ಬಾಗಲಕೋಟೆ: ಹುನಗುಂದ (Hungund) ಹಾಗೂ ಇಳಕಲ್ (Ilkal) ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿಗಳಿಗೆ (Anganwadi) ಮೂರು ತಿಂಗಳಿನಿಂದ ಆಹಾರ (Food) ಸರಬರಾಜು ಆಗುತ್ತಿಲ್ಲ ಎಂಬ ಆರೋಪ ಬಂದಿದೆ.
ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಸಮರ್ಪಕ ಪೌಷ್ಟಿಕ ಆಹಾರ ಸಿಗುತ್ತಿಲ್ಲ ಎಂದು ಆ ತಾಲೂಕಿನ ಗರ್ಭಿಣಿಯರು ಆರೋಪ ಮಾಡಿದ್ದಾರೆ.
ಹುನಗುಂದ, ಇಳಕಲ್ ತಾಲ್ಲೂಕಿನ ವ್ಯಾಪ್ತಿಯಲ್ಲಿ ಒಟ್ಟು 422 ಅಂಗನವಾಡಿ ಕೇಂದ್ರಗಳಿದ್ದು, ಈ ಅಂಗನವಾಡಿಗಳಿಗೆ ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ ಸಮರ್ಪಕ ಆಹಾರ ಸಿಕ್ಕಿಲ್ಲ ಎಂದು ದೂರಿದ್ದಾರೆ. ದಾಸ್ತಾನು ಅಂಗನವಾಡಿಗಳಿಗೆ ವಿತರಣೆಯಾಗದೇ ಮೂರು ತಿಂಗಳಿನಿಂದ ರೇಷನ್ ಮಹಿಳಾ ಸಪ್ಲಿಮೆಂಟರಿ ನ್ಯೂಟ್ರಿಷನ್ ಪ್ರೊಡಕ್ಟ್ ಸೆಂಟರ್ನಲ್ಲೇ (MSPTC) ಉಳಿದಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ಹಾವೇರಿ| 3 ತಿಂಗಳಿನಿಂದ ಪಾವತಿಯಾಗಿಲ್ಲ ಅಂಗನವಾಡಿ ಟೀಚರ್ಗಳ ಸಂಬಳ
ಎಂಎಸ್ಪಿಟಿಸಿಯಿಂದ ಎಲ್ಲಾ ಅಂಗನವಾಡಿಗೆ ರೇಷನ್ ಸಾಗಿಸಬೇಕಾಗಿತ್ತು. ಆದರೆ ದಾಸ್ತಾನು ಯಾವ ಕಾರಣಕ್ಕೆ ಹಂಚಿಕೆಯಾಗಿಲ್ಲ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಜನರ ಆರೋಪವನ್ನು ಗಮನಿಸಿದಾಗ ಇಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಎದ್ದುಕಾಣುತ್ತಿದೆ.
ಈ ವಿಚಾರದ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಓ ಶಶಿಧರ್ ಕುರೇರ್ ಅವರನ್ನು ಕೇಳಿದರೆ ಎಲ್ಲಾ ಅಂಗನವಾಡಿಗಳಿಗೆ ಎರಡು ತಿಂಗಳ ದಾಸ್ತಾನು ಸರಬರಾಜು ಮಾಡಲಾಗಿದೆ. ಆದರೆ ಈ ವಿಷಯ ಈಗ ನನ್ನ ಗಮನಕ್ಕೆ ಬಂದಿದ್ದು, ಈ ಕುರಿತು ಕೂಡಲೇ ಇಲಾಖೆ ಅಧಿಕಾರಿಗಳು ಹಾಗೂ ಆ ಭಾಗದ ಸಿಡಿಪಿಓ ಅವರಿಗೆ ವರದಿ ಕೇಳಿದ್ದೇನೆ. ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದರೆ ಅವರ ವಿರುದ್ದ ಖಂಡಿತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.