ವಿಜಯಪುರ: ವರದಕ್ಷಿಣೆ ತರುವಂತೆ ಪತಿ ಹಾಗೂ ಕುಟುಂಬಸ್ಥರು ಮಹಿಳೆಯನ್ನು ಮನೆಯಿಂದ ಹೊರಹಾಕಿದ ಘಟನೆ ವಿಜಯಪುರ ತಾಲೂಕಿನ ಸಾರವಾಡ ಗ್ರಾಮದಲ್ಲಿ ನಡೆದಿದೆ.
ಶೈಲಾಬಾಯಿ ಸುರೇಶ್ ವಾಲಿ ವರದಕ್ಷಿಣೆ ಕಿರುಕುಳಕ್ಕೆ ಒಳಗಾದ ಪತ್ನಿಯಾಗಿದ್ದು, ಈಕೆಯ ಪತಿ ಸುರೇಶ್ ವಾಲಿ ಹಾಗೂ ಈತನ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಮಾನಸಿಕ ಹಿಂಸೆ ನೀಡಿ ಮನೆಯಿಂದ ಹೊರಹಾಕಿದ್ದಾರೆ. ಈಗ ಶೈಲಾಬಾಯಿ ನನಗೆ ಪತಿ ಬೇಕೆಂದು ಸುರೇಶ್ ವಾಲಿ ಮನೆ ಮುಂದೆ ಕಳೆದ 6 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ.
ಸುರೇಶ್ ಹಾಗೂ ನಾನು ಮದುವೆಯಾಗಿ 7 ವರ್ಷಗಳಾಗಿವೆ. ಆದರೆ ಸುರೇಶ್ ಈಗ ತಾಯಿ ಹಾಗೂ ತಂಗಿಯ ಮಾತು ಕೇಳಿ ನನಗೆ ವರದಕ್ಷಿಣೆ ತರುವಂತೆ ಪೀಡುಸುತ್ತಿದ್ದಾರೆ. ಎರಡು ಸಾರಿ ತವರು ಮನೆಗೆ ಹೋಗಿ ವರದಕ್ಷಿಣೆ ತಂದು ಕೊಟ್ಟರೂ ಸುರೇಶ್ ಮನೆಯವರಿಗೆ ವರದಕ್ಷಿಣೆ ದಾಹ ತಿರಿಲ್ಲ. ನಮಗೆ ಇನ್ನು ವರದಕ್ಷಿಣೆ ಬೇಕು ಎಂದು ಹೇಳಿ ನನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ ಎಂದು ಶೈಲಾಬಾಯಿ ಆರೋಪಿಸಿದ್ದಾರೆ.
ನನಗೆ 5 ವರ್ಷದ ಹೆಣ್ಣು ಮಗಳು ಕೂಡ ಇದ್ದು, ಗಂಡ ಮನೆಯಿಂದ ಹೊರಹಾಕಿದ ಹಿನ್ನೆಲೆಯಲ್ಲಿ ಅದೇ ಊರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದೆ. ಆದರೆ ಅಲ್ಲಿಯೂ ಕೂಡ ಸುರೇಶ್ ನ ಮಾತು ಕೇಳಿ ಬಾಡಿಗೆ ಮನೆ ಮಾಲೀಕ ನನ್ನನ್ನು ಹೊರಹಾಕಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ನಾನು ಈಗ ಪತಿ ಮನೆ ಎದುರು ಅಡುಗೆ ಸಾಮಗ್ರಿಗಳನ್ನು ಇಟ್ಟುಕೊಂಡು ಪ್ರತಿಭಟನೆಗೆ ಇಳಿದಿದ್ದೇನೆ ಎಂದು ಶೈಲಾಬಾಯಿ ಹೇಳಿಕೆ ನೀಡಿದ್ದಾರೆ.