ಬಳ್ಳಾರಿ: ಮದುವೆ ಮಾಡೋಕೆ ಲಕ್ಷಾಂತರ ರೂಪಾಯಿ ಹಣ ಬೇಕು. ಆದ್ರೆ ಸರ್ಕಾರಿ ಖರ್ಚಿನಲ್ಲೇ ಸಾಮೂಹಿಕ ಮದುವೆ ಮಾಡಿಸೋ ಭಾಗ್ಯವನ್ನು ಬಿಜೆಪಿ ಜಾರಿಗೆ ತರೋದಾಗಿ ಸಂಸದ ಶ್ರೀರಾಮುಲು ಹೇಳಿದ್ದಾರೆ.
ಅಷ್ಟೆ ಅಲ್ಲ ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಸಾಮೂಹಿಕ ಮದುವೆ ಮಾಡಿಸೋಕೆ ವಿವಾಹ ಖಾತೆ ಸಚಿವರ ಹುದ್ದೆ ಸೃಷ್ಟಿ ಮಾಡ್ತಾರಂತೆ. ಇದು ವಿಶೇಷ, ವಿಚಿತ್ರವಾದ ಯೋಜನೆಯಾದ್ರೂ ಬಡವರನ್ನು ಸೆಳೆಯಲು ಸಂಸದ ಶ್ರೀರಾಮುಲು ಇಂಹದ್ದೊಂದು ಐಡಿಯಾ ಮಾಡಿದ್ದಾರೆ.
ಬಳ್ಳಾರಿಯಲ್ಲಿಂದು ಸಂಸದ ಶ್ರೀರಾಮುಲು ನೇತೃತ್ವದಲ್ಲಿ 19 ನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭ ನಡೆಯಿತು. 56 ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭ ಉದ್ದೇಶಿಸಿ ಮಾತನಾಡಿದ ಶ್ರೀರಾಮುಲು, ಬಡವರ ಮದುವೆಯನ್ನು ಸರ್ಕಾರಿ ಖರ್ಚಿನಲ್ಲೇ ಮಾಡಿಸುವ ಮಹತ್ವಾಕಾಂಕ್ಷೆ ಹೊಂದಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಸಾಮೂಹಿಕ ವಿವಾಹ ಖಾತೆ ಸಚಿವ ಸ್ಥಾನವನ್ನು ಸೃಷ್ಟಿಸಿ ಆ ಮೂಲಕ ಬಡವರ ಮದುವೆಗಳನ್ನು ಸರ್ಕಾರಿ ಖರ್ಚಿನಲ್ಲೇ ಮಾಡಿಸುತ್ತೇವೆ ಅಂದ್ರು.
ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳುವ ಕಾರ್ಯ ಮಾಡುವ ಯೋಜನೆ ರೂಪಿಸುವುದಾಗಿ ಶ್ರೀರಾಮುಲು ಹೇಳಿದ್ರು.