ಹುಬ್ಬಳ್ಳಿ: ಜೆಡಿಸ್ನ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅವರನ್ನು ಸಮನ್ವಯ ಸಮಿತಿಗೆ ತೆಗೆದುಕೊಳ್ಳಲು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಇಷ್ಟವಿರಲಿಲ್ಲ. ಇದರ ಬಗ್ಗೆ ವಿಶ್ವನಾಥ್ ಅವರಿಗೆ ಬೇಸರವಿತ್ತು. ಅದಕ್ಕೆ ಅವರು ರಾಜೀನಾಮೆ ನೀಡಿರಬಹುದು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಈ ವಿಚಾರದ ಬಗ್ಗೆ ಜೆಡಿಸ್ ವರಿಷ್ಠ ದೇವೇಗೌಡರ ಗಮನಕ್ಕೆ ತಂದಿದ್ದರು. ಆದರೆ ಅವರು ಸರಿಯಾಗಿ ಸ್ಪಂದಿಸಿಲ್ಲ ಎಂಬ ಬೇಸರ ವಿಶ್ವನಾಥ್ ಅವರಿಗಿತ್ತು. ಅದ್ದರಿಂದ ರಾಜೀನಾಮೆ ನೀಡಿರಬಹುದು. ಎಚ್.ವಿಶ್ವನಾಥ್ ರಾಜೀನಾಮೆ ನೀಡಿದ್ದು ಸರಿಯಲ್ಲ ಎಂದು ಹೇಳಿದರು.
ವಿಶ್ವನಾಥ್ ನನ್ನ ಬಳಿಯೂ ಸಿದ್ದರಾಮಯ್ಯನ ಬಗ್ಗೆ ಇದ್ದ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರು ಇನ್ನು ಸ್ವಲ್ಪ ದಿನ ಜೆಡಿಎಸ್ನ ರಾಜ್ಯಾಧ್ಯಕ್ಷರಾಗಿ ಮುಂದುವರೆಯಬೇಕಿತ್ತು. ನಿನ್ನೆ ವಿಶ್ವನಾಥ್ಗೆ ಕರೆ ಮಾಡಿ ಮನವೊಲಿಸಲು ಯತ್ನಿಸಿದ್ದೆ. ಆದರೆ ವಿಶ್ವನಾಥ್ ಸಂಪರ್ಕಕ್ಕೆ ಸಿಗಲಿಲ್ಲ. ಅವರು ರಾಜೀನಾಮೆ ನೀಡಿದ್ದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಮೈತ್ರಿ ಸರ್ಕಾರದ ಬಗ್ಗೆ ಮಾತನಾಡಿದ ಬಸವರಾಜ್ ಹೊರಟ್ಟಿ, ಸರ್ಕಾರದ ರಚನೆ ವೇಳೆ ಹೇಳಿದಂತೆ ಕಾಂಗ್ರೆಸ್ ನಡೆದುಕೊಂಡಿಲ್ಲ. ವಿಧಾನಪರಿಷತ್ ಸಭಾಪತಿ ಸ್ಥಾನ ಜೆಡಿಎಸ್ಗೆ ನೀಡುವುದಾಗಿ ಹೇಳಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಕಾಂಗ್ರೆಸ್ ಸಭಾಪತಿ ಸ್ಥಾನ ತೆಗೆದುಕೊಂಡಿತು. ಅಷ್ಟೇ ಅಲ್ಲದೇ ಸಮನ್ವಯದ ಸಮಿತಿಯಲ್ಲಿ ಎರಡು ಪಕ್ಷದ ರಾಜ್ಯಾಧ್ಯಕ್ಷರು ಇರಬೇಕಿತ್ತು. ಎಲ್ಲ ಹಂತದಲ್ಲೂ ಸಿದ್ದರಾಮಯ್ಯ ಸರ್ಕಾರದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ ಅದು ಮೈತ್ರಿ ಸರ್ಕಾರಕ್ಕೆ ಒಳ್ಳೆಯದಲ್ಲ ಎಂದರು.
ನೀವು ರಾಜ್ಯಾಧ್ಯಕ್ಷರು ಆಗುತ್ತಿರಾ ಎಂದು ಕೇಳಿದಾಗ, ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಅಧ್ಯಕ್ಷ ಸ್ಥಾನ ನಿರ್ವಹಿಸುವ ಶಕ್ತಿಯು ನನಲಿಲ್ಲ. ಬಂಡೆಪ್ಪ ಕಾಶೆಂಪೂರ್ ಅಂತವರು ಆ ಸ್ಥಾನಕ್ಕೆ ಸೂಕ್ತ ಎಂದು ಅವರು ಆಶಯ ವ್ಯಕ್ತಪಡಿಸಿದರು.