ಚಾಮರಾಜನಗರ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿರುವ ಘಟನೆ ಕೊಳ್ಳೇಗಾಲ ಪಟ್ಟಣದ ಆಶ್ರಯ ಬಡಾವಣೆಯಲ್ಲಿ ನಡೆದಿದೆ.
ಪವಿತ್ರ (22) ಮೃತ ದುರ್ದೈವಿ. ಮೃತ ಪವಿತ್ರ ಕೊಳ್ಳೇಗಾಲ ತಾಲೂಕಿನ ಬಸಪ್ಪನ ಪಾಳ್ಯದ ನಿವಾಸಿಯಾಗಿದ್ದರು. ನಾಲ್ಕು ವರ್ಷದ ಹಿಂದೆ ಆಶ್ರಯ ಬಡಾವಣೆಯ ಮಹೇಶ್ ಜೊತೆ ಮದುವೆಯಾಗಿದ್ದರು. ಆದರೆ ಈಗ ಅನುಮಾನಾಸ್ಪದ ರೀತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಮೂರು ವರ್ಷಗಳಿಂದ ನನ್ನ ಮಗಳಿಗೆ ಪತಿ ಮತ್ತು ಆತನ ಮನೆಯವರು ಐದು ಲಕ್ಷ ರೂ. ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ಈಗ ಅವರೇ ಕೊಲೆ ಮಾಡಿ ನಂತರ ನೇಣು ಬಿಗಿದಿದ್ದು, ಆತ್ಮಹತ್ಯೆ ಎಂದು ಹೇಳುತ್ತಿದ್ದಾರೆ ಎಂದು ಪವಿತ್ರ ಪೋಷಕರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತ ಪವಿತ್ರ ಅವರ ತಂದೆ ಶಿವಪ್ಪ ಮಹೇಶ್ ಮತ್ತು ಆತನ ತಾಯಿ ಸಿದ್ದಮ್ಮ ವಿರುದ್ಧ ದೂರು ನೀಡಿದ್ದು, ಈ ಕುರಿತು ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.