– ಯಾರ ಬಳಿಯೂ ಮಂತ್ರಿ ಸ್ಥಾನ ಕೇಳಲ್ಲ
– ಸುಮಲತಾರಿಗೆ ನಿಂದಿಸಿದ್ದೇ ಸೋಲಿಗೆ ಕಾರಣ
– ತಂತ್ರಗಾರಿಕೆಯನ್ನ ಹೆಣೆದು ಎಚ್ಡಿಡಿಯನ್ನು ಸೋಲಿಸಲಾಯ್ತು
ಬೆಂಗಳೂರು: ನಾನು ಯಾರನ್ನು ಬೇಕಾದ್ರು ಎದುರಿಸಬಲ್ಲೆ, ಆದರೆ ದೇವೇಗೌಡರನ್ನು ಮಾತ್ರ ಎದುರಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಈಗಾಗಲೇ ಜೆಡಿಎಸ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಚ್ ವಿಶ್ವನಾಥ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪಕ್ಷದವರು ನನಗೆ ಕಾರು ಕೊಟ್ಟಿದ್ದಾರೆ. ಆ ಕಾರಿನಲ್ಲಿ ನಾನು ಜೆಪಿ ಭವನದಲ್ಲಿರುವ ಜೆಡಿಎಸ್ ಕಚೇರಿಗೆ ಹೋಗಿ ರಾಷ್ಟ್ರೀಯ ಅಧ್ಯಕ್ಷರ ಟೇಬಲ್ ಮೇಲೆ ರಾಜೀನಾಮೆ ಪತ್ರ ಇಟ್ಟು ಬರುತ್ತೇನೆ. ಸಂಜೆ ದೇವೇಗೌಡರು ಬಂದು ನೋಡುತ್ತಾರೆ. ಸಂಜೆ ನಾನು ಶಾಸಕರ ಸಭೆಗೆ ಹೋಗುತ್ತೇನೆ ಎಂದಿದ್ದಾರೆ.
ನಾನು ಯಾರನ್ನು ಬೇಕಾದ್ರು ಎದುರಿಸಬಲ್ಲೆನು. ಆದರೆ ದೇವೇಗೌಡರನ್ನು ಎದುರಿಸಲು ನನ್ನಿಂದ ಆಗಲ್ಲ. ಹೀಗಾಗಿ ನಾನು ಅವರ ಕಚೇರಿಗೆ ತೆರಳಿ ಅವರ ಟೇಬಲ್ ಮೇಲೆ ಪತ್ರವಿಟ್ಟು, ಕಾರನ್ನು ಅಲ್ಲೇ ಬಿಟ್ಟು ಬರುತ್ತೇನೆ ಎಂದು ಹೇಳಿದ್ದಾರೆ.
ವರಿಷ್ಠರು ಮನಸ್ಸು ಮಾಡಿದ್ದರೆ ಸಮನ್ವಯ ಸಮಿತಿಗೆ ನನ್ನನ್ನು ಸೇರಿಸಬಹುದಿತ್ತು. ದೇವೇಗೌಡರಿಗೆ ತಿರುಗಿ ಮಾತಾಡಲು ನನ್ನಿಂದ ಆಗಲ್ಲ. ಹಾಗಾಗಿ ಮೊದಲು ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಬಳಿಕ ದೇವೇಗೌಡರನ್ನ ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಸಚಿವ ಸಂಪುಟಕ್ಕೆ ಸೇರಿಸಿಕೊಂಡರೆ ಬೇಡ ಎನ್ನುವುದಿಲ್ಲ. ನಾನಾಗಿ ಯಾರ ಬಳಿಯೂ ಮಂತ್ರಿ ಸ್ಥಾನ ಕೇಳುವುದಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಹಿಗ್ಗಾಮುಗ್ಗಾ ಹೊಡೆಸಿಕೊಂಡಿದೆ. ನಾನು ಯಾಕೆ ಬಿಜೆಪಿ ಹೋಗಲಿ ಎಂದು ಹೇಳುವ ಮೂಲಕ ವಿಶ್ವನಾಥ್ ಅವರು ಬಿಜೆಪಿ ಸೇರ್ಪಡೆಯ ವಿಚಾರವನ್ನು ತಳ್ಳಿಹಾಕಿದರು.
ಸುಮಲತಾ ಮಂಡ್ಯದ ಹೆಣ್ಣು ಮಗಳು. ಯಾರು ಏನೇ ಮಾತಾಡಿದ್ರೂ ನಾನು ಕ್ಷಮೆ ಕೇಳುತ್ತೇನೆ. ಸುಮಲತಾ ಅವರನ್ನು ಜೆಡಿಎಸ್ನ ಕೆಲವರು ನಿಂದಿಸಿದ್ದರು. ಅದಕ್ಕೆ ನಾನು ರಾಜ್ಯಾಧ್ಯಕ್ಷನಾಗಿ ಅಂದೇ ಕ್ಷಮೆ ಕೇಳಿದ್ದೇನೆ. ಅವರನ್ನು ನಿಂದಿಸಿದ್ದು ಮಂಡ್ಯ ಸೋಲಿಗೆ ಕಾರಣ ಎಂದ ಅವರು, ನಾನು ಮಧ್ಯಂತರ ಚುನಾವಣೆಯನ್ನ ನಿರೀಕ್ಷೆ ಮಾಡುತ್ತಿಲ್ಲ ಅಂದರು.
ತಂತ್ರಗಾರಿಕೆಯನ್ನ ಹೆಣೆದು ದೇವೇಗೌಡರನ್ನ ತುಮಕೂರಿನ ಖೆಡ್ಡಾಗೆ ಕೆಡವಲಾಯಿತು. ನಾನು, ಶ್ರೀನಿವಾಸ್ ಪ್ರಸಾದ್ ಒಂದೇ ಕೇರಿಯವರು. ಆದರೆ ರಾಜಕಾರಣ ನಮ್ಮಿಬ್ಬರ ಸ್ನೇಹಕ್ಕೆ ಅಡ್ಡಿ ಬಂದಿಲ್ಲ. ನಾವಿಬ್ಬರೂ ಸಮಾನ ದುಃಖಿಗಳು ಎಂದರು.