ಕೋಲ್ಕತ್ತಾ: ಜೈ ಶ್ರೀರಾಮ್ ಘೋಷಣೆ ಕೂಗುತ್ತಲೇ ಕೋಲ್ಕತ್ತಾಗೆ ಹೋಗುತ್ತೇನೆ. ಘೋಷಣೆ ಕೂಗುತ್ತಲೇ ಅಲ್ಲಿಂದ ಮರಳುತ್ತೇನೆ. ಧಮ್ ಇದ್ದರೆ ನನ್ನನ್ನು ತಡೆಯಲಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿಕಾರಿದ್ದಾರೆ.
ಪಶ್ಚಿಮ ಬಂಗಾಳದ ಜಾಯ್ನಗರ ಲೋಕಸಭಾ ಕ್ಷೇತ್ರದಲ್ಲಿ ನಡೆದ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರೂ ದೀದಿ ಸಿಟ್ಟಾಗುತ್ತಾರೆ. ಇಂದು ನಾನು ಜೈ ಶ್ರೀರಾಮ್ ಘೋಷಣೆ ಕೂಗುತ್ತೇನೆ. ಮಮತಾ ಬ್ಯಾನರ್ಜಿ ಅವರೇ ನಿಮಗೆ ತಾಕತ್ತಿದ್ದರೆ ನನ್ನನ್ನು ಬಂಧಿಸಿ. ನಾಳೆ ಕೋಲ್ಕತ್ತಾದಲ್ಲಿಯೂ ಭಾಷಣ ಮಾಡುತ್ತೇನೆ ಎಂದು ವಾಗ್ದಾಳಿ ನಡೆಸಿದರು.
#WATCH BJP President Amit Shah in Joynagar, West Bengal: Mamata didi, I am chanting Jai Shri Ram here & leaving for Kolkata, arrest me if you have guts. pic.twitter.com/gw7yg8bHHU
— ANI (@ANI) May 13, 2019
ನಿಮ್ಮ ಎರಡು ಕೈಗಳನ್ನು ಮುಷ್ಠಿ ಮಾಡಿ, ಮೇಲೆತ್ತಿ. ಜೋರಾಗಿ ಜೈ ಶ್ರೀರಾಮ್ ಎಂದು ಹೇಳಿ. ಏರು ಧ್ವನಿಯಲ್ಲಿ ಘೋಷಣೆ ಕೂಗಿ ಎಂದು ಸಮಾವೇಶದಲ್ಲಿ ಸೇರಿದ್ದ ಜನರಿಗೆ ಪ್ರೇರಣೆ ನೀಡಿ, ಜೈ ಶ್ರೀರಾಮ್ ಘೋಷಣೆಯನ್ನು ಮೊಳಗಿಸಿದರು.
ಈ ಹಿಂದೆ ಹೆಲಿಕಾಪ್ಟರ್ ಇಳಿಸಲು ತಡೆವೊಡಿದ್ದ ವಿಚಾರವಾಗಿ ಮತ್ತೆ ಕಿಡಿಕಾರಿದ ಅಮಿತ್ ಶಾ ಅವರು, ಮಮತಾ ಬ್ಯಾನರ್ಜಿಯವರ ಸರ್ಕಾರ ಹೆದರಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರು ನಮ್ಮ ಪ್ರಚಾರಕ್ಕೆ ಅಡ್ಡಿಪಡಿಸಬಹುದೇ ಹೊರತು ನಮ್ಮ ಗೆಲುವಿಗಲ್ಲ ಎಂದು ಹೇಳಿದರು.
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಸಂತಿ ಪ್ರದೇಶದಲ್ಲಿ ಭಾನುವಾರ ನಡೆದಿದ್ದ ಸಮಾವೇಶದಲ್ಲಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ರಾಜ್ಯದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸುವ ಮೂಲಕ ಬಿಜೆಪಿ ತನ್ನ ಕಾರ್ಯಕರ್ತರು ಮತ್ತು ಆರ್ಎಸ್ಎಸ್ ಕಾರ್ಯಕರ್ತರನ್ನು ರಾಜ್ಯಕ್ಕೆ ಕಳುಹಿಸಿದೆ. ಈ ಮೂಲಕ ಭದ್ರತಾ ಪಡೆಯ ಸಮಸ್ತ್ರದಲ್ಲಿರುವ ಆರ್ ಎಸ್ಎಸ್ ಕಾರ್ಯಕರ್ತರು ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬ ಸಂದೇಹ ಎದುರಾಗಿದೆ ಎಂದು ದೂರಿದ್ದರು.