ಪತ್ನಿಯನ್ನು ಕೊಚ್ಚಿ ಕೊಂದು ಮನೆಗೆ ಬೀಗ ಹಾಕಿ ಪರಾರಿಯಾದ ಪಾಪಿ ಪತಿ

Public TV
2 Min Read
hassan 3 1

ಹಾಸನ: ಪತ್ನಿಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಂದು ಮನೆಗೆ ಬೀಗ ಹಾಕಿ ಪತಿ ಪರಾರಿಯಾಗಿರುವ ಘಟನೆ ಹಾಸನ (Hassan) ಜಿಲ್ಲೆಯ ಸಕಲೇಶಪುರ (Sakleshpura) ತಾಲೂಕಿನ ತಂಬ್ಲಿಗೇರಿ ಗ್ರಾಮದಲ್ಲಿ ನಡೆದಿದೆ.

hassan 4

ರತ್ನಮ್ಮ (58) ಕೊಲೆಯಾದ ಮಹಿಳೆಯಾಗಿದ್ದು, ಆರೋಪಿ ಪತಿಯನ್ನು 65 ವರ್ಷದ ಪರಮೇಶ್ ಎಂದು ಗುರುತಿಸಲಾಗಿದೆ. ಸಂಬಂಧಿಕರು ಮನೆಗೆ ಆಮಂತ್ರಣ ಕೊಡಲು ಬಂದಾಗ ಮನೆಯಿಂದ ದುರ್ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡ ಪುತ್ರನಿಗೆ ಫೋನ್ ಮಾಡಿ ತಿಳಿಸಿದ್ದು ಮನೆಯ ಬೀಗ ಒಡೆದು ನೋಡಿದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪ್ಯಾಂಟ್ ಜಿಪ್ ತೆಗೆದು ಬಸ್‍ನಲ್ಲಿ ವೈದ್ಯೆ ಜೊತೆ ಅಸಭ್ಯ ದುರ್ವತನೆ – ಕ್ಲೀನರ್ ಅರೆಸ್ಟ್

hassan 1 1

ಹೌದು, ಮೂವತ್ತು ವರ್ಷಗಳ ಹಿಂದೆ ರತ್ನಮ್ಮ ಹಾಗೂ ಪರಮೇಶ್ ವಿವಾಹವಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಇಬ್ಬರಿಗೂ ಮದುವೆ ಮಾಡಿದ್ದರು. ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ ಇದ್ದರು. ನಾಲ್ಕು ಎಕರೆ ಕಾಫಿ ತೋಟವಿದ್ದು, ದಂಪತಿ ಕಷ್ಟಪಟ್ಟು ದುಡಿಯುತ್ತಿದ್ದರು. ರತ್ನಮ ಹೊಸ ಮನೆ ಕಟ್ಟಬೇಕೆಂಬ ಮಹಾದಾಸೆ ಇಟ್ಟುಕೊಂಡಿದ್ದರು. ಕಾಫಿಯಲ್ಲಿ ಬಂದ ಹಣದಲ್ಲಿ ಹೊಸ ಮನೆ ನಿರ್ಮಾಣ ಮಾಡುತ್ತಿದ್ದರು. ಮದುವೆಯಾದಗಿನಿಂದಲೂ ಪರಮೇಶ್ ಸಣ್ಣಪುಟ್ಟ ವಿಚಾರಕ್ಕೆ ಜಗಳ ತೆಗೆದು ಪತ್ನಿಗೆ ಮನಸ್ಸೋ ಇಚ್ಛೆ ಹಲ್ಲೆ ಮಾಡುತ್ತಿದ್ದ. ಮಗ ಬೆಳಗಾವಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಮಕ್ಕಳಿಬ್ಬರು ಪ್ರತಿನಿತ್ಯ ಅಮ್ಮನಿಗೆ ಫೋನ್ ಮಾಡಿ ಮಾತನಾಡುತ್ತಿದ್ದರು.

