– ಸಂತೋಷ್ ಲಾಡ್ ಸ್ಪರ್ಧೆಗೆ ಅಡ್ಡಿಯಾದ ಛಬ್ಬಿ
ಹುಬ್ಬಳ್ಳಿ: ಕಲಘಟಗಿಯೇ ನನ್ನ ಕರ್ಮಭೂಮಿ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಲಘಟಗಿ ಕ್ಷೇತ್ರದಿಂದಲೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ. ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಘೋಷಿಸಿದ್ದಾರೆ.
ಕಲಘಟಗಿ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರವಾಗಿ ಮಾಜಿ ಸಚಿವ ಸಂತೋಷ್ ಲಾಡ್ ಹಾಗೂ ನಾಗರಾಜ ಛಬ್ಬಿ ಮಧ್ಯೆ ಪೈಪೋಟಿ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕ್ಷೇತ್ರದ ಜನತೆಯೊಂದಿಗೆ ನನಗೆ ಅವಿನಾಭಾವ ಸಂಬಂಧ ಬೆಸೆದುಕೊಂಡಿದೆ. ಎರಡು ದಶಕದಿಂದ ಕಲಘಟಗಿಯೊಂದಿಗೆ ಸಂಪರ್ಕ ಹೊಂದಿದ್ದೇನೆ. ಕಳೆದ ಚುನಾವಣೆಯಲ್ಲಿ ಹಾಗೂ ಚುನಾವಣೆ ಬಳಿಕ ಕ್ಷೇತ್ರದಲ್ಲಿಯೇ ಬೀಡುಬಿಟ್ಟಿದ್ದೇನೆ. ಕ್ಷೇತ್ರದ ಪ್ರತಿ ಹಳ್ಳಿಗಳಿಗೂ ಹೋಗಿ ಜನರ ಬೇಕು-ಬೇಡಗಳಿಗೆ ಸ್ಪಂದಿಸಿದ್ದೇನೆ. ಜನರ ಒತ್ತಾಸೆಯ ಮೇರೆಗೆ ಕಲಘಟಗಿಯಿಂದ ಸ್ಪರ್ಧಿಸಲು ಮುಂದಾಗಿದ್ದೇನೆ. ಹೀಗಾಗಿ ಈ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗುವ ಪ್ರಶ್ನೆಯೇ ಉದ್ಭವಿಸದು ಎಂದಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಆರ್ಎಸ್ಎಸ್ನವರು ಅಲ್ಲ: ಸಿದ್ದರಾಮಯ್ಯ
ಕಲಘಟಗಿಯಲ್ಲೇ ಮನೆ ನಿರ್ಮಿಸುತ್ತಿದ್ದೇನೆ. ಗ್ರಾಮ ವಾಸ್ತವ್ಯ ಮಾಡುವ ಮೂಲಕ ಗ್ರಾಮದ ನೈಜ ಸಮಸ್ಯೆಗಳನ್ನು ಪಟ್ಟಿ ಮಾಡುತ್ತಿದ್ದೇನೆ. ಈಗಾಗಲೇ ಸರ್ಕಾರ ಮಟ್ಟದಲ್ಲಿ ಒತ್ತಡ ತಂದು ಅನೇಕ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇನೆ. ಕಲಘಟಗಿ ಕ್ಷೇತ್ರವನ್ನು ಮಾದರಿಯಾಗಿಸುವ ಗುರಿ ಹೊಂದಿದ್ದೇನೆ. ಪ್ರತಿ ಹಳ್ಳಿ – ಹಳ್ಳಿಗೆ ಹೋದಾಗಲೂ ಜನರು ನನ್ನ ಪರವಾಗಿ ನಿಲ್ಲುತ್ತಿದ್ದಾರೆ. ಇಂತಹ ಪ್ರಸಂಗದಲ್ಲಿ ನಾನು ಕ್ಷೇತ್ರ ತೊರೆಯುವ ಪ್ರಶ್ನೆ ಉದ್ಭವಿಸದು. ನನ್ನ ಕರ್ಮಭೂಮಿ ಕಲಘಟಗಿಯೇ ಹೊರತು ಇನ್ನಾವುದೂ ಅಲ್ಲ. ಛಬ್ಬಿ ಅವರು ಕಲಘಟಗಿಯಿಂದ ಸ್ಪರ್ಧಿಸಲಾರರು ಎನ್ನುವ ಸುಳ್ಳು ಸುದ್ದಿ ಹರಿಯ ಬಿಡುತ್ತಿದ್ದಾರೆ. ನನ್ನ ಮುಂದಿನ ರಾಜಕೀಯ ಜೀವನ ಎಂದಿರುವುದಾದರೆ ಅದು ಕಲಘಟಗಿಯಲ್ಲಿಯೇ ಎಂದು ನಾಗರಾಜ ಛಬ್ಬಿ ಘೋಷಿಸಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಮಾತು ವೇದವಾಕ್ಯ ಅಲ್ಲ: ಸಿದ್ದರಾಮಯ್ಯ
ನಾನು ಕಾಂಗ್ರೆಸ್ಸಿನ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಪಕ್ಷವೂ ಅಭ್ಯರ್ಥಿಯಾಗಿ ಘೋಷಿಸಿ, ಟಿಕೆಟ್ ಕೊಟ್ಟು ನನ್ನನ್ನು ಹಾರೈಸಲಿದೆ. ಈ ಬಗ್ಗೆ ಯಾವುದೇ ಸಂದೇಹವಿಲ್ಲ. ದಾರಿ ತಪ್ಪಿಸುವವರಿಗೆ ಜನ ತಕ್ಕಪಾಠ ಕಲಿಸಲಿದ್ದಾರೆ ಎಂದು ನಾಗರಾಜ ಛಬ್ಬಿ ಪರೋಕ್ಷವಾಗಿ ಸಂತೋಷ ಲಾಡ್ ಗೆ ಸವಾಲು ಎಸೆದಿದ್ದಾರೆ. ಇದನ್ನೂ ಓದಿ: ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ – ಸಿದ್ದರಾಮಯ್ಯ ವಿರುದ್ಧ ಹೆಚ್ಡಿಕೆ ಟ್ವೀಟ್ ವಾರ್