ಮೈಸೂರು: ತಂದೆ ಸಿದ್ದರಾಮಯ್ಯ ಅವರಿಗಾಗಿ ವರುಣಾ ಕ್ಷೇತ್ರವನ್ನು ಬಿಟ್ಟು ಕೊಡಲು ಸಿದ್ಧನಾಗಿದ್ದೇನೆ ಎಂದು ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತಣಾಡಿದ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗಾಗಿ ವರುಣಾ ಕ್ಷೇತ್ರವನ್ನು ಬಿಟ್ಟು ಕೊಡುತ್ತೇನೆ. ಜನ ಪಕ್ಷ ಅಪೇಕ್ಷಿಸಿದರೆ ಸಿದ್ದರಾಮಯ್ಯ ವರುಣಾದಲ್ಲಿಯೇ ಸ್ಪರ್ಧೆ ಮಾಡಲಿ. ನಾನು ಅವರ ಬೆಂಬಲಕ್ಕೆ ನಿಂತು ಅವರ ಗೆಲುವಿಗೆ ಶ್ರಮಿಸುತ್ತೇನೆ. ನಾನು ಬೇರೆ ಯಾವ ಕ್ಷೇತ್ರದಲ್ಲಿಯೂ ಸ್ಪರ್ಧೆ ಮಾಡುವುದಿಲ್ಲ. ಬದಲಾಗಿ ಸಿದ್ದರಾಮಯ್ಯ ಗೆಲ್ಲಿಸುವ ಕೆಲಸ ಮಾಡುತ್ತೇನೆ. ಅದು ನನ್ನ ಕರ್ತವ್ಯ. ಸಿದ್ದರಾಮಯ್ಯ ವರುಣಾಗೆ ಬಂದ ತಕ್ಷಣ ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗುತ್ತೇನೆ ಎಂಬುದು ಸುಳ್ಳು. ಆ ರೀತಿಯ ಯಾವ ಚಿಂತನೆಯನ್ನು ನಾನು ಮಾಡಿಲ್ಲ. ಕ್ಷೇತ್ರದ ಆಯ್ಕೆ ವಿಚಾರಕ್ಕೆ ಇನ್ನೂ ಬಹಳಷ್ಟು ಸಮಯ ಇದೆ. ಬಹಳಷ್ಟು ಕ್ಷೇತ್ರಗಳಿಂದ ಸಿದ್ದರಾಮಯ್ಯ ಅವರಿಗೆ ಆಹ್ವಾನ ಇದೆ. ಸಿದ್ದರಾಮಯ್ಯ ಮತ್ತು ಪಕ್ಷದ ಹೈಕಮಾಂಡ್ ಅಳೆದು ತೂಗಿ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಕ್ಷೇತ್ರದ ಆಯ್ಕೆ ಚರ್ಚೆ ತುರ್ತು ಈಗ ಏನು ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ : ಶಾಲೆಯಲ್ಲಿ ಕಂಪ್ಯೂಟರ್ ಕಳವು- ತಾಕತ್ತಿದ್ರೆ ನಮ್ಮನ್ನ ಹಿಡೀರಿ ಎಂದು ನಂಬರ್ ಬರೆದಿಟ್ಟ ಕಳ್ಳರು
ಇದೇ ವೇಳೆ ಸಿದ್ದರಾಮೋತ್ಸವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಶಕ್ತಿ ಪ್ರದರ್ಶನ ಅಲ್ಲ. ಇದು ಕೇವಲ ತಂದೆಯ ಹುಟ್ಟುಹಬ್ಬದ ಅಮೃತ ಮಹೋತ್ಸವ ಅಷ್ಟೇ. ಇದರಲ್ಲಿ ರಾಜಕೀಯ ಹುಡುಕಬೇಡಿ. ಕಾಕತಾಳಿಯವಾಗಿ ಚುನಾವಣೆಯ ವರ್ಷವೇ ಅವರ ಅಮೃತ ಮಹೋತ್ಸವ ಬಂದಿದೆ. ಹೀಗಾಗಿ ಈ ವಿಚಾರ ಚರ್ಚೆಯಾಗುತ್ತಿದೆ. ಎಲ್ಲಾ ಪಕ್ಷದವರನ್ನೂ ಸೇರಿಸಿಕೊಂಡು ಅಮೃತ ಮಹೋತ್ಸವ ಆಚರಿಸಿದರೆ ರಾಜಕೀಯವಾಗಿ ಬೇರೆ ರೀತಿಯ ಚರ್ಚೆಗಳು ಆಗುತ್ತದೆ. ಅಲ್ಲದೇ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಈ ಸಮಾರಂಭ ಆಯೋಜಿಸುತ್ತಿದ್ದೇವೆ. ಸಿಎಂ ಸ್ಥಾನದ ಆಕಾಂಕ್ಷಿ ಎಂದು ಬಿಂಬಿಸಿಕೊಳ್ಳುವ ಪ್ರಶ್ನೆಯೇ ಇದರಲ್ಲಿಲ್ಲ. ಪಕ್ಷಕ್ಕೆ ಮೊದಲು ಬಹುಮತ ಬರಬೇಕು. ನಂತರ ಶಾಸಕರು, ಶಾಸಕಾಂಗದ ನಾಯಕನನ್ನು ಆಯ್ಕೆ ಮಾಡಬೇಕು. ಹೈಕಮಾಂಡ್ ತನ್ನ ನಿಲುವು ತಿಳಿಸಿದವರು ಸಿಎಂ ಆಗುತ್ತಾರೆ. ಈಗಲೇ ಅದನ್ನು ಬಿಂಬಿಸಿಕೊಳ್ಳುವ ಅಗತ್ಯ ಯಾರಿಗೂ ಇಲ್ಲ ಎಂದಿದ್ದಾರೆ. ಇದನ್ನೂ ಓದಿ : ಗಣಿತ ನೋಟ್ಸ್ ತರದಿದ್ದಕ್ಕೆ ಶಿಕ್ಷಕನಿಂದ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ
ಮೈಸೂರಿನಲ್ಲಿ ಸಂಸದ ಪ್ರತಾಪಸಿಂಹ ವರ್ಸಸ್ ಕಾಂಗ್ರೆಸ್ ವಿಚಾರವಾಗಿ ಮಾತನಾಡಿದ ಅವರು, ಪ್ರತಾಪ್ಸಿಂಹ ಮಾಡದ ಕೆಲಸ ಮಾಡಿದೆ ಅಂತಾ ಹೇಳುತ್ತಿದ್ದಾರೆ. ಮೈಸೂರಿಗೆ ಸಿದ್ದರಾಮಯ್ಯ ಏನು ಮಾಡಿದ್ದಾರೆ ಅಂತಾ ಪ್ರಶ್ನಿಸಿದ್ದರು. ಅದೇ ಕಾರಣಕ್ಕೇ ಈ ರೀತಿಯ ವಾತಾವರಣ ನಿರ್ಮಾಣವಾಗಿದೆ. ಪ್ರತಾಪಸಿಂಹ ಏನು ಮಹಾರಾಜರಾ? ದೊಡ್ಡ ನಾಯಕರೇ ಬೇಕು ಚರ್ಚೆಗೆ ಏನುವುದಕ್ಕೆ? ಸಿದ್ದರಾಮಯ್ಯ ಅವರೇ ಬರಬೇಕಾ? ಕೆಲಸ ಮಾಡಿದ್ದರೆ ಯಾರೇ ಕರೆದರು ಚರ್ಚೆಗೆ ಬರಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.