೊಂಡಿದ್ದು, ಇವರ ಹಾವಳಿಯಿಂದಾಗಿ ಸ್ಥಳೀಯರು ಸಮಸ್ಯೆ ಅನುಭವಿಸುತ್ತಿದ್ದಾರೆ.
ಕೊಡಗಿನಲ್ಲಿ ಬಾಂಗ್ಲಾದ ಅಕ್ರಮ ನಿವಾಸಿಗಳು ವಾಸವಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆ ಕೊಡಗಿನ ವಿರಾಜಪೇಟೆಯಲ್ಲಿ ಅಕ್ರಮ ಬಾಂಗ್ಲಾ ಪ್ರಜೆಯನ್ನು 2018ರಲ್ಲಿ ಬಂಧಿಸಲಾಗಿತ್ತು. ಈಗ ಮತ್ತದೇ ಗುಮಾನಿ ಹುಟ್ಟಿಕೊಂಡಿದ್ದು, ಹೊರರಾಜ್ಯದ ಕಾರ್ಮಿಕರ ಜೊತೆ ಬಾಂಗ್ಲಾ ವಲಸಿಗರೂ ಸೇರಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಇತ್ತೀಚೆಗಷ್ಟೇ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಹೊರರಾಜ್ಯದ ಕಾರ್ಮಿಕರ ವಿರುದ್ಧ ದೂರು ನೀಡುತ್ತಿದ್ದಂತೆ ಅವರು ನಾಪತ್ತೆಯಾಗಿದ್ದಾರೆ.
ಕಡಿಮೆ ಕೂಲಿಗೆ ಹೊರರಾಜ್ಯದ ಕಾರ್ಮಿಕರು ಬರುತ್ತಿರುವುದರಿಂದ ಅವರನ್ನೇ ಹೆಚ್ಚಿನ ಪ್ರಮಾಣದಲ್ಲಿ ನೇಮಿಸಿಕೊಳ್ಳಲಾಗುತ್ತಿದೆ. ಈ ವಲಸಿಗರಿಂದ ಜಿಲ್ಲೆಯಲ್ಲಿ ಅತೀ ಹೆಚ್ಚು ಅಪರಾಧ ಕೃತ್ಯಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಜಿಲ್ಲೆಯ ಕಾಫಿತೋಟಗಳಲ್ಲಿ ಕೆಲಸ ಮಾಡುತ್ತಿರುವ ಹೊರರಾಜ್ಯದ ಕಾರ್ಮಿಕರ ಬಳಿ ದೇಶದ ಪ್ರಜೆಗಳೇ ಎಂಬುದಕ್ಕೆ ಸೂಕ್ತ ದಾಖಲೆಗಳು ಇವೆಯೇ ಎಂಬುದನ್ನು ಪರೀಕ್ಷಿಸಬೇಕಾಗಿದೆ.
ಒಟ್ಟಿನಲ್ಲಿ ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿ ಕೆಲಸ ಅರಸಿ ಬರುತ್ತಿರೋ ಹೊರರಾಜ್ಯದ ಕಾರ್ಮಿಕರಲ್ಲಿ ಬಾಂಗ್ಲಾ ವಲಸಿಗರು ಇದ್ದಾರೆ ಅನ್ನೋ ದಟ್ಟ ಅನುಮಾನಗಳಿವೆ. ಕಾರ್ಮಿಕರ ಐಡೆಂಟಿಟಿಗೆ ಸಂಬಂಧಿಸಿದ ದಾಖಲೆಗಳನ್ನು ಜಿಲ್ಲಾ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುತ್ತಾ ಕಾದು ನೋಡಬೇಕಿದೆ.