ಚಾಮರಾಜನಗರ: 2006ರ ಚುನಾವಣೆಯಲ್ಲಿ (2006 Election) ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೋಸ್ಕರ (Siddaramaiah) ಒದೆ ತಿಂದಿದ್ದೇನೆ ಎಂದು ಸಚಿವ ವಿ.ಸೋಮಣ್ಣ (V Somanna) ಹೇಳಿದ್ದಾರೆ.
ಚಾಮರಾಜನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮಣ್ಣ ಯಾರು? ಎಂದಿದ್ದ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಸಿಎಂ ನಾನೇ ಎಂಬ ಅಭಿಮಾನಿಗಳ ಮಾತು ಕೇಳಿ ಖುಷಿಯೂ ಆಗುತ್ತೆ, ನೋವು ಆಗುತ್ತೆ: ಸೋಮಣ್ಣ
2006ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯಗೋಸ್ಕರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒದೆ ತಿಂದಿದ್ದೇನೆ. ಬರಿಮೈಯಲ್ಲಿ ದೇವಲಾಪುರದಿಂದ ಮೈಸೂರಿಗೆ ಹೋಗಿದ್ದೇನೆ. ಆವತ್ತು ನನ್ನ ಕಾರಿನ ಗ್ಲಾಸ್ ಒಡೆದಿದ್ರು, ಪ್ಯಾಂಟ್ ಹರಿದು ಹಾಕಿದ್ದರು. ಅಂದು ನನ್ನ ಸಮುದಾಯದವರನ್ನೇ ಎದುರು ಹಾಕಿಕೊಂಡು ಅವರಿಗೋಸ್ಕರ ಕೆಲಸ ಮಾಡಿದ್ದೆ. ಇದೆಲ್ಲಾ ಸಿದ್ದರಾಮಯ್ಯ ಸಾಹೇಬರ ತಲೇಲಿ ಇಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಲಿಂಗಾಯತರನ್ನು ಸಿಎಂ ಮಾಡುತ್ತೇವೆ ಎಂದು ಕಾಂಗ್ರೆಸ್ ಘೋಷಣೆ ಮಾಡಲಿ : ಸೋಮಣ್ಣ ಸವಾಲು
ನಾನು ಸಾಹೇಬ್ರೆ ಅಂತೀನಿ ಅವರು ಏಕ ವಚನದಲ್ಲಿ ಮಾತನಾಡ್ತಾರೆ, ಇದೇ ನನಗು ಅವರಿಗು ಇರೋ ವ್ಯತ್ಯಾಸ. ಸಿದ್ದರಾಮಯ್ಯ ಈಗ ವಿರೋಧ ಪಕ್ಷದ ನಾಯಕರೂ ಅಲ್ಲ ನಾನು ಮಂತ್ರಿನೂ ಅಲ್ಲ, ನಾನೂ ಅಭ್ಯರ್ಥಿ, ಅವರೂ ಅಭ್ಯರ್ಥಿ. ನಾನು ಅವರನ್ನು ಮುತ್ಸದ್ದಿ ನಾಯಕ ಎಂದು ಭಾವಿಸಿದ್ದೆ, ಅವರು ಅವನ್ಯಾರು, ಇವನ್ಯಾರು ಅನ್ನೋ ಡೈಲಾಗ್ ಕಡಿಮೆ ಮಾಡಿದ್ರೆ ಒಳ್ಳೇದು. ರಾಜಕೀಯದಲ್ಲಿ ತಾಳ್ಮೆ ಮುಖ್ಯ ಎಂದ ಸೋಮಣ್ಣ, ನಾನು ವರುಣಾದಲ್ಲಿ ಸ್ಪರ್ಧೆ ಮಾಡ್ತಿರೋದು ವಿಧಿ ನಿಯಮ ಎಂದು ಹೇಳಿದ್ದಾರೆ.