ಬೆಂಗಳೂರು: ಜಯದೇವ (Jayadeva Hospital) ನಿರ್ದೇಶಕ ಡಾ. ಮಂಜುನಾಥ್ (Dr. Manjunath) ಅವರ ಸೇವಾವಧಿ ಬುಧವಾರಕ್ಕೆ ಮುಕ್ತಾಯಗೊಳ್ಳಲಿದೆ. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಮಂಜುನಾಥ್ ಅವರ ಬಗ್ಗೆ ಮಾತನಾಡುತ್ತಾ ಇಂತಹ ಅಳಿಯ ಸಿಕ್ಕಿದ್ದು ನನ್ನ ಪುಣ್ಯ ಎಂದು ಹೇಳಿದ್ದಾರೆ.
ಈ ಸಂಸ್ಥೆಗೆ ಪ್ರಥಮ ಬುನಾದಿ ಹಾಕಿದವರು ಡಾಕ್ಟರ್ ಚೆನ್ನಯ್ಯ. ಅವರಿಗೂ ಮಂಜುನಾಥ್ ಕಂಡರೆ ತುಂಬಾ ಪ್ರೀತಿ. ನೀವು ಹೊರದೇಶಕ್ಕೆ ಹೋಗಿ ಕೋಟ್ಯಂತರ ರೂಪಾಯಿ ದುಡಿಯಬಹುದು. ಆದರೆ ಇಲ್ಲಿಯ ಜನರ ಕಷ್ಟ ಕೇಳಿದಷ್ಟು ತೃಪ್ತಿ ಸಿಗುವುದಿಲ್ಲ ಎಂದರು.
ನಾನು ಮತ್ತು ನನ್ನ ಶ್ರೀಮತಿ 15 ವರ್ಷ ಮಗಳು ಅನುಸೂಯ ಮನೆಯಲ್ಲಿಯೇ ಇದ್ದೆವು. ಅದು ನನ್ನ ಜೀವನದ ಸೌಭಾಗ್ಯ ಅಂತ ಹೇಳುತ್ತೇನೆ. ಇವತ್ತು ಹೆಮ್ಮೆ ಇದೆ ನನಗೆ, ಇಡೀ ರಾಷ್ಟ್ರದಲ್ಲಿ ಎರಡು ಸಾವಿರ ಬೆಡ್ ಆಸ್ಪತ್ರೆ ಬಹುಶಃ ಇಲ್ಲ ಅಂತ ನನ್ನ ಭಾವನೆ. ಸಚಿವ ಸುಧಾಕರ್ ಬಂದು ಇಲ್ಲಿ ಭಾಗವಹಿಸಿದ್ದು ಸಂತೋಷ. ಈ ಸಂಸ್ಥೆ ಆಗಿನ ದಿನಗಳನ್ನು ನೀವು ಸಹ ನೋಡಿದ್ದೀರಿ ಎಂದು ಹೇಳಿದರು. ಇದನ್ನೂ ಓದಿ: ಜ.31 ರಂದು ಜಯದೇವ ಆಸ್ಪತ್ರೆಯ ಡಾ.ಮಂಜುನಾಥ್ ನಿವೃತ್ತಿ – ಹೇಗಿತ್ತು 16 ವರ್ಷಗಳ ಜರ್ನಿ?
ನನ್ನ ಮಗ ನನ್ನ ಮಗಳ ಸೌಭಾಗ್ಯ ಅಂತ ಭಾವಿಸುತ್ತೇನೆ. ಮಂಜುನಾಥ್ ಅಂತಹ ಒಬ್ಬ ಶ್ರೇಷ್ಠ ವ್ಯಕ್ತಿ ಕೈ ಹಿಡಿದಿರುವುದು ನನ್ನ ಮಗಳ ಪುಣ್ಯ. ಅಂದು ನಾನು, ಬಡವರಿಗೆ ಸಹಾಯ ಮಾಡಬೇಕು ಅಂದರೆ ಇಲ್ಲೇ ಇರಬೇಕು ಅಂತ ಹೇಳಿದ್ದೆ. ಅದನ್ನು ಮಂಜುನಾಥ್ ಪುರಸ್ಕಾರ ಮಾಡಿದರು. ನಾನು ಎಲ್ಲೂ ಹೋಗಲ್ಲ, ಇಲ್ಲೇ ಇರುತ್ತೇನೆ ಎಂದು ಮಾತು ಕೊಟ್ಟಿದ್ದರು ಎಂದು ಹೆಚ್ಡಿಡಿ (HD Devegowda) ತಿಳಿಸಿದರು.
