ಮಲ್ಯ ಗಡಿಪಾರು ಆಗ್ತಾರಾ? ಮುಂದಿನ ಕಾನೂನು ಪ್ರಕ್ರಿಯೆ ಹೇಗೆ ನಡೆಯುತ್ತದೆ?

Public TV
3 Min Read
VIJAYMALYA 2

ಲಂಡನ್: ಮದ್ಯದೊರೆ ವಿಜಯ್ ಮಲ್ಯರನ್ನು ಲಂಡನ್ ವೆಸ್ಟ್ ಮಿನಿಸ್ಟರ್ ಕೋರ್ಟ್ ಭಾರತಕ್ಕೆ ಗಡಿಪಾರು ಗೊಳಿಸಿದ್ದರ ಬೆನ್ನಲ್ಲೇ, ಮಲ್ಯರ ಮುಂದಿನ ನಡೆ ಏನೆಂಬುದು ಕುತೂಹಲ ಮೂಡಿಸಿದೆ.

ಹಣಕಾಸಿನ ವಿಚಾರದಲ್ಲಿ ಹಾಗೂ ವಂಚನೆಗೆ ಸಂಬಂಧಪಟ್ಟಂತೆ ಮಲ್ಯ ವಿರುದ್ಧದ ಆರೋಪಗಳಿಗೆ ಸಾಕ್ಷ್ಯಗಳು ಲಭ್ಯವಾಗಿದ್ದರಿಂದ ಮಲ್ಯರನ್ನು ಗಡಿಪಾರು ಮಾಡಲು ನ್ಯಾಯಾಧೀಶರು ಆದೇಶ ನೀಡಿದ್ದರು.

mallya1jpg

ಮಲ್ಯ ಮುಂದಿನ ನಡೆ ಏನು?
* ಬ್ರಿಟನ್ ಕೋರ್ಟ್ ಗಡಿಪಾರಿನ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಮೇಲ್ಮನವಿಯನ್ನು ಸಲ್ಲಿಸಬಹುದು.
* ಮೇಲ್ಮನವಿ ಸಲ್ಲಿಸಲು 14 ದಿನಗಳ ಕಾಲಾವಕಾಶ ಇದೆ.

ಮೇಲ್ಮನವಿ ಸಲ್ಲಿಸದೇ ಇದ್ರೆ ಏನಾಗುತ್ತೆ?
ಮಲ್ಯ ಗಡಿಪಾರಿನ ಆದೇಶವನ್ನು ಪ್ರಶ್ನಿಸಿ 14 ದಿನಗಳೊಳಗಾಗಿ ಮೇಲ್ಮನವಿ ಸಲ್ಲಿಸದೇ ಇದ್ದರೆ, 22 ದಿನಗೊಳಗೆ ಅಲ್ಲಿನ ಗೃಹ ಕಾರ್ಯದರ್ಶಿಗಳು ಮಲ್ಯ ಗಡಿಪಾರಿಗೆ ಆದೇಶ ನೀಡುತ್ತಾರೆ. ಈ ಆದೇಶ ಪ್ರಕಟಗೊಂಡ ಬಳಿಕ ಸಿಬಿಐ ಅಧಿಕಾರಿಗಳು ಲಂಡನ್ ನಿಂದ ಮಲ್ಯರನ್ನು ಭಾರತಕ್ಕೆ ಕರೆತರುತ್ತಾರೆ.

Vijay Mallya 1

ಗಡಿಪಾರು ಆಗ್ತಾರಾ?
ಅಪರಾಧಿಗಳ ಗಡಿಪಾರು ಸಂಬಂಧ 1992 ರಲ್ಲಿ ಭಾರತ ಮತ್ತು ಬ್ರಿಟನ್ ಒಪ್ಪಂದ ಮಾಡಿಕೊಂಡಿತ್ತು. ಆದರೆ ಇದೂವರೆಗೂ ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರ ಭಾರತ ಸ್ವದೇಶಕ್ಕೆ ತರುವಲ್ಲಿ ಯಶಸ್ವಿಯಾಗಿತ್ತು. ಭಾರತಕ್ಕೆ ಗಡಿಪಾರು ಮಾಡುವವರ ಪಟ್ಟಿಯಲ್ಲಿ ಲಲಿತ್ ಮೋದಿ, ಟೈಗರ್ ಹನೀಫ್, ನದೀಪ್ ಸೈಫ್, ರವಿ ಶಂಕರಮ್ ಹಾಗೂ ವಿಜಯ್ ಮಲ್ಯ ಹೆಸರಿದೆ.

ಪ್ರಪ್ರಥಮವಾಗಿ 2002ರಲ್ಲಿ ಗುಜರಾತ್ ದಂಗೆಗೆ ಸಂಬಂಧಿಸಿದಂತೆ 2016ರ ಅಕ್ಟೋಬರ್ ನಲ್ಲಿ ಸಮೀರ್ ಭಾಯ್ ವಿನುಭಾಯ್ ಪಟೇಲ್ ನನ್ನು ಬ್ರಿಟನ್ ಭಾರತಕ್ಕೆ ಹಸ್ತಾಂತರಿಸಿತ್ತು. 2018ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ಅಧಿಕಾರಿಗಳು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕಾರಿಗಳೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸಿ, ಮಾತುಕತೆಯನ್ನು ಸಹ ನಡೆಸಿದ್ದರು. ಈ ವೇಳೆ ಭಾರತ 17 ಮಂದಿಯ ಮಾಹಿತಿಯನ್ನು ಹಂಚಿಕೊಂಡಿತ್ತು.

