ಬೆಂಗಳೂರು: ಸತತ 9 ತಿಂಗಳ ಸುದೀರ್ಘ ತನಿಖೆಯ ಬಳಿಕ ಎಸ್ಐಟಿ ಗೌರಿ ಲಂಕೇಶ್ವರ ಹತ್ಯೆಯ ಶಂಕಿತ ಆರೋಪಿ ಪರಶುರಾಮ್ ವಾಗ್ಮೋರೆಯನ್ನು ಬಂಧಿಸಿದ್ದಾರೆ. ಆದ್ರೆ ಪರಶುರಾಮ್ ಸಿಕ್ಕಿದ್ದು ಹೇಗೆ ಎಂಬುದರ ಬಗ್ಗೆ ಮಾಹಿತಿಗಳು ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿವೆ.
ಮಹಾರಾಷ್ಟ್ರದಲ್ಲಿ ಅಮೋಲ್ ಕಾಳೆಯ ಬಂಧನವಾದಾಗ ಆತನ ಬಳಿ ಡೈರಿಯೊಂದು ಸಿಕ್ಕಿತ್ತು. ಆ ಡೈರಿಯಲ್ಲಿ ನೂರಕ್ಕೂ ಹೆಚ್ಚು ಜನರ ಹೆಸರುಗಳನ್ನು ಬರೆಯಲಾಗಿತ್ತು. ಎಸ್ಐಟಿ ಪ್ರತಿಯೊಂದು ಹೆಸರಿನ ಹಿಂದೆ ಬಿದ್ದು ಎಲ್ಲಿಯೂ ಮಾಹಿತಿ ಸೋರಿಕೆಯಾಗದಂತೆ ರಹಸ್ಯವಾಗಿ ತನಿಖೆ ನಡೆಸಿತ್ತು. ಆ ನೂರು ಹೆಸರುಗಳಲ್ಲಿ ಪರಶುರಾಮ್ ವಾಗ್ಮೋರೆ ಹೆಸರು ಎಸ್ಐಟಿ ಅಧಿಕಾರಿಗಳನ್ನು ಸೆಳೆದಿತ್ತು.
ವಾಗ್ಮೋರೆಯ ಕಾಲ್ ಡಿಟೇಲ್ಸ್ ಪರಶೀಲಿಸಿದಾಗ ಗೌರಿ ಹತ್ಯೆಗೂ ಮುನ್ನ ಮತ್ತು ನಂತರದ ಒಂದು ತಿಂಗಳ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈ ಹಿಂದೆ ಸಿಂಧಗಿಯಲ್ಲಿ ನಡೆದ ಪಾಕಿಸ್ತಾನ ಧ್ವಜಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಇದೇ ಪರಶುರಾಮ್ ಹೈ ಡ್ರಾಮಾ ನಡೆಸಿದ್ದನು. ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟಕೊಂಡು ಭಾನುವಾರ ಪರಶುರಾಮ್ ವಾಗ್ಮೋರೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಗೌರಿ ಹತ್ಯೆಯ ವೃತ್ತಾಂತವನ್ನು ಇಂಚಿಂಚಾಗಿ ಹೊರ ಹಾಕಿದ್ದಾನೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಗೌರಿ ಹತ್ಯೆ ನಡೆದಿದ್ದು ಹೇಗೆ? – ‘ಆ’ ಆರು ಗುಂಡುಗಳ ಕಥೆ ಇಲ್ಲಿದೆ
ಯಾರು ಈ ಪರಶುರಾಮ್ ವಾಗ್ಮೋರೆ?: ವಿಜಯಪುರ ಜಿಲ್ಲೆಯ ಸಿಂಧಗಿ ಪಟ್ಟಣದ ನಿವಾಸಿ ಪರಶುರಾಮ್ ವಾಗ್ಮೋರೆ. ವಯಸ್ಸು 26, ಕಟ್ಟಾ ಹಿಂದೂವಾದಿಯಾಗಿದ್ದು, ಶ್ರೀರಾಮಸೇನೆ, ಹಿಂದೂ ಜಾಗೃತಿ ವೇದಿಕೆಯಲ್ಲೂ ಗುರುತಿಸಿಕೊಂಡಿದ್ದನು. ಈ ಹಿಂದೆ ಸಿಂಧಗಿ ತಹಶೀಲ್ದಾರ್ ಕಚೇರಿ ಬಳಿ ಪಾಕ್ ಧ್ವಜ ಹಾರಿಸಿದ ಪ್ರಕರಣದಲ್ಲಿ ಪರಶುರಾಮ್ ಹೆಸರು ಕೇಳಿ ಬಂದಿತ್ತು. ಪರಶುರಾಮ್ ಒಬ್ಬ ಶಾರ್ಪ್ ಶೂಟರ್ ಆಗಿದ್ದು, ಅಮೋಲ್ ಕಾಳೆ, ಮನೋಹರ್ ಯವಡೆಗೆ ಎಂಬವರಿಗೆ ತರಬೇತಿ ನೀಡಿದ್ದ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ. ಸಂಬಂಧಿಕರ ಅಂಗಡಿಯಲ್ಲಿ ಪರಶುರಾಮ್ ಕೆಲಸ ಮಾಡಿಕೊಂಡಿದ್ದನು.
ನನ್ನ ಮಗ ಯಾವುದೇ ತಪ್ಪು ಮಾಡಲಿಲ್ಲ. ವಿನಾಕಾರಣ ನನ್ನ ಮಗನನ್ನು ಬಂಧಿಸಿದ್ದಾರೆ. ಶ್ರೀರಾಮ ಸೇನೆ ಮತ್ತು ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದಕ್ಕೆ ಈ ರೀತಿ ಮಾಡಿದ್ದಾರೆ. ನಾವು ಕೂಲಿ ನಾಲಿ ಮಾಡಿ ಬದುಕು ಜನ. ನನ್ನ ಮಗ ಕೊಲೆ ಮಾಡುವಂತಹ ವ್ಯಕ್ತಿಯಲ್ಲ. ಭಾನುವಾರ ಬೆಳಿಗ್ಗೆ 9 ಗಂಟೆಗೆ ಎಸ್ ಐಟಿ ತಂಡ ಹಾಗೂ ಕೆಲ ಸ್ಥಳೀಯ ಪೊಲೀಸ್ ಮನೆಗೆ ಬಂದು ಪಾಕಿಸ್ತಾನ ಧ್ವಜ ಹಾರಿಸಿದ ಬಗ್ಗೆ ವಿಚಾರಣೆಗೆ ಕರೆದೊಯ್ಯುವುದಾಗಿ ತಮ್ಮ ಮಗನನ್ನು ಕರೆದುಕೊಂಡು ಹೋದರು. ಒಂದು ವೇಳೆ ಬಿಡುಗಡೆ ಮಾಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅರೋಪಿ ಪರಶುರಾಮ ವಾಗ್ಮೋರೆ ಪೋಷಕರು ಹೇಳಿದ್ದಾರೆ. ಇದನ್ನೂ ಓದಿ: ಗೌರಿ ಹತ್ಯೆ ಕೇಸ್: ಆರೋಪಿ ವಾಗ್ಮೋರೆಯಿಂದ ಎಸ್ಐಟಿ ತನಿಖೆ ದಾರಿ ತಪ್ಪಿಸೋ ಯತ್ನ!
https://www.youtube.com/watch?v=Ov8Gc1Ih8tw