-ಬಹುಮತ ಸಾಬೀತಿನ ಬಗ್ಗೆ ಸಾವಿತ್ರಮ್ಮ ಚೌಲ್ಟ್ರಿ ಹತ್ರ ಗಿಣಿ ಶಾಸ್ತ್ರ ಕೇಳಿ
– ನಾನು ಲಕ್ಷ್ಮಣ ಸವದಿ 25 ವರ್ಷದ ಸ್ನೇಹಿತರು
ತುಮಕೂರು: ಹೆಸರು ಮಾತ್ರ ರೇವಣ್ಣ, ಅವರ ಕಾರ್ಯಕ್ರಮವೆಲ್ಲ ರಾವಣನ ರೀತಿ. ರಾವಣ ಎಂದು ಹೆಸರು ಇಡಬೇಕಿತ್ತು. ಅದು ಯಾಕೋ ಅವರಪ್ಪ ರೇವಣ್ಣ ಎಂದು ಇಟ್ಬಿಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕೆ.ಎನ್.ರಾಜಣ್ಣ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ನಾಯಕ ಲಕ್ಷ್ಮಣ ಸವದಿ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವ ರೇವಣ್ಣ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ರೇವಣ್ಣನ ಕಾಟಕ್ಕೆ ಯಾವ ಅತೃಪ್ತ ಶಾಸಕರು ವಾಪಸ್ ಬರೋದಿಲ್ಲ. ಯಾಕೆಂದರೆ ಅವರಿಗೆಲ್ಲ ರೇವಣ್ಣ ಅಷ್ಟೊಂದು ಕಾಟ ಕೊಟ್ಟಿದ್ದಾರೆ. ಅವರ ಹೆಸರು ಮಾತ್ರ ರೇವಣ್ಣ, ಅವರ ಕಾರ್ಯಕ್ರಮ ಎಲ್ಲಾ ರಾವಣನ ರೀತಿ. ಅವರ ಅಪ್ಪ ರಾವಣ ಎಂದು ಇಡ್ಬೇಕಿತ್ತು ಆದರೆ ರೇವಣ್ಣ ಎಂದು ಇಟ್ಟುಬಿಟ್ಟಿದ್ದಾರೆ. ಸರ್ಕಾರ ಬೀಳೋಕೆ ರೇವಣ್ಣನೇ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಬಹುಮತ ಸಾಬೀತು ವಿಚಾರವಾಗಿ ಮಾತನಾಡಿ, ರಾಜ್ಯದಲ್ಲಿ ಸರ್ಕಾರವೇ ಇಲ್ಲ. ವಿಶ್ವಾಸ ಮತ ಸಾಬೀತು ಹೇಗೆ? ಸರ್ಕಾರವೇ ಇಲ್ಲ ಅಂದ ಮೇಲೆ ಬಹುಮತ ಸಾಬೀತು ಫಲಿತಾಂಶ ಯಾಕೆ ಕೇಳ್ತೀರಾ? ಚುನಾವಣೆಯಲ್ಲಿ ನಿಲ್ಲೋ ಎಲ್ಲರೂ ಗೆಲುತ್ತೇವೆ ಅಂತಲೇ ಹೇಳೋದು. ಸೋಲುತ್ತೇವೆ ಎಂದು ಯಾರೂ ಹೇಳಲ್ಲ. ಫಲಿತಾಂಶ ಬಂದ ಮೇಲೆ ಯಾರು ಸೋಲ್ತಾರೆ, ಯಾರು ಗೆಲ್ತಾರೆ ಎಂದು ಗೊತ್ತಾಗುತ್ತದೆ. ನಮಗೆ ಯಾವತ್ತೂ ಸುಳ್ಳು ಹೇಳಿ ಅಭ್ಯಾಸ ಇಲ್ಲ, ನಿಜ ಹೇಳೋದಾದರೆ ಸರ್ಕಾರವೇ ಇಲ್ಲ. ಬಹುಮತ ಸಾಬೀತಿನ ಬಗ್ಗೆ ಸಾವಿತ್ರಮ್ಮ ಚೌಲ್ಟ್ರಿ ಹತ್ರ ಗಿಣಿ ಶಾಸ್ತ್ರ ಕೇಳಿ ಎಂದು ಕಿಡಿಕಾರಿದರು.
ಲಕ್ಷ್ಮಣ ಸವದಿ ನನ್ನನ್ನು ಬಿಜೆಪಿಗೆ ಕರೀಲಿಲ್ಲ. ನಾನು ಅವರನ್ನ ಕಾಂಗ್ರೆಸ್ಸಿಗೆ ಕರೆದಿಲ್ಲ. ಅವರು ನಾನು 25 ವರ್ಷಗಳ ಸ್ನೇಹಿತರು. ಕಾರ್ಯಕ್ರಮದ ನಿಮಿತ್ತ ತುಮಕೂರಿಗೆ ಬಂದು ನನ್ನನ್ನ ಭೇಟಿ ಮಾಡಿದ್ದಾರೆ. ಸೌಜನ್ಯಯುತ ಭೇಟಿಗೆ ಯಾವುದೇ ರಾಜಕೀಯ ಲೇಪನ ಬೇಡ. ಲೂಟಿಕೋರರು ಹೋಗಲಿ ಅನ್ನೋ ಅವರ ಉದ್ದೇಶಕ್ಕೆ ನನ್ನ ಸಹಮತ ಇದೆ ಎಂದರು.