– ಘಟನೆ ಕಂಡು ಬೆಚ್ಚಿಬಿದ್ದ ಚನ್ನರಾಯಪಟ್ಟಣದ ಜನ
ಹಾಸನ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಮಾವ ಹಾಗೂ ಪತ್ನಿಯ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದ ವಿಜಯ ಬ್ಯಾಂಕ್ ಬಳಿ ನಡೆದಿದೆ.
ಪ್ರಕಾಶ್ (55) ಮೃತಪಟ್ಟ ದುರ್ದೈವಿಯಾಗಿದ್ದು, ಮಗಳು ದಿವ್ಯಾ (35) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸಿದ್ದಾರೆ. ಆರೋಪಿ ಅಳಿಯ ನಾಗೇಂದ್ರ ಕೃತ್ಯ ಎಸಗಿದ್ದು, ಸ್ಥಳದಿಂದ ಪರಾರಿಯಾಗಿದ್ದಾನೆ.
ಏನಿದು ಘಟನೆ?
ದಿವ್ಯಾರನ್ನು ಕಳೆದ 6 ವರ್ಷಗಳ ಹಿಂದೆ ನಾಗೇಂದ್ರ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ದಿವ್ಯಾ ಗಂಡನ ಮನೆ ತೊರೆದು ತವರು ಮನೆ ಸೇರಿದ್ದರು. ಪತಿಯಿಂದ ವಿಚ್ಛೇದನ ಪಡೆಯಲು ಬಯಸಿದ್ದ ಕಾರಣ ಇಂದು ವಕೀಲರ ಬಳಿ ತೆರಳಿ ಸಹಿ ಹಾಕಲು ಅಪ್ಪ, ಮಗಳು ನಗರಕ್ಕೆ ಬಂದಿದ್ದರು. ಈ ವೇಳೆ ಬೈಕಿನಲ್ಲಿ ಹಿಂಬದಿಯಿಂದ ಬಂದ ಆರೋಪಿ ನಾಗೇಂದ್ರ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ.
ಘಟನೆ ನಡೆದ ವೇಳೆ ಸಾಕಷ್ಟು ಜನರು ಸ್ಥಳದಲ್ಲೇ ಇದ್ದರೂ ಕೂಡ ಕ್ಷಣಾರ್ಧದಲ್ಲಿ ನಡೆದ ಘಟನೆಯಿಂದ ಭಯಭೀತರಾಗಿದ್ದರು. ಪತ್ನಿಯಿಂದ ವಿಚ್ಛೇದನ ಪಡೆಯಲು ಇಷ್ಟವಿಲ್ಲದ ಕಾರಣ ಆರೋಪಿ ನಾಗೇಂದ್ರ ಕೃತ್ಯ ನಡೆಸಿದ್ದಾನೆ ಎಂಬ ಮಾಹಿತಿ ಸದ್ಯ ಲಭ್ಯವಾಗಿದೆ. ಅಲ್ಲದೇ ಕೃತ್ಯಕ್ಕೆ ಹೊಸ ಮಚ್ಚು ಕೂಡ ಖರೀದಿ ಮಾಡಿದ್ದ ಎನ್ನಲಾಗಿದೆ. ಘಟನೆಯಲ್ಲಿ ಪ್ರಕಾಶ್ ಅವರ ಕತ್ತಿನ ಭಾಗಕ್ಕೆ ಗಂಭೀರವಾದ ಗಾಯವಾದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇತ್ತ ಇಬ್ಬರ ಮೇಲೆ ಹಲ್ಲೆ ನಡೆಸಿದ ನಾಗೇಂದ್ರ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಚನ್ನರಾಯಪಟ್ಟಣ ನಗರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
https://www.youtube.com/watch?v=NCdmjBRRt60
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv