ದಾವಣಗೆರೆ: ಬೇಡ ಜಂಗಮ ಜಾತಿ ಸರ್ಟಿಫಿಕೇಟ್ ಪಡೆಯುವ ಅರ್ಹತೆ ನನಗೆ ಆದರೆ ನಾನು ಪಡೆಯುವುದಿಲ್ಲ. ನಾನು ಜಾತ್ಯತೀತ ವ್ಯಕ್ತಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಅಭಿಪ್ರಾಯಪಟ್ಟರು.
ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೇಡ ಜಂಗಮರು ಎಸ್ಸಿ ಜಾತಿ ಪ್ರಮಾಣ ಪತ್ರ ಪಡೆಯಬಹುದು ಎಂಬ ಅರ್ಥ ಸೂಚಿಸಿದ ರೇಣುಕಾಚಾರ್ಯ ನಾನು ಬೇಡ ಜಂಗಮ ನಕಲಿ ಸರ್ಟಿಫಿಕೇಟ್ ಪಡೆದಿಲ್ಲ. ಅದರಿಂದ ಯಾವುದೇ ಲಾಭ ಪಡೆದಿಲ್ಲ. ಯಾವುದೇ ತಪ್ಪನ್ನು ಮಾಡಿಲ್ಲ. 2012ರಲ್ಲಿ ನನ್ನ ಮಗಳು ಬೇಡ ಜಂಗಮ ಸರ್ಟಿಫಿಕೇಟ್ ಪಡೆದಿದ್ದಾಳೆ. ಅದನ್ನು ವಾಪಸ್ ಮಾಡಲು ಹೇಳಿದ್ದೇನೆ. ನನ್ನ ಸಹೋದರನ ಒತ್ತಡದಿಂದ ಹೀಗಾಗಿದೆ ಎಂದು ಸಹೋದರನ ಮೇಲೆ ತಪ್ಪನ್ನು ಎತ್ತಿಹಾಕಿದರು. ಇದನ್ನೂ ಓದಿ: ದಲಿತರ ಮನೆಯಲ್ಲಿ ಬಿಜೆಪಿ ನಾಯಕರಿಂದ ಸಹಪಂಕ್ತಿ ಭೋಜನ
ಮಗಳು ಬೇಡ ಜಂಗಮ ಸರ್ಟಿಫಿಕೇಟ್ ಪಡೆದ ಬಗ್ಗೆ ಮಾತನಾಡಿ, ಇದರಲ್ಲಿ ನನ್ನದೇನೂ ತಪ್ಪಿಲ್ಲ. ಕೆಪಿಸಿಸಿ ವಕ್ತಾರರ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸುತ್ತೇನೆ. ನಾನು ಬೂಟಾಟಿಕೆಗೆ ಹೇಳುತ್ತಿಲ್ಲ, ಸದನದಲ್ಲೂ ಈ ಬಗ್ಗೆ ಚರ್ಚೆಯಾಗಿದೆ. ನಾನಾಗಲಿ, ನನ್ನ ಕುಟುಂಬದವರಾಗಲಿ ಯಾವುದೇ ಲಾಭ ಪಡೆದಿಲ್ಲ. ಬೇಡ ಜಂಗಮ ಜಾತಿಯ ಚೇತನ್ ಹಿರೇಮಠ ಎಂಬುವವರಿಗೆ 40 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗಿದೆ. ಅದು ಸಿದ್ದರಾಮಯ್ಯ ಅವಧಿಯಲ್ಲಿ ಆಗಿದೆ. ನನ್ನ ಮಗಳು ಚೇತನಾ ಯಾವುದೇ ಸೌಲಭ್ಯ ಪಡೆದಿಲ್ಲ ಎಂದರು.
ಅಂಬೇಡ್ಕರ್ರನ್ನು ಸೋಲಿಸಿದ್ದು ಕಾಂಗ್ರೆಸ್ನವರು. ಸತ್ತಾಗ ಜಾಗ ಕೊಡದಿದ್ದವರು ಕಾಂಗ್ರೆಸ್ನವರು ಅವರು ವೋಟಿಗೋಸ್ಕರ ರಾಜಕಾರಣ ಮಾಡುತ್ತಿದ್ದಾರೆ. ನಾವು ಪರಿಶಿಷ್ಟರ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಪರಿಶಿಷ್ಟರ ಅಭಿವೃದ್ದಿಗೆ ಸಾಕಷ್ಟು ಯೋಜನೆ ರೂಪಿಸಿದ್ದೇವೆ. ಸಿದ್ದರಾಮಯ್ಯ ಮೊದಲಿನಿಂದಲೂ ಕಾಂಗ್ರೆಸ್ ವಿರೋಧಿ ಹಾಗೂ ಗಾಂಧಿ ಕುಟುಂಬದ ವಿರೋಧಿಗಳಾಗಿದ್ದರು, ಅದ್ದರಿಂದ ಈ ರೀತಿಯಾಗಿ ಸಿದ್ದರಾಮಯ್ಯ ಪಕ್ಷದ ವರ್ಚಸ್ಸು ಕಡಿಮೆ ಮಾಡಲು ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ನವರು ವೀರಶೈವ ಲಿಂಗಾಯತ ಧರ್ಮ ಒಡೆಯುವ ಪ್ರಯತ್ನ ಮಾಡಿದ್ರು, ಇದೀಗ ಹಿಜಬ್ ವಿಚಾರವಾಗಿ ಕೋರ್ಟ್ ಹಾಗೂ ಸರ್ಕಾರ ಸಮವಸ್ತ್ರ ನೀತಿ ಅಂಗೀಕರಿಸಿದೆ. ಸಿದ್ದರಾಮಯ್ಯ ಮಠಾಧೀಶರನ್ನು ವಿನಾಕರಣ ಎಳೆದು ತರುತ್ತಿದ್ದಾರೆ. ಕಾಂಗ್ರಸ್ ಪಕ್ಷದ ಸರ್ವನಾಶಕ್ಕೆ ಸಿದ್ದರಾಮಯ್ಯ ಕಾರಣವಾಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಹಿಳಾ ದಿನಾಚರಣೆ – ಪತ್ನಿ ಜೊತೆ ಬಿಂದಾಸ್ ಸ್ಟೆಪ್ಸ್ ಹಾಕಿದ ಶಾಸಕ