ಯಾವ ಶ್ರೀಗಳು ಬೇಕಾಗಿಲ್ಲ: ಮಂಜುನಾಥ್ ಅವರಿಗೆ ಪದ್ಮಶ್ರೀ ಅಥವಾ ಯಾವ ಶ್ರೀಗಳು ಬೇಕಾಗಿಲ್ಲ. ಅಂತಹ ಬಿರುದುಗಳಿಗಿಂತಲೂ ಜನತೆ ಪ್ರೀತಿ ದೊಡ್ಡದು ಅಂತ ಹೇಳಿದ್ರು. ಇವತ್ತು ಈ ಸಂಸ್ಥೆಯಲ್ಲಿ ಎಲ್ಲ ಸಿಬ್ಬಂದಿ ಕುಟುಂಬ ಎನ್ನುವ ರೀತಿ ನಡೆಸಿಕೊಂಡು ಬಂದಿದ್ದಾರೆ. ಯಾರೊಬ್ಬರ ಮನಸ್ಸನ್ನು ಕೂಡ ನೋಯಿಸದೆ ಇರೋದು ಎಲ್ಲಾ ನನಗೆ ಗೊತ್ತಿದೆ. ಇದಕ್ಕೆ ನನ್ನ ಮಗಳ ದೈವ ಭಕ್ತಿ ಸಹ ಕಾರಣ ಎಂದರು.
ಇಂದು ಈ ಕಾರ್ಯಕ್ರಮ ಅದ್ಬುತವಾಗಿ ನಡೆದಿದೆ. ಇಷ್ಟು ವರ್ಷ ಕೆಲಸ ಮಾಡಿದ ಅವರು ಇನ್ನೂ ಇರಬೇಕು ಎಂಬ ನಿರೀಕ್ಷೆ ಸಹಜ. ನೀವು ಬಿಟ್ಟು ಹೋದ ಮೇಲೆ ಏನು ಎಂಬ ಬಗ್ಗೆಯೂ ಯೋಚನೆ ಮಾಡಿ ಅಂತ ಹೇಳಿದ್ದೆ. ಮುಂದೆ ಬರುವ ಹೊಸ ನಿರ್ದೇಶಕರಿಗೆ ಆ ಶಕ್ತಿ ಸಿಗಲಿ ಅಂತ ಪ್ರಾರ್ಥನೆ ಮಾಡುತ್ತೇನೆ.
ದೇಶ-ವಿದೇಶಗಳಿಂದ ಬಂದ ಜನರಿಗೆ ಉಚಿತ ಚಿಕಿತ್ಸೆ ನೀಡಿದ್ದನ್ನು ಸ್ಮರಿಸಿಕೊಳ್ಳುತ್ತೇನೆ. ಮಂಜುನಾಥ್ ಅವರಿಗೆ ಉತ್ತಮ ಆರೋಗ್ಯ ಸಿಗಲಿ ಪ್ರಾರ್ಥನೆ ಮಾಡುತ್ತೇನೆ. ನನಗೆ ಈಗ 91 ವರ್ಷ ಇಂತಹ ಸಂದರ್ಭಕ್ಕಿಂತ ಇನ್ನೇನು ಖುಷಿ ಬೇಕು ನನಗೆ. ಇದಕ್ಕಿಂತ ಹೆಮ್ಮೆ ನನಗೆ ಏನೂ ಬೇಕಾಗಿಲ್ಲ ಎಂದು ಹೆಚ್ಡಿಡಿ ಹೇಳಿದರು.