ಬೆಳಗಾವಿ: ಚುನಾವಣೆ ಬಂದ್ರೇ ಸಾಕು ಬೆಳಗಾವಿ (Belagavi) ಜಿಲ್ಲೆಯ ರಾಜಕೀಯ ಚಿತ್ರಣವೇ ಬದಲಾಗಿ ಹೋಗುತ್ತೆ. 2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಒಂದು ಕಡೆ ಭರ್ಜರಿ ತಯಾರಿ ನಡೆದಿದ್ರೆ, ಇನ್ನೊಂದು ಕಡೆ ಬೇರೆ ಬೇರೆ ಪಕ್ಷಗಳಿಂದ ನಾಯಕರನ್ನ ಸೆಳೆಯುವ ಕಸರತ್ತು ಕೂಡ ಜೋರಾಗಿದೆ. ರಮೇಶ್ ಜಾರಕಿಹೊಳಿ ಪಕ್ಷ ಬಿಡ್ತಾರೆ ಅನ್ನೋ ಸುದ್ದಿ ಜೋರಾಗಿ ಹರಡಿದ್ರೆ, ಇತ್ತ ಕಾಂಗ್ರೆಸ್-ಜೆಡಿಎಸ್ ನಾಯಕರು ಪಕ್ಷಾಂತರ ಪರ್ವದ ಬಗ್ಗೆ ಕೊಟ್ಟ ಕೌಂಟರ್ ಕೂಡ ಅಷ್ಟೇ ಕುತೂಹಲಕಾರಿಯಾಗಿದೆ.
ಹೌದು ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಸ್ಥಾನ ಗೆದ್ರೆ ರಾಜ್ಯದಲ್ಲಿ ನಮ್ಮದೇ ಸರ್ಕಾರ ಅನ್ನೋ ಲೆಕ್ಕಾಚಾರ ಬಿಜೆಪಿ (BJP), ಕಾಂಗ್ರೆಸ್ (Congress) ಮತ್ತು ಜೆಡಿಎಸ್ (JDS) ನಾಯಕರದ್ದು. ಇದೇ ಕಾರಣಕ್ಕೆ ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯವಾಗಿ ಹಿಡಿತ ಸಾಧಿಸಲು ನಾಯಕರು ನಾನಾ ತಂತ್ರಗಳನ್ನ ಅಳವಡಿಸಕೊಳ್ತಿದ್ದಾರೆ. ಇನ್ನೂ ಪಕ್ಷದ ಮೇಲೆ ಅಸಮಾಧಾನ ಹೊಂದಿರುವವರನ್ನು ಸೆಳೆಯುವ ಕೆಲಸವನ್ನ ಮೂರು ಪಕ್ಷದ ನಾಯಕರು ಮಾಡ್ತಿದ್ದಾರೆ. ಇದನ್ನೂ ಓದಿ: ಸಿದ್ದುಗೆ ಡಬಲ್ ಟೆನ್ಷನ್ – ಪರಮಾಪ್ತ ಮಹದೇವಪ್ಪಗೆ ಸಿಗುತ್ತಾ ಟಿಕೆಟ್?
ಇದೀಗ ಬಿಜೆಪಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಾಹುಕಾರ್ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡದೇ ಬಿಜೆಪಿ ನಾಯಕರು ಕಡೆಗಣಿಸುತ್ತಿದ್ದಾರೆ ಅನ್ನೋ ಆರೋಪದ ನಡುವೆ ರಮೇಶ್ ಪಕ್ಷ ಬಿಡ್ತಾರೆ ಅನ್ನೋ ಗುಮಾನಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಈಗಾಗಲೇ ಮಾಜಿ ಸಿಎಂ ಕುಮಾರಸ್ವಾಮಿ ಜತೆಗೆ ಒಂದು ಸುತ್ತಿನ ಮಾತುಕತೆ ಆಗಿದೆ ಅನ್ನೋ ಸುದ್ದಿ ಕೂಡ ಹರಿದಾಡುತ್ತಿದೆ. ಆದರೆ ಎಲ್ಲಿಯೂ ಜಾರಕಿಹೊಳಿ ಈ ವಿಚಾರದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಈ ಕುರಿತು ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ್ ಮಾಡಲಗಿ ನಮ್ಮ ಪಕ್ಷಕ್ಕೆ ಬಂದ್ರೆ ಸ್ವಾಗತ ಅಂತಾ ಹೇಳಿದ್ದಾರೆ. ಅಲ್ಲದೇ ಹೊಸ ಬಾಂಬ್ ಕೂಡ ಸಿಡಿಸಿದ್ದಾರೆ.
ಜೆಡಿಎಸ್ಗೆ ಬೆಳಗಾವಿ ಜಿಲ್ಲೆಯಲ್ಲಿನ ನಾಯಕರು ಸೇರಿಕೊಳ್ಳಲಿದ್ದಾರೆ ಅನ್ನೋ ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ್ ಮಾಡಲಿ ಹೇಳಿಕೆಗೆ ಕಾಂಗ್ರೆಸ್ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಕೌಂಟರ್ ಕೊಟ್ಟಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿಯಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಜನ ಮುಂದಿನ ದಿನಗಳಲ್ಲಿ ಬರಲಿದ್ದಾರೆ ಅಂತಾ ಹೇಳಿದರು. ಇದೇ ವೇಳೆ ಜಾರಕಿಹೊಳಿ ಕಾಂಗ್ರೆಸ್ಗೆ ಬರ್ತಾರಾ ಅನ್ನೋ ಪ್ರಶ್ನೆಗೆ ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ, ನಮ್ಮ ನಾಯಕರು ಒಪ್ಪಿ ಯಾರೇ ಪಕ್ಷಕ್ಕೆ ಬಂದ್ರೂ ಸ್ವಾಗತ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯರಿಂದ `ಧ್ಯಾನ’ ಭಂಗ- ಬಿ.ಸಿ ನಾಗೇಶ್ ತೀವ್ರ ವಾಗ್ದಾಳಿ