ಬೆಂಗಳೂರು: ಸ್ಪೀಕರ್ ಅವರೇ ಸುಪ್ರೀ ಆಗಿರೋದರಿಂದ ಅವರ ಆದೇಶವನ್ನು ನಾವು ಯಾರೂ ಪ್ರಶ್ನೆ ಮಾಡುವುದಿಲ್ಲ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ತಿಳಿಸಿದ್ದಾರೆ.
ಇಂದು 14 ಮಂದಿಯನ್ನು ಅನರ್ಹಗೊಳಿಸಿ ಸ್ಪೀಕರ್ ರಮೇಶ್ ಕುಮಾರ್ ಅವರು ಆದೇಶ ಹೊರಡಿಸಿದ್ದರ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸ್ಪೀಕರ್ ಗೆ ಅಧಿಕಾರವಿದೆ. ಸ್ಪೀಕರೇ ಸುಪ್ರೀಂ. ಹೀಗಾಗಿ ಅವರು ಆದೇಶ ಮಾಡಿದ್ದಾರೆ. ಆದರೆ ಇದು ಸಮಂಜಸ ಹೌದೋ ಎಂದು ಪ್ರಶ್ನೆ ಮಾಡಲು ಪ್ರಾಯಶಃ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟಿಗೆ ಹೋಗುವ ಸಾಧ್ಯತೆಗಳಿವೆ ಎಂದರು.
ಸುಪ್ರೀಂ ಆದೇಶವನ್ನು ಪ್ರಶ್ನೆ ಮಾಡಬೇಕಾದಂತಹ ಸ್ಥಳ ಬೇರೆ ಇದೆ. ಹೀಗಾಗಿ ಅದನ್ನು ಪ್ರಶ್ನೆ ಮಾಡಲು ಇಷ್ಟ ಪಡುವುದಿಲ್ಲ. ಸ್ಪೀಕರ್ ತಮ್ಮ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಆದರೂ ಸ್ಪೀಕರ್ ಅವರು ಅತೃಪ್ತ ಶಾಸಕರನ್ನು ವಿಚಾರ ನಡೆಸಿ ಈ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಅದು ಮಾಡಿಲ್ಲ ಅನ್ನೋ ಲೋಪ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮೈತ್ರಿ ಸರ್ಕಾರ ಒತ್ತಡವಿತ್ತು ಎಂದು ಅನಿಸುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯಾವುದೇ ಕಾರಣಕ್ಕೂ ಸ್ಪೀಕರ್ ವಿರುದ್ಧ ಆರೋಪ ಮಾಡಲ್ಲ. ಆದರೆ ಸ್ಪೀಕರ್ ಆದೇಶದಿಂದ ಸಣ್ಣಮಟ್ಟಿನಲ್ಲಿ ಸಂಶಯದ ವಾತಾವರಣ ಸೃಷ್ಟಿ ಮಾಡಿದೆ ಎಂದರು.