ಜನಾರ್ದನ ರೆಡ್ಡಿ ರಾತ್ರೋರಾತ್ರಿ ಮೊಳಕಾಲ್ಮೂರಿನಿಂದ ಪರಾರಿಯಾಗಿದ್ದು ಹೇಗೆ? ಈಗ ಎಲ್ಲಿದ್ದಾರೆ?

Public TV
1 Min Read
Janardhan Reddy ALI KHAN

ಬೆಂಗಳೂರು: ಅಂಬಿಡೆಂಟ್ ಚೀಟಿಂಗ್ ಕೇಸ್ ನಲ್ಲಿ ಸಿಸಿಬಿ ಪೊಲೀಸರು ತನ್ನನ್ನು ವಶಕ್ಕೆ ಪಡೆಯಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಗಣಿಧಣಿ ಜನಾರ್ದನ ರೆಡ್ಡಿ ರಾತ್ರೋರಾತ್ರಿ ಕರ್ನಾಟಕವನ್ನು ತೊರೆದು ಆಂಧ್ರಕ್ಕೆ ಪರಾರಿಯಾಗಿದ್ದಾರೆ.

ಚೀಟಿಂಗ್ ಕೇಸ್ ನಲ್ಲಿ ರೆಡ್ಡಿ ಪಾತ್ರ ಇದೆ ಎನ್ನುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಸಿಸಿಬಿ ಜನಾರ್ದನ ರೆಡ್ಡಿಯ ಚಲನವಲನದ ಮೇಲೆ ಕಣ್ಣಿಟ್ಟಿತ್ತು. ಈ ಮಾಹಿತಿ ಸಿಸಿಬಿಯಿಂದಲೇ ಸೋರಿಕೆಯಾಗುತ್ತಿದ್ದಂತೆ ಹಂತ ಹಂತವಾಗಿ ಜನಾರ್ದನ ರೆಡ್ಡಿ ಸ್ಥಳ ಬದಲಾವಣೆ ಮಾಡಿಕೊಳ್ಳುತ್ತಾ ಎಸ್ಕೇಪ್ ಆಗಿದ್ದಾರೆ.

ಮೊಳಕಾಳ್ಮೂರು ತೋಟದ ಮನೆಯಿಂದ ನವೆಂಬರ್ 4ರಂದು ಕಾಲ್ಕಿತ್ತ ಜನಾರ್ದನ ರೆಡ್ಡಿ ಸಿಸಿಬಿ ತಂಡದಿಂದ ತಪ್ಪಿಸಿಕೊಳ್ಳಲು ಇಂದು ಪ್ರತಿ ಗಂಟೆಗೂ ಸ್ಥಳ ಬದಲಾವಣೆ ಮಾಡುತ್ತಿದ್ದಾರೆ.

CCB Bengaluru 2

ರೆಡ್ಡಿ ಆಪ್ತ ಅಲಿಖಾನ್ ಅಂಬಿಡೆಂಟ್ ಚೀಟಿಂಗ್ ಪ್ರಕರಣದ ಬಗ್ಗೆ ಜನಾರ್ದನ ರೆಡ್ಡಿಗೆ ಮಾಹಿತಿ ನೀಡಲು ಬೆಂಗಳೂರಿನ ಆರ್ ಟಿ ನಗರ ನಿವಾಸದಿಂದ ಮೊಳಕಾಳ್ಮೂರು ತೋಟದ ಮನೆಗೆ ನವೆಂಬರ್ 4ರಂದು ಬಂದಿದ್ದ. ಮಧ್ಯರಾತ್ರಿಯವರೆಗೆ ಅಲ್ಲಿಯೇ ವಾಸ್ತವ್ಯ ಹೂಡಿದ್ದ. ಬಳಿಕ ಅಲ್ಲಿಂದ ಇಬ್ಬರು ಸೇರಿ ಪ್ರಯಾಣ ಬೆಳೆಸಿ ನವೆಂಬರ್ 5ಕ್ಕೆ ತಿರುಪತಿ ತಲುಪಿದ್ದಾರೆ.

ತಿರುಪತಿಯಲ್ಲಿ ಮಧ್ಯಾಹ್ನದವರೆಗೂ ಇದ್ದು, ಅಲ್ಲಿಂದ ಹೈದರಾಬಾದ್‍ಗೆ ಪ್ರಯಾಣ ಬೆಳೆಸಿದ್ದಾರೆ. ಸುಮಾರು 550 ಕಿ.ಮೀ ಕಾರಿನಲ್ಲಿಯೇ ಪ್ರಯಾಣ ಮಾಡಿ ರಾತ್ರಿ 10 ಗಂಟೆಗೆ ಹೈದರಾಬಾದ್ ತಲುಪಿದ್ದಾರೆ. ಬಳಿಕ ಜ್ಯೂಬಿಲಿ ಹಿಲ್ಸ್‍ಗೆ ರಾತ್ರಿ 11 ಗಂಟೆಗೆ ಬಂದು ಸ್ನೇಹಿತನ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಸಿಸಿಬಿ ತಂಡದಿಂದ ವಶಕ್ಕೆ ಪಡೆಯಲು ಸಿದ್ಧತೆ ನಡೆದಿದೆ ಅಂತಾ ಸುದ್ದಿ ಗೊತ್ತಾಗುತ್ತಿದ್ದಂತೆ ಪರಾರಿಯಾಗಿದ್ದಾರೆ.

Janardhana Reddy CCB 1

ಹೈದ್ರಾಬಾದ್‍ನಿಂದ ಬೆಳಗ್ಗೆ ನಿರ್ಗಮನವಾಗಿದ್ದಾರೆ. ಸದ್ಯದ ಬೆಳವಣಿಗೆ ಪ್ರಕಾರ ಪ್ರತಿ ಗಂಟೆ ಗಂಟೆ ಜನಾರ್ದನ ರೆಡ್ಡಿ ಸ್ಥಳ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಹೈದ್ರಾಬಾದ್‍ನಿಂದ ವಿಜಯವಾಡ ಕಡೆ ಪ್ರಯಾಣ ಬೆಳೆಸಿ ದಾರಿ ಮಧ್ಯೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಸಿಕ್ಕಿದೆ.

ಮೂರು ತಂಡ ರಚನೆ: ರೆಡ್ಡಿಯನ್ನು ಹುಡುಕಲು ಬೆಂಗಳೂರು ಸಿಸಿಬಿ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದು ಹೈದರಾಬಾದ್, ಬೆಂಗಳೂರು, ಬಳ್ಳಾರಿಯಲ್ಲಿ ಶೋಧ ಕಾರ್ಯ ಆರಂಭಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *