ಹೈದರಾಬಾದ್: ಪತ್ನಿಯ ಹಲ್ಲು ವಕ್ರವಾಗಿದೆ ಎಂದು ಪತಿಯೊಬ್ಬ ತಾನು ಮದುವೆಯಾದ ಐದೇ ತಿಂಗಳಿಗೆ ತಲಾಖ್ ನೀಡಿರುವ ಘಟನೆ ಹೈದರಾಬಾದ್ ಕುಶೈಗುಡಾದಲ್ಲಿ ನಡೆದಿದೆ.
ಮುಸ್ತಾಫಾ ಮತ್ತು ರುಖ್ಸಾನಾ ಬೇಗಂ ಜೂನ್ 27 ರಂದು ಮದುವೆಯಾಗಿದ್ದು, ಮದುವೆಯಾದ ಐದೇ ತಿಂಗಳಿಗೆ ಮುಸ್ತಾಫಾ ರುಖ್ಸಾನಾ ಬೇಗಂ ಹಲ್ಲು ವಕ್ರವಾಗಿದೆ. ಈಕೆಯ ಜೊತೆ ಬಾಳಲು ನನಗೆ ಇಷ್ಟವಾಗುತ್ತಿಲ್ಲ ಎಂದು ತ್ರಿವಳಿ ತಲಾಖ್ ನೀಡಿದ್ದಾನೆ.
ಈಗ ಈ ವಿಚಾರವಾಗಿ ಪತಿ ಮುಸ್ತಾಫಾ ವಿರುದ್ಧ ರುಖ್ಸಾನಾ ಬೇಗಂ ದೂರು ನೀಡಿದ್ದು, ಮುಸ್ತಾಫಾ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಕಾಯ್ದೆಯ ಸೆಕ್ಷನ್ 498 ಎ, ವರದಕ್ಷಿಣೆ ಕಾಯ್ದೆ ಮತ್ತು ತ್ರಿವಳಿ ತಲಾಖ್ ಕಾಯ್ದೆಯ ಅಡಿ ಪ್ರಕರಣ ದಾಖಲಾಗಿದೆ. ಈ ವಿಚಾರದ ಬಗ್ಗೆ ಮಾತನಾಡಿರುವ ಸರ್ಕಲ್ ಇನ್ಸ್ ಪೆಕ್ಟರ್ ಕೆ, ಚಂದ್ರಶೇಖರ್, ಆಕೆ ವರದಕ್ಷಿಣೆ ತಂದಿಲ್ಲ ಎಂದು ತಲಾಖ್ ನೀಡಿದ್ದಾನೆ. ಆದರೆ ಆಕೆಯ ಹಲ್ಲು ವಕ್ರವಾಗಿಯೇ ಎಂದು ಕಾರಣ ನೀಡುತ್ತಿದ್ದಾನೆ ಎಂದು ಹೇಳಿದ್ದಾರೆ.
ನಮ್ಮ ಮದುವೆಯ ಸಮಯದಲ್ಲಿ ಮುಸ್ತಾಫಾ ಕುಟುಂಬದವರು ತುಂಬ ವರದಕ್ಷಿಣೆ ಕೇಳಿದ್ದರು. ಅದರಂತೆ ನಮ್ಮ ಮನೆಯವರು ನೀಡಿದ್ದರು. ಆದರೆ ಮದುವೆ ನಂತರ ನನ್ನ ಪತಿ ಮತ್ತು ಆತನ ಮನೆಯವರು ಸೇರಿಕೊಂಡು ನನಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ನಂತರ ಮುಸ್ತಾಫಾ ನಮ್ಮ ಮನೆಗೆ ಬಂದು ನನ್ನ ತಮ್ಮ ಬೈಕನ್ನು ತೆಗೆದುಕೊಂಡು ಬಂದಿದ್ದರು ಎಂದು ರುಖ್ಸಾನಾ ಬೇಗಂ ಪೊಲೀಸರಿಗೆ ಹೇಳಿದ್ದಾಳೆ.
ವರದಕ್ಷಿಣೆ ವಿಚಾರವಾಗಿ ನನ್ನ ಗಂಡನ ಮನೆಯವರು ನಿರಂತರವಾಗಿ ಹಿಂಸಿಸುತ್ತಿದ್ದರು. ನನ್ನ ಗಂಡನಿಗೆ ನನ್ನ ಹಲ್ಲು ವಕ್ರವಾಗಿ ಇರುವುದು ಇಷ್ಟವಿರಲಿಲ್ಲ. ಯಾವುಗಲೂ ಅ ವಿಚಾರದಲ್ಲಿ ನನ್ನನ್ನು ಬೈಯುತ್ತಿದ್ದರು. ವರದಕ್ಷಿಣೆ ತೆಗೆದುಕೊಂಡು ಬಾರದಕ್ಕೆ ನನ್ನನ್ನು ಒಂದು ಕೋಣೆಯಲ್ಲಿ 15 ದಿನ ಕೂಡಿ ಹಾಕಿದ್ದರು. ಆ ಸಮಯದಲ್ಲಿ ನನ್ನ ಆರೋಗ್ಯ ಹದಗೆಟ್ಟ ಕಾರಣ ನನ್ನನ್ನು ತವರು ಮನೆಗೆ ಬಿಟ್ಟು ಹೋದರು ಎಂದು ರುಖ್ಸಾನ ಹೇಳಿದ್ದಾಳೆ.
ತವರು ಮನೆಗೆ ಬಂದ ನಾನು ಸುಧಾರಿಸಿಕೊಂಡು ಮತ್ತೆ ಗಂಡನ ಮನೆಗೆ ಹೋದಾಗ ನಿನ್ನ ಹಲ್ಲು ವಕ್ರವಾಗಿದೆ. ನನಗೆ ನೀನು ಇಷ್ಟವಿಲ್ಲ ಎಂದು ಹೇಳಿ ಮುಸ್ತಾಫಾ ಮೊಬೈಲ್ ಫೋನಿನಲ್ಲೇ ತಲಾಖ್ ನೀಡಿದರು. ಈಗ ನಾನು ಈ ವಿಚಾರವಾಗಿ ಕುಶೈಗುಡಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ನನಗೆ ಈ ಪ್ರಕರಣದಲ್ಲಿ ನ್ಯಾಯ ಬೇಕು ಎಂದು ರುಖ್ಸಾನ ಮನವಿ ಮಾಡಿದ್ದಾಳೆ.