ವಿಜಯಪುರ: ವಾಯು ವಿಹಾರಕ್ಕೆ ತೆರಳಿದ್ದ ವ್ಯಕ್ತಿಗೆ ಬೋರ್ವೆಲ್ ಕೊರೆಯುವ ಲಾರಿಯೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಜಯಪುರದಲ್ಲಿ ನಡೆದಿದೆ.
ಜಿಲ್ಲೆಯ ಇಂಡಿ ಪಟ್ಟಣದ ವಿಜಯಪುರ ರಸ್ತೆಯಲ್ಲಿ ಈ ಅವಘಡ ಸಂಭವಿಸಿದ್ದು, ಇಂಡಿ ಪಟ್ಟಣ ನಿವಾಸಿ 57 ವರ್ಷದ ಬೋಪಾಲ ಹಡಪದ ಮೃತ ದುರ್ದೈವಿ.
ಬೋಪಾಲ ಹಡಪದ ಎಂದಿನಂತೆ ಇಂದು ಕೂಡ ತನ್ನ ಪತ್ನಿ ಜೊತೆ ವಾಯು ವಿಹಾರಕ್ಕೆಂದು ಬಂದಿದ್ದರು. ಈ ವೇಳೆ ಬೊರ್ವೆಲ್ ಕೊರೆಯುವ ವಾಹನವೊಂದು ಬೋಪಾಲರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೋಪಾಲ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಪತಿ ಕಣ್ಣ ಮುಂದೆಯೇ ಸಾವನ್ನಪ್ಪಿದ್ದನ್ನು ಕಂಡು ಪತ್ನಿಗೆ ದಂಗು ಬಡಿದಂತಾಗಿದ್ದು, ಪತಿ ಶವದ ಮುಂದೆ ರೋಧಿಸುತ್ತಿರುವ ದೃಶ್ಯ ಮನಕಲಕುವಂತಿತ್ತು.
ಘಟನೆಯ ಬಳಿಕ ಚಾಲಕ ಲಾರಿ ಸಮೇತ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಇಂಡಿ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.