hassan 4 1

ಪರಮೇಶ್ ತೋಟದ ಕೆಲಸ ಬಿಟ್ಟರೆ ಮನೆ, ಮನೆ ಬಿಟ್ಟರೆ ತೋಟದ ಕೆಲಸ ಮಾಡಿಕೊಂಡಿದ್ದ. ಆದರೆ ಪದೇ ಪದೇ ಹಣಕಾಸು ಸೇರಿ ಸಣ್ಣ ವಿಚಾರಗಳಿಗೆ ಪತ್ನಿ ಜೊತೆ ಜಗಳವಾಡಿ ಹಲ್ಲೆ ಮಾಡುತ್ತಿದ್ದ. ಪರಮೇಶ್ ಈ ಹಿಂದೆ ರತ್ನಮ್ಮ ತಲೆಗೆ ಬಲವಾಗಿ ಹೊಡೆದಿದ್ದ, ಇನ್ನೊಮ್ಮೆ ಬೆರಳು ತುಂಡು ಮಾಡಿದ್ದ. ಗಂಡ ಹೆಂಡತಿ ಜಗಳವಾಡಿದ ಸಂದರ್ಭದಲ್ಲಿ ಸಂಬಂಧಿಕರ ಮನೆಗೆ ಹೋಗಿ ಕೆಲ ದಿನಗಳು ಇದ್ದು ವಾಪಾಸ್ ಬರುತ್ತಿದ್ದ. ಅಳಿಯ, ಸಂಬಂಧಿಕರು ಪಂಚಾಯತಿ ಮಾಡಿ ಹೊಂದಿಕೊಂಡು ಹೋಗುವಂತೆ ತಿಳಿ ಹೇಳಿದ್ದರು. ಪರಮೇಶ್ ಜಗಳವಾಡುವುದನ್ನು ನಿಲ್ಲಿಸಿರಲಿಲ್ಲ. ಆದರೆ ಯಾವಾಗಲೂ ಪತ್ನಿಯನ್ನು ಕಡಿಯುತ್ತೇನೆ ಎನ್ನುತ್ತಿದ್ದ. ಇದನ್ನೂ ಓದಿ: ಗುಜರಾತಿನಲ್ಲಿ ನಡೆದಿರುವುದು ಕರ್ನಾಟಕಕ್ಕೂ ಮಾದರಿಯಾಗಬೇಕು: ಲೆಹರ್‌ ಸಿಂಗ್‌

hassan 2 1

ಶುಕ್ರವಾರ ಕಾಫಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ ವಿಚಾರಕ್ಕೆ ದಂಪತಿ ನಡುವೆ ಜಗಳ ಶುರುವಾಗಿದೆ. ಇದು ಅತಿರೇಕಕ್ಕೆ ಹೋಗಿ ಮಾರಕಾಸ್ತ್ರದಿಂದ ನಾಲ್ಕೈದು ಬಾರಿ ಪತ್ನಿ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನಂತರ ಮನೆಯಲ್ಲಿಯೇ ಶವವನ್ನು ಬಿಟ್ಟು ಬೀಗ ಹಾಕಿಕೊಂಡು, ಪ್ರತಿದಿನ ಜಾನುವಾರುಗಳೊಂದಿಗೆ ತೋಟಕ್ಕೆ ಹೋಗಿ ಬರುತ್ತಿದ್ದ. ಶವ ದುರ್ವಾಸನೆ ಬರಲು ಆರಂಭವಾದಾಗ ಎಸ್ಕೇಪ್ ಆಗಿದ್ದಾನೆ. ಸಂಬಂಧಿಕರು ಮದುವೆ ಆಮಂತ್ರಣ ನೀಡಲು ಮನೆ ಬಳಿ ಬಂದಾಗ ಮನೆಗೆ ಬೀಗ ಹಾಕಿದೆ. ಆಮಂತ್ರಣ ಎಸೆಯಲು ಕಿಟಕಿ ತೆರೆದಾಗ ದುರ್ವಾಸನೆ ಬಂದಿದ್ದು ಮಗನಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಅಷ್ಟರಲ್ಲಾಗಲೇ ಅಮ್ಮನ ಫೋನ್ ಸ್ವಿಚ್ ಆಫ್ ಬರುತ್ತಿದ್ದ ಕಾರಣ ಬೆಳಗಾವಿಯಿಂದ ಹೊರಟಿದ್ದ ಮಗ, ದೊಡ್ಡಪ್ಪನ ಮಗನಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾನೆ. ಕೂಡಲೇ ಮನೆ ಬಳಿ ಬಂದು ಬೀಗ ಒಡೆದು ನೋಡಿದಾಗ ರತ್ನಮ್ಮ ಶವ ಕೊಳೆ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸ್ಥಳಕ್ಕೆ ಶ್ವಾನದಳ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ. ಪದೇ ಪದೇ ದಂಪತಿ ನಡುವೆ ನಡೆಯುತ್ತಿದ್ದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *