– 8 ವರ್ಷದ ಬಳಿಕ ಬಯಲಾಯ್ತು ಪತ್ನಿಯ ಕರ್ಮಕಾಂಡ
ನವದೆಹಲಿ: ಪ್ರಿಯಕರನಿಗಾಗಿ ಪತ್ನಿಯೇ ಪತಿಯನ್ನು ಕೊಂದು, ಬಳಿಕ ಪೊಲೀಸರಿಂದ ತಪ್ಪಿಸಿಕೊಳ್ಳಲು ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ರಸ್ತೆಯುದ್ದಕ್ಕೂ ಎಸೆದಿದ್ದ ಭಯಾನಕ ಪ್ರಕರಣವನ್ನು ದೆಹಲಿ ಪೊಲೀಸರು ಬೇಧಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ 2011ರಲ್ಲಿ ನಡೆದಿದ್ದ ಬರ್ಬರ ಕೊಲೆ ಪ್ರಕರಣ ಎಲ್ಲರನ್ನು ಬೆಚ್ಚಿಬೀಸಿತ್ತು. ಆದರೆ ಈ ಬರ್ಬರ ಕೊಲೆ ಪ್ರಕರಣ ಬೇಧಿಸಲು ಪೊಲೀಸರು ಸತತ 8 ವರ್ಷ ಬೇಕಾಯ್ತು. ಕೊನೆಗೂ ಸತತ ಪ್ರಯತ್ನದಿಂದ ಕೊಲೆ ಪ್ರಕರಣದ ಹಿಂದಿನ ರಹಸ್ಯ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 2011ರಲ್ಲಿ ದೆಹಲಿ ನಿವಾಸಿ ರವಿ ಕೊಲೆ ನಡೆದಿತ್ತು. ಆತನ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಆರೋಪಿಗಳು ರಸ್ತೆಯುದ್ದಕ್ಕೂ ಎಸೆದಿದ್ದರು. ಈ ಪ್ರಕರಣ ನಡೆದಾಗ ತನಿಖೆ ಕೈಗೊಂಡ ಪೊಲೀಸರು ಇದನ್ನು ಬೇಧಿಸಲು ಆಗಿರಲಿಲ್ಲ. ಹೀಗಾಗಿ ಪ್ರಕರಣವನ್ನು ದೆಹಲಿ ಕ್ರೈಂ ಬ್ರಾಂಚ್ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸುತ್ತಿದ್ದ ಕ್ರೈಂ ಬ್ರಾಂಚ್ ಪೊಲೀಸರು 8 ವರ್ಷದ ಬಳಿಕ ಪ್ರಕರಣಕ್ಕೆ ಅಂತ್ಯ ಹಾಡಿದ್ದಾರೆ. ಇದನ್ನೂ ಓದಿ:ಅಕ್ರಮ ಸಂಬಂಧವನ್ನು ಪ್ರಶ್ನಿಸಿದ ಪ್ರೇಯಸಿಯ ಪತಿಯನ್ನೇ ಕೊಂದ
ಮೃತವ್ಯಕ್ತಿ ರವಿಯನ್ನು ಆತನ ಪತ್ನಿ ಶಕುಂತಲಾ, ಪ್ರಿಯಕರ ಕಮಲ್ ಹಾಗೂ ಕಾರು ಚಾಲಕ ಸೇರಿಕೊಂಡು ಕೊಲೆ ಮಾಡಿದ್ದರು ಎಂಬುದು ಬೆಳಕಿಗೆ ಬಂದಿದೆ. 2011ರಲ್ಲಿ ಶಕುಂತಲಾ ಹಾಗೂ ರವಿ ವಿವಾಹವಾಗಿತ್ತು. ಆದರೆ ಶಕುಂತಲಾ ಕಮಲ್ನನ್ನು ಪ್ರೀತಿಸುತ್ತಿದ್ದಳು. ಆದ್ದರಿಂದ ಮದುವೆಯ ನಂತರೂ ಅವರಿಬ್ಬರು ಸೇರುತ್ತಿದ್ದರು. ಆದರೆ ಮುಂದೆ ಪತಿ ತಮ್ಮ ಪ್ರೀತಿಗೆ ಅಡ್ಡಿಯಾಗಬಹುದು ಎಂಬ ಆಲೋಚನೆ ಮಾಡಿ ರವಿಗೆ ಅಂತ್ಯ ಕಾಣಿಸಲು ಇಬ್ಬರೂ ಭಯಾನಕ ಪ್ಲಾನ್ ಮಾಡಿದ್ದರು.
ಪತಿಯನ್ನು ಕೊಲೆ ಮಾಡಲು ಶಕುಂತಲಾ 70 ಸಾವಿರ ರೂಪಾಯಿ ಖರ್ಚು ಮಾಡಿ ವಾಹನವೊಂದನ್ನೂ ರೆಡಿ ಮಾಡಿಟ್ಟಿಕೊಂಡಿದ್ದಳು. ಜೊತೆಗೆ ಅದರ ಚಾಲಕನನ್ನು ಕೂಡ ತನ್ನ ಪ್ಲಾನ್ನಲ್ಲಿ ಶಾಮೀಲು ಮಾಡಿಕೊಂಡಿದ್ದಳು. ತಂಗಿಯ ಮನೆಗೆ ಹೋಗಬೇಕು ಎಂದು ಶಕುಂತಲಾ ಪತಿಯನ್ನ ಪುಸಲಾಯಿಸಿ ಕರೆಸಿಕೊಂಡಿದ್ದಳು. ಹೀಗೆ ಕಾರಿನಲ್ಲಿ ಹೀಗುವಾಗ ಸುಳ್ಳು ನೆಪವೊಡ್ಡಿ ಕಮಲ್ ಕೂಡಾ ವಾಹನ ಹತ್ತಿಕೊಂಡ. ಬಳಿಕ ಇಬ್ಬರೂ ಸೇರಿ ಕಾರಿನಲ್ಲೇ ಪತಿಯನ್ನ ಕೊಲೆ ಮಾಡಿದರು. ಈ ಕೃತಕ್ಕೆ ಕಾರು ಚಾಲಕ ಕೂಡ ಸಾಥ್ ಕೊಟ್ಟಿದ್ದನು. ಕೊಲೆ ಮಾಡಿದ ಬಳಿಕ ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿ, ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದರ ಗುಂಡಿಯಲ್ಲಿ ರವಿಯ ಮೃತದೇಹ ಹಾಕಿ ಶಕುಂತಲಾ ಹಾಗೂ ಕಮಲ್ ಬೆಂಕಿ ಇಟ್ಟು ಸುಟ್ಟರು. ನಂತರ ಪೊಲೀಸರಿಗೆ ಈ ಬಗ್ಗೆ ತಿಳಿದರೆ ತನಿಖೆ ನಡೆಸುತ್ತಾರೆ ಎಂದು ಯೋಚಿಸಿ, ಅವರ ದಾರಿ ತಪ್ಪಿಸಲು ರವಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಕಾರಿನಲ್ಲಿ ತೆಗೆದುಕೊಂಡು ಹೋಗಿ ಅಲ್ವಾರ್ ಹಾಗೂ ರೇವಾರಿ ಪ್ರದೇಶದ ನಡುವೆ ದಾರಿಯುದ್ದಕ್ಕೂ ಒಂದೊಂದು ತುಂಡುಗಳನ್ನು ಎಸೆದಿದ್ದರು. ಬಳಿಕ ಅಮಾಯಕರಂತೆ ನಾಟಕವಾಡಿದ್ದರು.
ಕೃತ್ಯವೆಸೆಗಿದ ನಂತರ ಆರೋಪಿಗಳು ಆರಾಮಾಗಿಯೇ ಇದ್ದರು. ಆದ್ರೆ, ಶಕುಂತಲಾ ಹಾಗೂ ಕಮಲ್ ಮೇಲೆಯೇ ಪೊಲೀಸರು ಅನುಮಾನ ಪಟ್ಟು, 2017ರಲ್ಲಿ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸಿದಾಗ ಅವರಿಬ್ಬರ ಅಕ್ರಮ ಸಂಬಂಧ ಬೆಳಕಿಗೆ ಬಂದಿತ್ತು. ಆ ಬಳಿಕ ಎಚ್ಚೆತ್ತುಕೊಂಡ ಆರೋಪಿಗಳು ಪರಾರಿಯಾಗಿದ್ದರು.
ಆದರೆ ಸೋಮವಾರ ಕಾರು ಚಾಲಕ ಹಾಗೂ ಕಮಲ್ನನ್ನು ಪೊಲೀಸರು ಬಂಧಿಸಿದಾಗ ಕೊಲೆಯ ರಹಸ್ಯ ಬೆಳಕಿಗೆ ಬಂದಿದ್ದು, ಅದನ್ನು ಕೇಳಿ ಪೊಲೀಸರೇ ದಂಗಾಗಿದ್ದಾರೆ. ಸದ್ಯ ಪೊಲೀಸರು ಇಬ್ಬರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದು, ಆರೋಪಿ ಶಕುಂತಲಾ ತಲೆಮರಿಸಿಕೊಂಡಿದ್ದಾಳೆ. ಆಕೆಯನ್ನೂ ಕೂಡ ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.