VIJAYMALYA

ಇದರಲ್ಲಿ ಪ್ರಮುಖವಾಗಿ ರವಿ ಶಂಕರನ್ (ಭಾರತೀಯ ಜಲಂತರ್ಗಾಮಿ ಯುದ್ಧ ನೌಕೆಯಲ್ಲಿ ನೀರು ಸೋರಿಕೆಯ ಪ್ರಮುಖ ಆರೋಪಿ), ಟೈಗರ್ ಹನೀಫ್ (1993ರಲ್ಲಿ ಗುಜರಾತ್ ನಲ್ಲಿ ನಡೆದ 2 ಸ್ಫೋಟ ಪ್ರಕರಣಕ್ಕೆ ಬೇಕಾದ ಆರೋಪಿ), ಸಂಗೀತ ನಿರ್ದೇಶಕ ನದೀಮ್ ಸೈಫ್ (ಗುಲ್ಷನ್ ಕುಮಾರ್ ಕೊಲೆ ಪ್ರಕರಣ ಆರೋಪಿ)ಯ ಹೆಸರುಗಳು ಪ್ರಸ್ತಾಪವಾಗಿದ್ದವು.

ಬ್ರಿಟನ್ ನ್ಯಾಯಾಲಯ ಸಾಮಾನ್ಯವಾಗಿ ರಾಜಕೀಯ ಕಾರಣ ಹಾಗೂ ವ್ಯಕ್ತಿಗೆ ಚಿತ್ರ ಹಿಂಸೆ ಅಥವಾ ಮರಣದಂಡನೆಗೆ ಒಳಪಟ್ಟ ವ್ಯಕ್ತಿಗಳನ್ನು ಗಡಿಪಾರು ಮಾಡಲು ನಿರಾಕರಿಸುತ್ತದೆ. ಇಂತಹ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳನ್ನು ಬ್ರಿಟನ್ ತಿರಸ್ಕರಿಸಿದೆ. ಯೂರೋಪಿನ್ ಮಾನವ ಹಕ್ಕುಗಳ ಆರ್ಟಿಕಲ್ 8ರ ಪ್ರಕಾರ ಯಾವುದೇ ವ್ಯಕ್ತಿಗೂ ಸಹ ಕುಟುಂಬ ಜೀವನವನ್ನು ನಡೆಸುವ ಹಕ್ಕು ಇದೆ ಎಂದು ಅದು ಪ್ರತಿಪಾದಿಸುತ್ತದೆ. ಬ್ಯಾಂಕ್ ಗಳಿಗೆ ವಂಚಿಸಿದ ಆರೋಪ ಇರುವ ಕಾರಣ ಮಲ್ಯ ಗಡಿಪಾರಿಗೆ ಕೋರ್ಟ್ ಒಪ್ಪಿಗೆ ನೀಡಬಹುದು ಎನ್ನುವ ನಿರೀಕ್ಷೆಯನ್ನು ಮೊದಲೇ ಭಾರತ ಸರ್ಕಾರ ಇಟ್ಟುಕೊಂಡಿತ್ತು.

ಕೋರ್ಟ್ ಆದೇಶಕ್ಕೂ ಮುನ್ನ ಮಲ್ಯ ಹೇಳಿದ್ದೇನು?
ನನ್ನ ನೌಕಕರಿಗೆ ನನ್ನ ಮೊದಲ ಆದ್ಯತೆ ನೀಡುತ್ತೇನೆ. ಕಳೆದ ಎರಡು ವರ್ಷಗಳಲ್ಲಿ ನಮ್ಮ ಸಂಸ್ಥೆಯ ನೌಕರರಿಗೆ ಸಂಬಳ ನೀಡುವುದಕ್ಕಾಗಿ ನಾವು ನ್ಯಾಯಾಲಯದಲ್ಲಿ ಠೇವಣಿಯ ಹಣ ಬಳಸಬೇಕು. ಈ ಸಂಬಂಧ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದೆವು. ಆದರೆ ಈ ಬಗ್ಗೆ ನ್ಯಾಯಾಲಯ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಒಂದು ವೇಳೆ ನ್ಯಾಯಾಲಯ ಪ್ರಕರಣ ಇತ್ಯರ್ಥ ಮಾಡಲು ಒಪ್ಪಿದರೆ, ಮೊದಲು ನನ್ನ ನೌಕರರಿಗೆ ಸಂಬಳ ನೀಡುವಂತೆ ಮನವಿ ಮಾಡಿಕೊಳ್ಳುತ್ತೇನೆ. ಅಲ್ಲದೇ ನ್ಯಾಯಾಲಯ ಯಾವ ರೀತಿ ತೀರ್ಪು ನೀಡುತ್ತದೆಯೋ, ಅದನ್ನು ಸ್ವೀಕರಿಸಲು ನಾನು ಸಿದ್ಧ. ಅಲ್ಲದೇ ಈ ಬಗ್ಗೆ ನನ್ನ ಕಾನೂನು ಸಲಹಗಾರರ ಬಳಿ ಚರ್ಚಿಸಿ, ಸೂಕ್ತ ನಿರ್ಧಾರವನ್ನು ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *